ತೈಲ ಬೆಲೆ ಏರಿಕೆ ವಿರುದ್ಧ ಮಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು, ಫೆಬ್ರವರಿ 4: ನಗರದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ದಕ್ಷಿಣ ಕನ್ನಡ ಮಹಿಳಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಸೈಕಲ್ ಜಾಥಾ ಗುರುವಾರ ನಡೆಯಿತು. ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮಹಿಳಾ ಕಾಂಗ್ರೆಸ್ ನ ಕಾರ್ಯಕರ್ತೆಯರು ಪ್ರತಿಭಟನಾ ಜಾಥಾ ನಡೆಸಿದರು.
ಎತ್ತಿನಗಾಡಿ ತಳ್ಳಿಕೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸಿಗರು, 'ತೈಲ ಬೆಲೆ ಗಗನದಲ್ಲಿ ಪ್ರಧಾನಿ ವಿದೇಶದಲ್ಲಿ' ಎಂಬ ಪೋಸ್ಟರ್ ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಕೇಂದ್ರ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಅಭಿವೃದ್ಧಿಯ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ. ಯುಪಿಎ ಸರಕಾರದಲ್ಲಿ ತೈಲ ಬ್ಯಾರೆಲ್ ದರ ಏರಿಕೆಯಾಗಿದ್ದರೂ ದೇಶದಲ್ಲಿ ತೈಲ ಬೆಲೆ ಹೆಚ್ಚಾಗಲು ಬಿಟ್ಟಿರಲಿಲ್ಲ. ಆದರೆ ಕೇಂದ್ರ ಸರಕಾರದ ತಪ್ಪು ನಡೆಗಳಿಂದಾಗಿ ತೈಲ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಕೇಂದ್ರದಲ್ಲಿ ಬಿಜೆಪಿ ಮತ್ತೆ ಆಡಳಿತಕ್ಕೆ ಬರಬಾರದು ಎಂದು ಪ್ರತಿಭಟನಾಕಾರರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಜಾಥಾದಲ್ಲಿ ನಟಿ ಹಾಗೂ ಕಾಂಗ್ರೆಸ್ ಮುಖಂಡರಾದ ಭಾವನಾ, ಮಂಗಳೂರು ಮೇಯರ್ ಕವಿತಾ ಸನಿಲ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಶಾಲೆಟ್ ಪಿಂಟೋ ಮತ್ತಿತರರು ಭಾಗವಹಿಸಿದ್ದರು.