ಸೈನಿಕರ ವಿರುದ್ಧದ ಪಠ್ಯಕ್ಕೆ ಕತ್ತರಿ: ಮಂಗಳೂರು ವಿವಿ ನಿರ್ಧಾರ
ಭಾರೀ ವಿವಾದಕ್ಕೆ ಗುರಿಯಾಗಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಯುದ್ಧ ಒಂದು ಉದ್ಯಮ ಲೇಖನವನ್ನು ಪಠ್ಯಕ್ರಮದಿಂದ ತೆಗೆದ ಹಾಕಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ .
ಮಂಗಳೂರು, ಆಗಸ್ಟ್ 14: ಭಾರೀ ವಿವಾದಕ್ಕೆ ಗುರಿಯಾಗಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಯುದ್ಧ ಒಂದು ಉದ್ಯಮ ಲೇಖನವನ್ನು ಪಠ್ಯಕ್ರಮದಿಂದ ತೆಗೆದು ಹಾಕಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ .
೨೦೧೭ - ೧೮ ನೇ ಶೈಕ್ಷಣಿಕ ವರ್ಷದ ಬಿಸಿಎ ಪದವಿಯ ಮೊದಲ ಸೆಮಿಸ್ಟರ್ ನ ಕನ್ನಡ ಭಾಷಾ ಬೋಧನೆಯ ಪದ ಚಿತ್ತಾರ ಪಠ್ಯದಲ್ಲಿ ಯುದ್ಧ ಒಂದು ಉದ್ಯಮ ಲೇಖನ ಬಗ್ಗೆ ಭಾರೀ ವಿವಾದ ಕ್ಕೆ ಗುರಿಯಾಗಿತ್ತು.ಬರಗೂರರ ಈ ಲೇಖನದಲ್ಲಿ ಸೈನಿಕರಿಗೆ ಅವಹೇಳನ ಮಾಡಲಾಗಿದೆ ಎಂದು ಮಾಜಿ ಸೈನಿಕರು ಕೂಡ ಲೇಖನದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು .
ವಿವಿಧ ಸಂಘಟನೆಗಳು ಕೂಡ ಈ ಲೇಖನದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿ ಪಠ್ಯವನ್ನು ಹಿಂದಕ್ಕೆ ಪಡೆಯುವಂತೆ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದವು. ವಿದ್ಯಾರ್ಥಿ ಸಂಘಟನೆಗಳು ಕೂಡ ಈ ವಿವಾದಿತ ಲೇಖನವನ್ನು ಪಠ್ಯಕ್ರಮದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದವು .
ಈ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕ ಸಂಪಾದಕ ಮಂಡಳಿಯ ಸಭೆಯಲ್ಲಿ ಸಮಾಲೋಚನೆ ನಡೆಸಿ ಈ ಪಾಠವನ್ನು ಹಿಂತೆಗೆ ದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಪಠ್ಯಪುಸ್ತಕ ಪ್ರಧಾನ ಸಂಪಾದಕ ಪ್ರೊ. ಶಿವರಾಮ ಶೆಟ್ಟಿ , ಯುದ್ಧ ಬೇಡ ಎನ್ನುವ ಸದಾಶಯ ಲೇಖಕರಿಗೆ ಇತ್ತೇ ಹೊರತು ಸೇನೆಗೆ ಅಥವಾ ಸೈನಿಕರಿಗೆ ಅವಮಾನ ಮಾಡುವ ಉದ್ದೇಶ ಈಲೇಖನದಲ್ಲಿ ಇರಲಿಲ್ಲ.
ಜಗತ್ತಿನಲ್ಲಿ ಪ್ರಸ್ತುತ ಇರುವ ವಿದ್ಯಮಾನದ ಬಗ್ಗೆ ಪಠ್ಯದಲ್ಲಿ ಚರ್ಚಿಸಲಾಗಿತ್ತು. ಆದರೆ ಇದು ಬೇರೆ ಬೇರೆ ಅರ್ಥಗಳನ್ನು ಪಡೆದುಕೊಂಡು ವಿರೋಧ ವ್ಯಕ್ತವಾದ ಹಿನ್ನೆಲೆ ಈ ಪಾಠವನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.