ಮೋದಿ ಬರುವ ದಿನದಂದು ಸಾರ್ವತ್ರಿಕ ರಜೆ:ಆದೇಶ ಹಿಂಪಡೆದ ಮಂಗಳೂರು ವಿ.ವಿ.
ಮಂಗಳೂರು, ಏಪ್ರಿಲ್ 12: ಏಪ್ರಿಲ್ 13 ರಂದು ಸಾರ್ವತ್ರಿಕ ರಜೆ ರದ್ದು ಆದೇಶ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಮಂಗಳೂರು ವಿಶ್ವವಿದ್ಯಾಲಯ ಎಚ್ಚೆತ್ತುಕೊಂಡಿದೆ. ರಜೆ ರದ್ದುಪಡಿಸಿದ್ದಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವಿವಾದ ಸೃಷ್ಟಿಯಾಗುತ್ತಿದ್ದಂತೆ ರಜೆ ರದ್ದು ಆದೇಶ ಹಿಂಪಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಗಳೂರು ವಿಶ್ವವಿದ್ಯಾಲಯ ಏಪ್ರಿಲ್ 10 ರಂದು ಏಕಾಏಕಿ ಆದೇಶವೊಂದನ್ನು ಹೊರಡಿಸಿ ಏಪ್ರಿಲ್ 13 ರಂದು ಎರಡನೇ ಶನಿವಾರ ಸಾರ್ವತ್ರಿಕ ರಜೆಯನ್ನು ರದ್ದುಪಡಿಸಿ, ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸುವಂತೆ ಆದೇಶ ಹೊರಡಿಸಿತ್ತು.
ಮೋದಿ ಬರುವ ದಿನದಂದು ಸಾರ್ವತ್ರಿಕ ರಜೆ ರದ್ದುಗೊಳಿಸಿದ ಮಂಗಳೂರು ವಿಶ್ವವಿದ್ಯಾಲಯ
ಏಪ್ರಿಲ್ 13 ರಂದು ಮಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ನಡೆಯುವ ದಿನದಂದೇ ಮಂಗಳೂರು ವಿಶ್ವವಿದ್ಯಾಲಯ ಎರಡನೇ ಶನಿವಾರದ ರಜೆ ರದ್ದುಗೊಳಿಸಿ ಆದೇಶ ಹೊರಡಿಸಿತ್ತು.
ಮೋದಿ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಭಾಗವಹಿಸದಂತೆ ತಡೆಯುವ ದೃಷ್ಟಿಯಿಂದ ಏಪ್ರಿಲ್ 13 ರಂದು ಎರಡನೇ ಶನಿವಾರದ ರಜೆಯನ್ನು ವಿಶ್ವವಿದ್ಯಾಲಯ ರದ್ದುಗೊಳಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದೇಶ ಪತ್ರದಲ್ಲಿ ರಜೆ ರದ್ದುಗೊಳಿಸಿದಕ್ಕೆ ಕಾರಣ ನೀಡದಿರುವುದು ವಿವಾದಕ್ಕೆ ಗ್ರಾಸವಾಗಿತ್ತು.
ಏ.13 ರಂದು ಬಂದರು ನಗರಿಯಲ್ಲಿ ಮೋದಿ ಪ್ರಚಾರ: ಬಿಗಿ ಭದ್ರತೆಗೆ ಕ್ರಮ
ಉದ್ದೇಶಪೂರ್ವಕವಾಗಿ ಮಂಗಳೂರು ವಿಶ್ವವಿದ್ಯಾಲಯ ಈ ಆದೇಶ ಪತ್ರ ಹೊರಡಿಸಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ವಿಶ್ವವಿದ್ಯಾನಿಲಯ ರಜೆ ರದ್ದು ಆದೇಶವನ್ನು ಹಿಂಪಡೆದಿದೆ.
ಮೋದಿ ಏಪ್ರಿಲ್ 13 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿಯ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಹೊಂದಲಾಗಿದೆ.