ಹಿಂದೂ ಸಂಘಟನೆಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ದಿಟ್ಟ ಯುವತಿ
ಮಂಗಳೂರು, ಜನವರಿ 10: ವಿದ್ಯಾರ್ಥಿ ಸಂಘಟನೆಯ ಯುವತಿ ಮತ್ತು ಅನ್ಯ ಕೋಮಿನ ವಿಇದ್ಯಾರ್ಥಿ ಮುಖಂಡರೊಬ್ಬರು ಜತೆಯಾಗಿದ್ದ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಹಲ್ಲೆ ನಡೆಸುವ ಬೆದರಿಕೆ ಹಾಕಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇದರ ವಿರುದ್ಧ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿ ಸಂಘಟನೆ ಮುಖಂಡರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಗಳೂರಿನ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ಮಾಧುರಿ ಬೋಳಾರ ಹಾಗೂ ಹಂಝ ಕಿನ್ಯಾ ಸೇರಿದಂತೆ ಸಂಘಟನೆಯ ಮುಖಂಡರು ಇತ್ತೀಚೆಗೆ ದಾವಣಗೆರೆಯ ಸಮ್ಮೇಳನಕ್ಕೆ ತೆರಳಿದ್ದರು.
ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎಲ್ಲರ ಜತೆಗಿದ್ದ ಫೋಟೋವನ್ನು ಸಹಪಾಠಿಗಳು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಇದನ್ನು ದುರುಪಯೋಗ ಪಡಿಸಿಕೊಂಡಿರುವ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಯುವತಿ ಜತೆ ಅನ್ಯ ಕೋಮಿನ ಯುವಕ ಸುತ್ತಾಡುತ್ತಿದ್ದಾನೆ. ಈತ ಎಲ್ಲಿಯಾದರೂ ಕಾಣಿಸಿಕೊಂಡರೆ ತಕ್ಕ ಉತ್ತರ ನೀಡಿ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಈ ಪೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವಾಟ್ಸಾಪ್ ಗಳಲ್ಲಿ ಈ ಮೆಸೇಜ್ ಹರಿದಾಡುತ್ತಿದೆ. ಈ ಕುರಿತು ವಿದ್ಯಾರ್ಥಿ ಮುಖಂಡರಾದ ಮಾಧುರಿ ಬೋಳಾರ್ ಹಾಗೂ ಹಂಝ ಕಿನ್ಯಾ ಅವರು ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹಿಂದೂ ಸಂಘಟನೆಗಳ ಬೆದರಿಕೆಯಿಂದ ಮೂಡಿಗೆರೆಯ ಯುವತಿ ಧನ್ಯಶ್ರೀ ಆತ್ಮಹತ್ಯೆಗೆ ಶರಣಾಗಿರುವ ಹೊತ್ತಲ್ಲೇ ಮಾಧುರಿ ಬೋಳಾರ್ ಬೆದರಿಕೆಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅವರ ಈ ದಿಟ್ಟ ನಡೆದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.