ಮಂಗಳೂರಿನಲ್ಲೇ ಶೇ.70ರಷ್ಟು ಮಲೇರಿಯಾ ಪ್ರಕರಣ ದಾಖಲು
ಮಂಗಳೂರು ಜೂನ್ 20: ಕರಾವಳಿಯಲ್ಲಿ ಮಳೆ ಆರಂಭವಾಗಿದೆ. ಬಿಸಿಲು ಮತ್ತು ಮಳೆ ಕಣ್ಣಾಮುಚ್ಚಾಲೆ ಆಟದ ನಡುವೆ ರೋಗ ರುಜಿನಗಳು ಉಲ್ಬಣಿಸುತ್ತಿವೆ. ಮಳೆ ಆರಂಭವಾಗುತ್ತಿದ್ದಂತೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತದೆ. ಮಲೇರಿಯಾ ವಿಷಯದಲ್ಲಿ ಮಂಗಳೂರು ರಾಜ್ಯದಲ್ಲೇ ಮತ್ತೊಮ್ಮೆ ಮುಂಚೂಣಿಯಲ್ಲಿರುವುದು ಮಂಗಳೂರಿಗನ್ನು ಕಂಗೆಡೆಸಿದೆ.
ಪ್ರಸ್ತುತ ರಾಜ್ಯದಲ್ಲಿ ವರದಿಯಾದ ಮಲೇರಿಯಾ ಪ್ರಕರಣದಲ್ಲಿ ಶೇ.70 ಮಂಗಳೂರಿನದ್ದಾಗಿದೆ. ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ವಿಭಾಗ ಸಾಕಷ್ಟು ಕ್ರಮಗಳನ್ನು ಕೈಗೊಂಡರೂ ಮಲೇರಿಯಾ, ಡೆಂಗ್ಯೂ ಹತೋಟಿಯಲ್ಲಿ ವಿಫಲವಾಗಿವೆ.
ಮಂಗಳೂರನ್ನು ಮತ್ತೆ ಕಾಡುತ್ತಿದೆ ಮಲೇರಿಯಾ, ಡೆಂಗ್ಯೂ
2019 ಜನವರಿ ತಿಂಗಳಿನಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 494 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಂಗಳೂರು ನಗರದ್ದು ಸಿಂಹಪಾಲು. ಪಾಲಿಕೆ ವ್ಯಾಪ್ತಿಯಲ್ಲಿ 470 ಮಲೇರಿಯಾ ಪ್ರಕರಣಗಳು ಬೆಳಕಿಗೆ ಬಂದಿವೆ. ಉಳಿದಂತೆ ಮಂಗಳೂರು ತಾಲ್ಲೂಕು 16, ಬಂಟ್ವಾಳ 4, ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ಸುಳ್ಯದಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.
ಇತ್ತೀಚೆಗೆ ಮಂಗಳೂರು ಪಾಲಿಕೆ ಆರೋಗ್ಯ ತಂಡ ನಗರದ ಮಹಾಕಾಳಿಪಡ್ಪು ಮತ್ತು ಎಮ್ಮೆಕೆರೆ ಪ್ರದೇಶದಲ್ಲಿ 300ಕ್ಕೂ ಅಧಿಕ ಮನೆಗಳಲ್ಲಿ ಸರ್ವೇ ನಡೆಸಿತ್ತು. ಇದರಲ್ಲಿ ಮಹಾಕಾಳಿ ಪಡ್ಪು ಪರಿಸರದಲ್ಲೇ 30 ಮಂದಿಗೆ ಜ್ವರ ಇರುವುದು ಪತ್ತೆಯಾಗಿದ್ದವು. ಇದರ ಪೈಕಿ 18 ಜನರಿಗೆ ಡೆಂಗ್ಯೂ ಲಕ್ಷಣ ಕಂಡುಬಂದಿತ್ತು. 4 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿತ್ತು.
ಕರಾವಳಿಯಲ್ಲಿ ಡೆಂಗ್ಯೂ, ಮಲೇರಿಯಾ ತಡೆಗೆ ಮುಂಜಾಗ್ರತಾ ಕ್ರಮ
ಮಂಗಳೂರಿನಲ್ಲಿ 24 ಗಂಟೆ ಸಂಚಾರಿ ಮಲೇರಿಯಾ ಘಟಕ ತೆರೆಯಲಾಗಿದೆ. ಮನೆ ಬಾಗಿಲಿಗೆ ಬಂದು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಉಚಿತ ವೈದ್ಯಕೀಯ ಚಿಕಿತ್ಸೆ ಕೂಡ ನೀಡಲಾಗುತ್ತಿದೆ.
ಮಲೇರಿಯಾ ಹಾಗೂ ಡೆಂಗ್ಯೂ ತರಹದ ಸಾಂಕ್ರಾಮಿಕ ಕಾಯಿಲೆಗೆ ಸೊಳ್ಳೆಗಳೇ ಮೂಲ. ಮೊದಲಿಗೆ ನಾವು ನಮ್ಮ ಪರಿಸರವನ್ನು ಸ್ವಚ್ಛಗೊಳಿಸಿ ಸೊಳ್ಳೆ ಹುಟ್ಟದಂತೆ ನೋಡಿಕೊಳ್ಳಬೇಕು. ಮಂಗಳೂರಿನಲ್ಲಿ ಸೊಳ್ಳೆ ಅಧಿಕವಾಗಿದೆ, ಮಲೇರಿಯಾ ಹೆಚ್ಚಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ರಾವ್ ತಿಳಿಸಿದ್ದಾರೆ.