ದೇಶಿತಳಿ ಗೋ ಸಾಕಣೆ ವ್ರತದಂತೆ ಮಾಡುತ್ತಿರುವ ಸುಚಿವ್ರತ ಶೆಟ್ಟಿ
ಮಂಗಳೂರಿನ ಸುಚಿವ್ರತ ಶೆಟ್ಟಿ ದೇಶಿ ಗೋ ತಳಿ ಸಾಕಣೆ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಒಂದು ಮಾದರಿಯನ್ನು ನಮ್ಮೆದುರು ಇರಿಸಿದ್ದಾರೆ. ಸದ್ಯ ಅದರ ವಿಸ್ತರಣೆ ಆಲೋಚನೆಯಲ್ಲಿರುವ ಅವರಿಗೆ ಯಶಸ್ಸು ಸಿಗಲೆಂದು ಹಾರೈಸೋಣ
ಮಂಗಳೂರು, ಮಾರ್ಚ್ 17: ಯಾವುದೇ ವೃತ್ತಿಯ ಮೇಲೆ ಅಮಿತವಾದ ಪ್ರೀತಿ ಇದ್ದು, ಅದರಲ್ಲೇ ತೊಡಗಿದರೆ ಎಂಥ ಸಾಧನೆ ಮಾಡಬಹುದು ಎಂಬುದಕ್ಕೆ ಸುಚಿವ್ರತ ಶೆಟ್ಟಿ ಅವರ ಉದಾಹರಣೆ ನಮ್ಮ ಕಣ್ಣೆದುರಿಗಿದೆ. ಕೃಷಿ ಕುಟುಂಬದ ಹಿನ್ನೆಲೆಯ ಅವರು, ಉದ್ಯಮದ ನಿಮಿತ್ತ ಗ್ರಾಮ ಬಿಟ್ಟು ಪಟ್ಟಣಕ್ಕೆ ಬಂದರೂ ಗೋಪ್ರೇಮವನ್ನು ಬಿಡಲಾಗಿಲ್ಲ.
ಆ ನಂತರ ಹವ್ಯಾಸಕ್ಕಾಗಿ ಮಾಡಿದ ಗೋಸಾಕಣೆ ಇದೀಗ ಫಲ ನೀಡುತ್ತಿದ್ದು, ಗೋವುಗಳಿಗೆ ವಿಶಾಲ ನಂದಗೋಕುಲ ಕಟ್ಟುವ ಕನಸು ಚಿಗುರೊಡೆಯುವಂತಾಗಿದೆ. ಪಟ್ಟಣವಾಗಿ ಬೆಳೆಯುತ್ತಿರುವ ಸೋಮೇಶ್ವರ ಗ್ರಾಮದ ಕುಂಪಲ ಮೂರುಕಟ್ಟೆಯಲ್ಲಿ ಐದಾರು ಸೆಂಟ್ಸ್ ನಷ್ಟು ಜಾಗದಲ್ಲಿ ಸುಸಜ್ಜಿತ ಮನೆಯೊಂದನ್ನು ಕಟ್ಟಿರುವ ಸುಚಿವ್ರತ ಶೆಟ್ಟಿ ಅವರು ಅಪ್ಪಟ ಗೋಪ್ರೇಮಿ.[ವಿಜಯಪುರದ ಜವಾರಿ ಕನ್ನಡಿಗನ ಮೆಚ್ಚುವಂತ ಸಾಧನೆ]
ಮೂಡಬಿದಿರೆ, ಕಡಂದಲೆಯ ಪರಾರಿ ಗುತ್ತಿನ ಮನೆತನದ ಕೃಷಿಕ ಸುಬ್ಬಯ್ಯ ಶೆಟ್ಟಿ ಅವರ ಆರು ಮಕ್ಕಳಲ್ಲಿ ಕಿರಿಯ ಮಗ. ಹಿರಿಯ ಮಗ ಸುಚರಿತ ಶೆಟ್ಟಿ ಅವರು ಮೂಡಬಿದಿರೆಯಲ್ಲೇ ಸಕ್ರಿಯ ರಾಜಕಾರಣದಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದು, ಹಾಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದಾರೆ.
ಸುಬ್ಬಯ್ಯ ಶೆಟ್ಟರು ಶಿಕ್ಷಕರಾಗಿದ್ದು, ಕೃಷಿ ಜತೆಗೆ ಊರಿನ ಮಕ್ಕಳಿಗೆ ಶಿಕ್ಷಣ ನೀಡುವ ಸದುದ್ದೇಶದಿಂದ ಮೂಡಬಿದಿರೆಯ ಪೊಸ್ರಾಲ್ ನಲ್ಲಿ ಖಾಸಗಿ ಕನ್ನಡ ಮಾಧ್ಯಮ ಶಾಲೆಯನ್ನೂ ಕಟ್ಟಿಸಿದ್ದಾರೆ. ತೊಕ್ಕೊಟ್ಟಿನಲ್ಲಿ ಹೋಟೆಲ್ ಉದ್ಯಮವನ್ನು ನಡೆಸುವ ನಿಮಿತ್ತ ಮೂಡಬಿದಿರೆಯನ್ನು ತೊರೆದ ಸುಚಿವ್ರತ ಶೆಟ್ಟಿ ಅವರು ಕುಂಪಲದ ಮೂರುಕಟ್ಟೆಯಲ್ಲಿ ಮನೆಯೊಂದನ್ನು ನಿರ್ಮಿಸಿದರು.[ಕೋಲನೂರಿ ನಿಂತ ದೇವತೆ... ಕಾಲಮೀರಿ ನಡೆದಳು...!]
ಕೃಷಿ ಹಿನ್ನೆಲೆ ಕುಟುಂಬಿಕರಾದ ಶೆಟ್ಟರು ಗೋವುಗಳ ಮೇಲೆ ಅಪಾರವಾದ ಪ್ರೀತಿ ಹೊಂದಿದ್ದಾರೆ. ಮನೆಯಲ್ಲಿ ಆರಂಭದಲ್ಲಿ ಎರಡು ಕರುಗಳನ್ನು ಸಾಕಿ, ಪಾಲನೆ ಮಾಡುತ್ತಿದ್ದರು. ಅಂದು ಸಾಕಿದ ಒಂದು ಕರುವಿನಿಂದ ಇಂದು ಒಟ್ಟು ಗೋವುಗಳ ಸಂಖ್ಯೆ ಇಪ್ಪತ್ತೆರಡಕ್ಕೆ ಏರಿದೆ. ಶೆಟ್ಟಿ ಅವರು ಮಾದರಿ ಸ್ವಾವಲಂಬಿ ಉದ್ಯೋಗ ನಡೆಸುತ್ತಿದ್ದಾರೆ.
ಪ್ರೀತಿಯನ್ನು ನೀಡಿದ ಶೆಟ್ಟರಿಗೆ ಕಾಮಧೇನು ಕೈಬಿಡಲಿಲ್ಲ
ಸುಚಿವ್ರತ ಶೆಟ್ಟರಲ್ಲಿ ಒಟ್ಟು 22 ಗೋವುಗಳಿದ್ದು ಮನೆಯಲ್ಲಿ ಅದನ್ನು ಪಾಲನೆ ನಡೆಸಲು ಸ್ಥಳಾವಕಾಶದ ಸಮಸ್ಯೆ ಇರುವ ಕಾರಣ ಹತ್ತಿರವೇ ಹತ್ತು ಸೆಂಟ್ಸ್ ಜಾಗ ಖರೀದಿಸಿ ದನ, ಕರುಗಳನ್ನು ಸಾಕುತ್ತಿದ್ದಾರೆ. ವ್ಯವಹಾರದ ದೃಷ್ಟಿ ಇರಿಸದೆ ಕೇವಲ ಗೋವುಗಳ ಮೇಲಿರುವ ಪ್ರೀತಿ ಮತ್ತು ಅದರ ಪಾಲನೆಯನ್ನು ಮಾಡುವ ದೃಷ್ಟಿಯಲ್ಲಿ ಹಣ ವ್ಯಯಿಸಿ ಗೋವುಗಳನ್ನು ಸಾಕಿದ್ದಾರೆ. ಶೆಟ್ಟರು ನಂಬಿರುವ ಕಾಮಧೇನು ತನಗೆ ಮಾಲೀಕ ನೀಡಿದ ಪ್ರೀತಿಗೆ ಪ್ರತಿಯಾಗಿ ಲೀಟರುಗಟ್ಟಲೆ ಹಾಲನ್ನು ನೀಡಿ ಕೃತಜ್ಞತೆ ಮೆರೆದಿದ್ದಾಳೆ.
ದಿವಸಕ್ಕೆ 100 ಲೀಟರ್ ನಷ್ಟು ಹಾಲು
ಶೆಟ್ಟರ ಬಳಿ ವಿವಿಧ ದೇಶೀ ತಳಿ ಹಸುಗಳಿದ್ದು ಜರ್ಸಿ, ಗಿರ್ರ್ ಜಾತಿಯ ಹಸುಗಳು ಅಧಿಕ ಮಟ್ಟದ ಹಾಲನ್ನು ನೀಡುತ್ತಿವೆ. ಕಡಿಮೆ ಎಂದರೂ ದಿವಸಕ್ಕೆ 100 ಲೀಟರ್ ನಷ್ಟು ಹಾಲು ದೊರೆಯುತ್ತಿದ್ದು, ಸ್ಥಳೀಯರಿಗೆ ಗಿರ್ರ್ ತಳಿಯ ಬೆಲೆಬಾಳುವ ಹಾಲನ್ನು ಕಡಿಮೆ ದರದಲ್ಲೇ ಮಾರಾಟ ಮಾಡಿ, ಉಳಿದದ್ದನ್ನು ಹತ್ತಿರದ ಡೇರಿಗೆ ನೀಡುತ್ತಾರೆ. ಬಂದ ಹಣದಲ್ಲಿ ಗೋವುಗಳ ನಿರ್ವಹಣೆಯಲ್ಲದೆ ಲಾಭವನ್ನೂ ಪಡೆಯುತ್ತಿದ್ದಾರೆ.
ಗೋವಿಗಳಿಗಾಗಿ ನಂದಗೋಕುಲ ನಿರ್ಮಾಣದ ಕನಸು:
ಗೋವುಗಳ ಸಾಕಣೆಯ ಬಗೆಗೆ ಬಾಲ್ಯದಿಂದಲೂ ಆಸಕ್ತಿ ಇರುವ ಸುಚಿವ್ರತ ಅವರು ದೊಡ್ಡ ಮಟ್ಟದ ಗೋಸಾಕಾಣೆ ಜತೆಗೆ ಮೇವು ಮತ್ತು ಮಿಶ್ರತಳಿಯ ವ್ಯವಸಾಯವನ್ನು ಆರಂಭಿಸುವ ಕನಸನ್ನು ಹೊಂದಿದ್ದಾರೆ. ವಿಶಾಲವಾದ ಜಾಗ ದೊರೆತಲ್ಲಿ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಶೀಯ ತಳಿಯ ಗೋವುಗಳನ್ನು ಸಾಕುವ ಚಿಂತನೆ ಅವರದಾಗಿದೆ. ತಾನು ಸಾಕಿರುವ ಗೋವುಗಳಿಗೆ ಗಾಯತ್ರಿ, ಕಪಿಲ, ತುಳಸಿ, ದುರ್ಗಿ, ನಂದಿನಿ ಮುಂತಾದ ಹೆಸರಿಟ್ಟಿದ್ದಾರೆ. ಅವರ ಗೋಪ್ರೇಮಕ್ಕೆ ಪತ್ನಿ ಮುಂಬಯಿ ಮೂಲದ ಶಾಲಿನಿ ಪ್ರೋತ್ಸಾಹ ನೀಡಿದ್ದಾರೆ.
ಯುವಕರು ತಪ್ಪುಕಲ್ಪನೆ ಬಿಡಬೇಕು
ಗೋವು ನಮ್ಮ ದೇಶದ ರಾಷ್ಟ್ರೀಯ ಸಂಪತ್ತು. ಒಂದು ಎಕರೆ ಜಾಗವಿದ್ದರೂ ಹೈನುಗಾರಿಕೆ ನಡೆಸಿ ಸಾವಿರಗಟ್ಟಲೆ ರೂಪಾಯಿ ಲಾಭ ಗಳಿಸುವುದರ ಬದಲು ಏಳೆಂಟು ಸಾವಿರ ಗಳಿಸುವ ಉದ್ಯೋಗಕ್ಕೆ ತೆರಳಿ ಕೃಷಿ ಜೀವನದಿಂದ ಯುವಕರು ವಿಮುಖರಾಗುತ್ತಿದ್ದಾರೆ. ವಿವಾಹವಾಗಲು ಸಂಬಂಧ ಕುದುರುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ತೊಡೆದುಹಾಕಿ ಯುವಕರು ಕೃಷಿ ಮತ್ತು ಹೈನುಗಾರಿಕೆಯತ್ತ ಒಲವು ತೋರಿಸಬೇಕಿದೆ ಎನ್ನುತ್ತಾರೆ ಸುಚಿವ್ರತ ಶೆಟ್ಟಿ.
ಪಶುಸಂಗೋಪನೆ ಇಲಾಖೆಯ ನೆರವು
ಸುಚಿವ್ರತರು ಗೋಸಾಕಾಣೆ ನಡೆಸುತ್ತಿರುವುದು ಶ್ಲಾಘನೀಯ ಮತ್ತು ಎಲ್ಲ ಯುವಕರಿಗೂ ಮಾದರಿ. ಅವರು ಬೃಹತ್ ಮಟ್ಟದಲ್ಲಿ ಹೈನುಗಾರಿಕೆ ಆರಂಭಿಸುವುದಾದರೆ ಪಶುಸಂಗೋಪನೆ ಇಲಾಖೆಯಿಂದ ದೊರೆಯುವಂತಹ ಸವಲತ್ತುಗಳನ್ನು ತಲುಪಿಸಲು ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ.