ಮಿಸಸ್ ಇಂಡಿಯಾ ವರ್ಲ್ಡ್ ವೈಡ್ ನಲ್ಲಿ ಮಂಗಳೂರಿನ ಸೌಜನ್ಯ ಹೆಗ್ಡೆ
ಮಂಗಳೂರು, ಜುಲೈ 25: ಹಾಟ್ ಮೊಂಡೆ ಎಂಬ ಸಂಸ್ಥೆ ನಡೆಸುವ ಮಿಸಸ್ ಇಂಡಿಯಾ ವರ್ಲ್ಡ್ ವೈಡ್ ಗೆ ಮಂಗಳೂರಿನ ಸೌಜನ್ಯ ಹೆಗ್ಡೆ ಆಯ್ಕೆಯಾಗಿದ್ದಾರೆ. ವಿಯೆಟ್ನಾಂನಲ್ಲಿ ಜುಲೈ 27ರಿಂದ ಆಗಸ್ಟ್ 4ರ ವರೆಗೆ ನಡೆಯಲಿರುವ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಮಂಗಳೂರಿನ ಎಂ.ಸದಾಶಿವ ಹೆಗ್ಡೆ ಹಾಗೂ ನಿಟ್ಟಡೆಗುತ್ತು ಸುಮತಿ ಹೆಗ್ಡೆಯವರ ಪುತ್ರಿಯಾಗಿರುವ ಸೌಜನ್ಯ ಹೆಗ್ಡೆ, ಬಾಲ್ಯದಿಂದಲೇ ಸೌಂದರ್ಯ ಸ್ಪರ್ಧೆ, ನೃತ್ಯ ಹಾಗೂ ಯಕ್ಷಗಾನದ ಮೂಲಕ ಗಮನ ಸೆಳೆದವರು. ಸೈಂಟ್ ಆ್ಯಗ್ನೆಸ್ನಲ್ಲಿ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿ, ಮಂಗಳೂರು ಎಸ್ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ, ಇಕಾ ಯೂನಿವರ್ಸಿಟಿಯಲ್ಲಿ ಎಂಬಿಎ ಡಿಪ್ಲೊಮಾ ಪೂರೈಸಿದ್ದಾರೆ.
ಇವರ ಪತಿ ಸುಧೀರ್ ಹೆಗ್ಡೆ ಎಂಜಿನಿಯರ್ ಆಗಿದ್ದು, ನೈಜೀರಿಯಾದಲ್ಲಿ ಪೆಪ್ಸಿ ಬಾಟ್ಲಿಂಗ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. 10 ವರ್ಷಗಳ ಕಾಲ ನೈಜೀರಿಯಾದ ಅಬುಜಾದಲ್ಲಿ ಪತಿಯೊಂದಿಗೆ ಸೌಜನ್ಯ ಹೆಗ್ಡೆ ವಾಸವಾಗಿದ್ದರು.
ಕದ್ರಿ ನೃತ್ಯಾಲಯದಲ್ಲಿ ದಿ. ಕೃಷ್ಣರಾವ್ ಹಾಗೂ ಪುತ್ರ ವಿದ್ವಾನ್ ಪ್ರವೀಣ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ದಿ. ಕುಂಬಳೆ ಚಂದ್ರಶೇಖರ ಅವರಿಂದ ಯಕ್ಷಗಾನ ಅಭ್ಯಾಸದ ಜತೆಗೆ ಫಿಲ್ಮ್ ಡ್ಯಾನ್ಸ್, ಜಾನಪದ ನೃತ್ಯ ಹಾಗೂ ಫ್ರೀಸ್ಟೈಲ್ ಡ್ಯಾನ್ಸ್ಗಳನ್ನೂ ಅಭ್ಯಾಸ ಮಾಡಿಕೊಂಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಅನುಭವವನ್ನೂ ಹೊಂದಿದ್ದು, 1999ರಲ್ಲಿ ಮಿಸ್ ಕೋಸ್ಟಲ್, 2000ದಲ್ಲಿ ಫ್ಯಾಂಟಸಿ, 2001ರಲ್ಲಿ ಜೆಸಿ ಕ್ವೀನ್ ಹಾಗೂ ಕರಾವಳಿ 2002 ಮೊದಲಾದ ಕಿರೀಟಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
2001ರಲ್ಲಿ ತೆರೆ ಕಂಡ 'ಮಾಯಾ ಜಿಂಕೆ' ಕನ್ನಡ ಚಲನಚಿತ್ರ ಹಾಗೂ 2016ರ 'ಬೊಳ್ಳಿಲು' ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.
'ಮಿಸಸ್ ಟ್ಯಾಲೆಂಟ್ ಟೈ ಟಾಲ್'ಗಾಗಿ ಒಂದು ನಿಮಿಷದ ಸ್ಪರ್ಧೆಯಲ್ಲಿ ತಾನು ದೇವಿಯ ಅವತಾರವನ್ನು "ಶಕ್ತಿ" ಹೆಸರಿನಲ್ಲಿ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದೇನೆ. ಸ್ಪರ್ಧೆಯ ಅಂತಿಮ ಸುತ್ತು ಆಗಸ್ಟ್ 5ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಬೆಂಗಳೂರು ವಲಯದಿಂದ ಏಳು ಮಂದಿ ಹಾಗೂ ಮಂಗಳೂರಿನಿಂದ ನಾನೊಬ್ಬಳೇ ಆಯ್ಕೆಯಾಗಿದ್ದೇನೆ ಎಂದು ಒನ್ ಇಂಡಿಯಾ ಕನ್ನಡ ಸೌಜನ್ಯ ಹೆಗ್ಡೆ ತಿಳಿಸಿದ್ದಾರೆ.