ಕೊರಗಜ್ಜ ದೇವಸ್ಥಾನ ಆಯ್ತು, ಇದೀಗ ಕೊಂಡಾಣ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಪತ್ತೆ
ಮಂಗಳೂರು, ಏಪ್ರಿಲ್ 5: ಕರಾವಳಿಯಲ್ಲಿ ಇತ್ತೀಚೆಗೆ ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಕೃತ್ಯಗಳನ್ನು ಕಿಡಿಗೇಡಿಗಳು ವ್ಯಾಪಕವಾಗಿ ಮಾಡುತ್ತಿದ್ದು ಕರಾವಳಿಯ ಸೌಹಾರ್ದ ಪರಂಪರೆಯನ್ನು ಕೆಡಹುವ ಯತ್ನಗಳನ್ನು ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಆರಾಧ್ಯ ದೈವ ಕೊರಗಜ್ಜನ ಸನ್ನಿಧಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಹಾಕಿ ವಿಕೃತಿ ಮೆರೆದವರು ರಕ್ತಕಾರಿ ಸಾವನ್ನಪ್ಪಿರುವ ಘಟನೆ ಎಲ್ಲರಿಗೂ ಗೊತ್ತೇ ಇದೆ.
ಕಿಡಿಗೇಡಿಗಳಿಗೆ ಕೊರಗಜ್ಜ ದೇವರೇ ಉಗ್ರ ಶಿಕ್ಷೆ ನೀಡಿದೆ ಎಂದು ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಘಟನೆ ಕಣ್ಮುಂದೆ ಇರುವಾಗಲೇ ಮತ್ತೊಂದು ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿರುವುದು ಭಕ್ತರಲ್ಲಿ ಅಸಮಾಧಾನ ಉಂಟುಮಾಡಿದೆ.
ಮಂಗಳೂರು ನಗರ ಹೊರವಲಯದ ಕೊಂಡಾಣ ಕ್ಷೇತ್ರದ ಕಟ್ಟೆ ಜಾತ್ರೆ ಕೆಲ ದಿನಗಳ ಹಿಂದಷ್ಟೆ ನಡೆದಿದ್ದು, ಆ ಪ್ರಯುಕ್ತ ಆಡಳಿತ ಸಮಿತಿಯು ಭಾನುವಾರ ಬೆಳಗ್ಗೆ ಕಾಣಿಕೆ ಹುಂಡಿಗಳನ್ನು ತೆರೆದು ಹಣ ಎಣಿಸುತ್ತಿದ್ದ ಸಂದರ್ಭ ಕೊಂಡಾಣ ಕ್ಷೇತ್ರದ ಮುಖ್ಯ ದ್ವಾರದ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದೆ.
ಎರಡು ತಿಂಗಳ ಹಿಂದೆ ಉಳ್ಳಾಲ ನಗರಸಭೆ ಕಚೇರಿ ಬಳಿಯ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಇದೇ ರೀತಿಯ ಪ್ರಕರಣ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಇಬ್ಬರು ಆರೋಪಿಗಳು ಮಂಗಳೂರಿನಲ್ಲಿ ಕೊರಗಜ್ಜನ ಕೋಲಕ್ಕೆ ಬಂದು ತಪ್ಪೊಪ್ಪಿಗೆ ಕೇಳಿದ್ದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಕಾರಣಿಕ ಕ್ಷೇತ್ರ ಕೊಂಡಾಣ ದೈವಸ್ಥಾನದಲ್ಲಿ ಆರೋಪಿಗಳು ದುಷ್ಕೃತ್ಯ ಎಸಗಿರುವುದು ಕಂಡುಬಂದಿದೆ. ಉಳ್ಳಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡು ದಿನದ ಅವಧಿಯಲ್ಲಿ ಧಾರ್ಮಿಕ ಭಾವನೆ ಕೆದಕುವ ಎರಡನೇ ಪ್ರಯತ್ನ ಇದಾಗಿದ್ದು, ಭಾನುವಾರ ನಸುಕಿನ ಜಾವ ಸುರತ್ಕಲ್ ಸಮೀಪದ ಕೃಷ್ಣಾಪುರ ಜನತಾ ಕಾಲೊನಿಯ ಮಸೀದಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರೆ, ಇದೀಗ ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಬಳಸಿದ ಕಾಂಡೋಮ್ ಪತ್ತೆಯಾಗಿದೆ.