ಮುಸ್ಲಿಂ ಧಾರ್ಮಿಕ ಮುಖಂಡರು ನಮಗೆ ಬೆಂಬಲ ನೀಡಿ: ಹಿಜಾಬ್ ವಿದ್ಯಾರ್ಥಿನಿಯರ ಮನವಿ
ಮಂಗಳೂರು, ಜೂನ್ 3: ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ನಡೆದ ಹಿಜಾಬ್ ಪ್ರಕರಣ ಮತ್ತೊಂದು ಆಯಾಮವನ್ನು ಪಡೆದಿದೆ. ಹಿಜಾಬ್ ವಿದ್ಯಾರ್ಥಿನಿಯರು ಮಂಗಳೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಬೆಂಬಲಕ್ಕೆ ಧಾರ್ಮಿಕ ಮುಖಂಡರು ಬರುವಂತೆ ಮನವಿ ಮಾಡಿದ್ದಾರೆ. ಮಂಗಳೂರು ವಿವಿ ಸಮನ್ವಯ ಸಮಿತಿಯ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ವಿದ್ಯಾರ್ಥಿನಿಯರು ತಮಗೆ ವಿವಿ ಕಾಲೇಜಿಂದ ಅನ್ಯಾಯ ಆಗಿದೆ. ವಿವಿ ಕಾಲೇಜಿನ ನಿಯಮದ ಪ್ರಕಾರವಾಗಿ ನಾವು ನಡೆದುಕೊಂಡಿದ್ದೇವೆ. ಆದರೆ ನಮಗೆ ಕಾಲೇಜಿನಲ್ಲಿ ಶೋಷಣೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಜಾಬ್ ಪರವಾಗಿರುವ ವಿದ್ಯಾರ್ಥಿನಿ ಗೌಸಿಯಾ, ಈ ಹಿಂದೆ ವಿವಿ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ. ಹೈ ಕೋರ್ಟ್ ಆದೇಶದ ಬಳಿಕವೂ ನಾವು ಹಿಜಾಬ್ ಹಾಕಿಕೊಂಡು ಹೋಗಿದ್ದೇವೆ. ಆದರೆ ಕೆಲ ದಿನಗಳ ಬಳಿಕ ರಾತ್ರೋ ರಾತ್ರಿ ಈ ಸಮಸ್ಯೆ ಆರಂಭವಾಗಿದೆ.
ಪುತ್ತೂರು ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರು ಅಮಾನತು
ಈ ವಿಚಾರದಲ್ಲಿ ನಾವು ಹಲವು ಬಾರಿ ವಿವಿ ಕುಲಪತಿ ಬಳಿಗೆ ಹೋಗಿದ್ದೆವು. ಆಗ ವಿಸಿ ಜಿಲ್ಲಾಧಿಕಾರಿ ಬಳಿ ಕೋರ್ಟ್ ಆದೇಶದ ಸ್ಪಷ್ಟನೆ ಲೆಟರ್ ತನ್ನಿ ಎಂದಿದ್ದು. ಹೀಗಾಗಿ ನಾವು ಜಿಲ್ಲಾಧಿಕಾರಿ ಬಳಿಗೆ ಹೋಗಿದ್ದೆವು, ಆದರೆ ಅವರು ಮೊದಲಿಗೆ ಸಿಗಲಿಲ್ಲ. ಆ ಬಳಿಕ ಮತ್ತೆ ಕಾಲೇಜಿಗೆ ಹೋದಾಗ ನಮ್ಮನ್ನ ಹೊರಗೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಎಬಿವಿಪಿ ಪ್ರತಿಭಟನೆ ಬಳಿಕ ನಮಗೆ ನಿರ್ಬಂಧ
ಕೋರ್ಟ್ ಆದೇಶದ ನಂತರ ಕೆಲವು ದಿನಗಳ ಕಾಲ ನಾವು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಿದ್ದೆವು. ಆದರೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವ ಬೆದರಿಕೆ ಹಾಕಿದರು. ನಂತರ ಪ್ರಾಂಶುಪಾಲರು ನಮ್ಮ ಪ್ರವೇಶ ನಿರ್ಬಂಧ ಮಾಡಿ ಆದೇಶ ಮಾಡಿದರು. ಹೀಗಾಗಿ ನಾವು ಗ್ರಂಥಾಲಯಕ್ಕೆ ಹೋಗಿ ಕುಳಿತೆವು. ಆ ಬಳಿಕ ನಮ್ಮನ್ನ ಹಿಜಾಬ್ ಧರಿಸಿ ಕ್ಯಾಂಪಸ್ ಪ್ರವೇಶಕ್ಕೂ ಅನುಮತಿ ನಿರಾಕರಿಸಲಾಯಿತು. ಎಬಿವಿಪಿ ಪ್ರತಿಭಟನೆ ಬಳಿಕ ನಮ್ಮನ್ನ ಕ್ಯಾಂಪಸ್ ನಿಂದಲೂ ಹೊರಗೆ ಹಾಕಲಾಗಿದೆ. ಆ ಬಳಿಕ ನಾವು ಸೋಮವಾದ ಜಿಲ್ಲಾಧಿಕಾರಿಯವರನ್ನು ಭೇಟಿಯಾದೆವು. ನಮ್ಮ ಜೊತೆಗೆ ನಮ್ಮ ಪೋಷಕರು ಕೂಡ ಮನವಿ ಮಾಡಿದ್ದಾರೆ ಅಂತಾ ಹೇಳಿದ್ದಾರೆ.
ಹಿಜಾಬ್ ವಿದ್ಯಾರ್ಥಿನಿಯರಿಗೆ ದೇವರು ಬುದ್ಧಿ ನೀಡಲಿ: ಯುಟಿ ಖಾದರ್
ಕಾನೂನು ಹೋರಾಟಕ್ಕೆ ಸಮಯ ವ್ಯರ್ಥ
ನಮ್ಮ ಮನವಿ ಇಷ್ಟೇ, ಕಾಲೇಜಿನ ಹಳೆಯ ವಸ್ತ್ರ ಸಂಹಿತೆ ನಿಯಮವನ್ನು ಈ ಶೈಕ್ಷಣಿಕ ವರ್ಷದಲ್ಲೂ ಮುಂದುವರಿಸಬೇಕು. ನಾವು ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಬರುತ್ತಿದ್ದೀವಿ. ಕಾಲೇಜಿನ ಈ ಸೂಚನೆ ಹಿಂದೆ ಹೈ ಕೋರ್ಟ್ ಆದೇಶ ಇಲ್ಲ. ಬದಲಾಗಿ ಎಬಿವಿಪಿ ಒತ್ತಡಕ್ಕೆ ಬಿದ್ದು ಈ ಆದೇಶ ಹೊರಡಿಸುತ್ತಿದ್ದಾರೆ. ಇದರ ಬಗ್ಗೆ ಕಾನೂನು ಹೋರಾಟ ಮಾಡಿದರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವ ಯಾವುದೇ ಉದ್ದೇಶ ಇಲ್ಲ ಅಂದಿದ್ದಾರೆ. ಎಬಿವಿಪಿ ಒತ್ತಡದಿಂದಲೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ ಎಂದು ಗೌಸಿಯಾ ಆರೋಪಿಸಿದ್ದಾರೆ.
ಜಿಲ್ಲಾಡಳಿತಕ್ಕೆ ಎರಡು ದಿನದ ಗಡುವು
ಇನ್ನು ಮಂಗಳೂರು ವಿವಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್ ಮಾತನಾಡಿ, ಮಂಗಳೂರು ವಿವಿ ಸಮನ್ವಯ ಸಮಿತಿ ಬೃಹತ್ ಹೋರಾಟ ನಡೆಸಲಿದೆ. ದ.ಕ ಜಿಲ್ಲಾಡಳಿತಕ್ಕೆ ನಾವು ಎರಡು ದಿನದ ಗಡುವು ಕೊಡುತ್ತೇವೆ. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಬೃಹತ್ ಹೋರಾಟ ನಡೆಸುತ್ತೇವೆ. ಮಂಗಳೂರಿನಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ಸರಕಾರ ಪ್ರೇರಿತವಾಗಿದೆ. ಪಠ್ಯ ಪುಸ್ತಕ ವಿವಾದ ಬದಲಿಸಲು ಹಿಜಾಬ್ ವಿವಾದ ತರಲಾಗಿದೆ. ಅವರದ್ದೇ ಎಬಿವಿಪಿ ಸಂಘಟನೆ ಕಾಲೇಜಿನಲ್ಲಿ ಗಲಭೆಗೆ ಯತ್ನಿಸುತ್ತಿದೆ. ಹೈ ಕೋರ್ಟ್ ತೀರ್ಪು ಬಂದ ಬಳಿಕ ಎರಡು ತಿಂಗಳು ಈ ಸಮಸ್ಯೆ ಇರಲಿಲ್ಲ. ಆದರೆ ಎಬಿವಿಪಿ ಒತ್ತಡದಿಂದ ಈ ವಿವಾದ ಸೃಷ್ಟಿ ಮಾಡಲಾಗಿದೆ. ಇದನ್ನ ಮಂಗಳೂರು ವಿವಿ ಸಮನ್ವಯ ಸಮಿತಿ ಖಂಡಿಸುತ್ತದೆ. ನಮ್ಮ ಸಮನ್ವಯ ಸಮಿತಿ ನಾಲ್ಕು ತಿಂಗಳಿನಿಂದ ವಿವಿ ಕಾಲೇಜಿನಲ್ಲಿ ಇದೆ. ಹೀಗಾಗಿ ಮುಸ್ಲಿಂ ಧರ್ಮದ ಮುಖಂಡರು, ನಾಯಕರು ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಲ್ಲಿಬೇಕು.
ಉಪ್ಪಿನಂಗಡಿ ವಿದ್ಯಾರ್ಥಿಗಳ ಅಮಾನತು
ಇನ್ನು ಕೋರ್ಟ್ ಆದೇಶ ಮತ್ತು ಕಾಲೇಜಿ ಆಡಳಿತ ಮಂಡಳಿಯ ಸೂಚನೆಯನ್ನು ಮೀರಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರನ್ನು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು 6 ದಿನಗಳ ಕಾಲ ಅಮಾನತು ಮಾಡಲಾಗಿದೆ. ಗುರುವಾರ ಇದನ್ನು ವಿರೋಧಿಸಿ ಒಂದು ಸಮುದಾಯದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ಅಲ್ಲದೆ ವರದಿಗೆ ತೆರಳಿದ್ದ ವರದಿಗಾರನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿತ್ತು. ಇದೀಗ ಮಂಗಳೂರು ವಿಶ್ವವಿದ್ಯಾಲಯ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್, ಉಪ್ಪಿನಂಗಡಿ ಕಾಲೇಜಿ ವಿದ್ಯಾರ್ಥಿನಿಯರು ನಮ್ಮನ್ನು ಸಂಪರ್ಕಿಸಿದರೆ ಅವರಿಗೆ ಬೆಂಬ ನೀಡುತ್ತೇವೆ ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video