ಉಳ್ಳಾಲ ಸಿಪಿಐಎಂ ಕಚೇರಿಗೆ ಬೆಂಕಿ ಹಚ್ಚಿದ್ದ ಮೂವರ ಬಂಧನ
ಮಂಗಳೂರು, ಫೆಬ್ರವರಿ.27 : ಇತ್ತೀಚೆಗೆ ತೊಕ್ಕೊಟ್ಟು ಒಳಪೇಟೆಯಲ್ಲಿರುವ ಉಳ್ಳಾಲ ವಲಯದ ಸಿಪಿಐಎಂ ಕಚೇರಿಗೆ ಬೆಂಕಿ ಹಚ್ಚಿದ್ದ ಮೂವರು ದುಷ್ಕರ್ಮಿಗಳನ್ನು ಭಾನುವಾರ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ತೊಕ್ಕೊಟ್ಟು ವಾಸುಕಿನಗರದ ದೀಕ್ಷಿತ್( 28), ಭಟ್ನಗರದ ಡಿ.ಕೆ. ರಕ್ಷಿತ್ (23), ತೊಕ್ಕೊಟ್ಟು ಶಿವಾಜಿ ಕ್ಲಬ್ ಬಳಿಯ ಬೆನ್ನಿ(22) ಬಂಧಿತರು. ದೀಕ್ಷಿತ್ ಮತ್ತು ರಕ್ಷಿತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಹಲವು ಪ್ರಕರಣಗಳಿವೆ.[ಉಳ್ಳಾಲ ವಲಯದ ಸಿಪಿಐಂ ಕಚೇರಿಗೆ ದುಷ್ಕರ್ಮಿಗಳಿಂದ ಬೆಂಕಿ]
ಪಿಣರಾಯಿ ವಿಜಯನ್ ಭೇಟಿ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಸಿಪಿಎಂ ಕಚೇರಿಯಲ್ಲಿ ಇಡಲಾಗಿದ್ದ ಸೌಹಾರ್ದ ರ್ಯಾಲಿಯ ಬ್ಯಾನರ್ ಬಂಟಿಂಗ್ಸ್ ಗಳಿಗೆ ಫೆಬ್ರವರಿ 24 ರಂದು ಏಳು ಮಂದಿಯ ತಂಡ ಬೆಂಕಿ ಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರ ಬಂಧನವಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಘಟನೆ ವಿವರ : ಮಂಗಳೂರು ಹೊರವಲಯದ ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಸಿಪಿಐಂ ಉಳ್ಳಾಲ ವಲಯದ ಪಕ್ಷದ ಕಚೇರಿಯಲ್ಲಿ ಕಳೆದ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.
ಇದರಿಂದ ಪಿಠೋಪಕರಣ, ಪಕ್ಷದ ಕಡತಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಕಚೇರಿಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ದುಷ್ಕರ್ಮಿಗಳು ಕಚೇರಿಯ ಸಾಮಾಗ್ರಿಗಳನ್ನು ನಾಶ ಮಾಡಿದ್ದರು. ಸಿಪಿಐಎಂ ಪಕ್ಷದ ಐಕ್ಯತಾ ರ್ಯಾಲಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನ ವಿರೋಧಸಿ ಈ ಕೃತ್ಯ ನಡೆಸಲಾಗಿತ್ತು
. ಕೇರಳದಲ್ಲಿ ಸಂಘ ಪರಿವಾರದ ನಾಯಕರ, ಕಾರ್ಯಕರ್ತರ ಹತ್ಯೆಗಳು ನಿರಂತರ ನಡೆಯುತ್ತಿತ್ತಿರುವುದರಿಂದ ಕೇರಳ ಸಿಎಂ ಆಗಮನ ವಿರೋಧಿಸಿ, ಫೆಬ್ರವರಿ 25ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರ ಬಂದ್ ಗೆ ಕರೆ ನೀಡಿದ್ದರು,