ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆ
Recommended Video
ಮಂಗಳೂರು, ಜನವರಿ 10: ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದು ಎರಡು ದೀರ್ಘ ವಿಡಿಯೋ ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಪೊಲೀಸರ ರಾಕ್ಷಸೀ ವರ್ತನೆ ಸೆರೆಯಾಗಿದೆ.
ಕೆಲವು ದಿನಗಳ ಹಿಂದೆಯಷ್ಟೆ ಪೊಲೀಸರು ವಿಡಿಯೋ ಬಿಡುಗಡೆ ಮಾಡಿ, ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದರು ಎಂದು ಆರೋಪಿಸಿದ್ದರು, ಅಲ್ಲದೆ ಗೋಲಿಬಾರ್ಗೆ ಆ ವಿಡಿಯೋಗಳನ್ನು ಸಮರ್ಥನೆಯಾಗಿ ನೀಡಿದ್ದರು. ಆದರೆ ಇಂದು ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪೊಲೀಸರೇ ಹಿಂಸಾಚಾರ ನಡೆಸುತ್ತಿರುವುದು ದಾಖಲಾಗಿದೆ.
ಮಂಗಳೂರು ಗಲಭೆ: ಪೊಲೀಸರ ವಿರುದ್ಧ ಕುಮಾರಸ್ವಾಮಿ ವಿಡಿಯೋ ಬಿಡುಗಡೆ
ಮೊದಲ ವಿಡಿಯೋದಲ್ಲಿ ಅಮಾಯಕರ ಮೇಲೆ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವವರನ್ನು ಪೊಲೀಸರು ಹಿಗ್ಗಾ-ಮುಗ್ಗಾ ಥಳಿಸುತ್ತಿದ್ದಾರೆ. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದವರ ಮೇಲೆ, ಬ್ಯಾಗ್ ಹಾಕಿಕೊಂಡು ಕಾಲೇಜುಗಳಿಗೆ ತೆರಳುತ್ತಿದ್ದ ಸಣ್ಣ ವಯಸ್ಸಿನ ಯುವಕರ ಮೇಲೂ ಹತ್ತು-ಹನ್ನೆರಡು ಮಂದಿ ಪೊಲೀಸರು ಮುಗಿಬಿದ್ದಿರುವುದು ಸೆರೆಯಾಗಿದೆ. ಒಬ್ಬ ಹುಡುಗನಿಗಂತೂ ತಲೆಗೆ ಹೊಡೆದು ರಕ್ತ ಒಸರುತ್ತಿದ್ದರೂ ಆತನನ್ನು ರಸ್ತೆ ಪಕ್ಕದಲ್ಲಿಯೇ ಬಿಟ್ಟು ಹೋಗುವ ದೃಶ್ಯ ಸೆರೆಯಾಗಿದೆ.
ಮಸೀದಿ ಮೇಲೆ ಕಲ್ಲು ತೂರಿದ ಪೊಲೀಸರು
ಇನ್ನೊಂದು ದೃಶ್ಯದಲ್ಲಿಯಂತೂ ಪೊಲೀಸರೇ ಮಸೀದಿ ಮೇಲೆ ಕಲ್ಲು ತೂರಾಟ ಮಾಡಿರುವ ವಿಡಿಯೋ ಸೆರೆಯಾಗಿದೆ. ಅಷ್ಟೇ ಅಲ್ಲದೆ ಪೊಲೀಸರೇ ಗುಂಪಿನ ಮೇಲೆ ಸತತವಾಗಿ ಕಲ್ಲು ತೂರಾಟ ಮಾಡುತ್ತಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳ ಸಂಭಾಷಣೆಯೂ ವಿಡಿಯೋದಲ್ಲಿದ್ದು ಅಶ್ರುವಾಯು ಸಿಡಿಸುವ ಮೊದಲೇ ಗೋಲಿಬಾರ್ ಮಾಡಿಬಿಡುವ ಮಾತನ್ನಾಡಿದ್ದಾರೆ. ಅಲ್ಲಿಗೆ ಗೋಲಿಬಾರ್ ಉದ್ದೇಶಪುರ್ವಕವಾಗಿತ್ತೇ ಎಂಬ ಅನುಮಾನ ಮೂಡುತ್ತದೆ.
ಅಂಗಡಿ ಬಾಗಿಲು ಹಾಕಿ ಒಳಗಿದ್ದವರ ಮೇಲೂ ಲಾಠಿ ಪ್ರಹಾರ
ರಸ್ತೆ ಬದಿಯ ಹಣ್ಣು ವ್ಯಾಪಾರಿಗಳ ಮೇಲೆ ಲಾಠಿ ಬೀಸಿರುವುದು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸುವುದು, ವಾಣಿಜ್ಯ ಸಂಕೀರ್ಣವೊಂದರ ನಾಲ್ಕನೇ ಮಹಡಿಯಲ್ಲಿ ಅಂಗಡಿಯ ಒಳಗೆ ಬಾಗಿಲು ಹಾಕಿಕೊಂಡು ಕೂತವರನ್ನೂ ಹೊರಗೆ ಎಳೆದು ಹೊಡೆಯುತ್ತಿರುವ ವಿಡಿಯೋಗಳು ಭಯಗೊಳಿಸುತ್ತವೆ.
ಮಂಗಳೂರು ಗಲಭೆಗೆ ಮೊದಲೇ ನಡೆದಿತ್ತಾ ಪ್ಲಾನ್..? ಸಿಸಿಟಿವಿಯಲ್ಲಿ ಸೆರೆ
ಸುಳ್ಳು ವಿಡಿಯೋ ಬಿಡುಗಡೆ ಮಾಡಿದ್ದ ಪೊಲೀಸರು
ಕೆಲ ದಿನದ ಹಿಂದೆ ಪೊಲೀಸರು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಹಲ್ಲೆಕೋರರು ಟೆಂಪೋ ಒಂದರಲ್ಲಿ ಕಲ್ಲು ತರಿಸಿಕೊಂಡಿದ್ದಾರೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ ಇದು ಸುಳ್ಳು ಎಂದು ನಿರೂಪಿಸಿರುವ ದೃಶ್ಯಾವಳಿಗಳು ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಇವೆ. ಉದ್ದೇಶಪೂರ್ವಕವಾಗಿ ಕಲ್ಲು ತುಂಬಿದ ಆಟೋ ತಂದು ನಿಲ್ಲಿಸಿದ್ದಲ್ಲ, ಆಟೋ ಡ್ರೈವರ್ ಅಪಾರ್ಟ್ಮೆಂಟ್ ಒಂದರಿಂದ ಜಪ್ಪಿನ ಮುಗೇರು ಎಂಬಲ್ಲಿಗೆ ಮೂರು ಲೋಡ್ ಅನ್ನು ತೆಗೆದುಕೊಂಡು ಹೋಗಿದ್ದಾನೆ. ಅದರ ದೃಶ್ಯಗಳು ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋದಲ್ಲಿವೆ. ನಾಲ್ಕನೇ ಟ್ರಿಪ್ ಹಾಕುವಾಗ ಗಲಭೆ ಆಗಿದ್ದರಿಂದ ಸ್ಟೇಶನ್ ಪಕ್ಕದ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಹೊರಟುಬಿಟ್ಟಿದ್ದಾನೆ. ಅದರಲ್ಲಿ ಎರಡು ಗೋಣಿ ಚೀಲವನ್ನು ನಂತರ ಗಲಭೆಕೋರರು ಎತ್ತಿಕೊಂಡಿದ್ದಾರೆ. ಆದರೆ ಪೊಲೀಸರು ಈ ವಿಡಿಯೋವನ್ನು ಗಲಭೆಕೋರರು ಉದ್ದೇಶಪೂರ್ವಕವಾಗಿ ಕಲ್ಲು ತರಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಬಳಸಿದ್ದರು.
ಕೊಲ್ಲುವ ಉದ್ದೇಶದಿಂದಲೇ ಗೋಲಿಬಾರ್(!?)
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪ್ರಮುಖ ದೃಶ್ಯವೆಂದರೆ ಗೋಲಿಬಾರ್ ಮಾಡಿರುವ ದೃಶ್ಯ. ಪ್ರೋಟೋಕಾಲ್ ನಂತರ ಗಾಳಿಯಲ್ಲಿ ಗುಂಡು ಹಾರಿಸುವ ಬದಲಿಗೆ ನೇರವಾಗಿ, ಕೊಲ್ಲುವ ಉದ್ದೇಶದಿಂದಲೇ ಗುಂಪನ್ನೇ ಗುರಿಯಾಗಿಸಿ ಗುಂಡು ಹೊಡೆದಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಗೋಲಿಬಾರ್ ಮಾಡುವ ಮುನ್ನವೇ 'ಅವನಿಗೆ ಸರಿಯಾಗಿ ಗುಪ್ತಾಂಗಂಕ್ಕೆ ಗುಂಡು ಬೀಳಬೇಕು ಹಾಗೆ ಹೊಡಿ' ಎಂದು ಅಧಿಕಾರಿಯೊಬ್ಬರು ಬಂದೂಕು ಹಿಡಿದ ಪೊಲೀಸರಿಗೆ ಹೇಳುತ್ತಾರೆ. ಅದಕ್ಕೆ ತಕ್ಕಂತೆ ಹಲವು ರೌಂಡ್ಗಳ ಗುಂಡುಗಳನ್ನು ಸಿಡಿಸಲಾಗುತ್ತದೆ.
ಮಂಗಳೂರು ಗಲಭೆ; ಪೊಲೀಸರಿಂದ ಫೋಟೋ ಬಿಡುಗಡೆ
'ಒಬ್ಬನೂ ಸಾಯಲಿಲ್ಲವಲ್ಲಾ?' ಅಧಿಕಾರಿಯ ಮಾತು
ಗೋಲಿಬಾರ್ ನಡೆದಾಗ ಅಧಿಕಾರಿಯೊಬ್ಬ, 'ಗೋಲಿಬಾರ್ ಆದರೂ ಒಬ್ಬನೂ ಸಾಯಲಿಲ್ಲವಲ್ಲ' ಎಂದು ಕೇಳುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ. ಅಲ್ಲಿಗೆ ಕೊಲ್ಲುವುದೇ ಪೊಲೀಸರ ಉದ್ದೇಶವಾಗಿತ್ತು ಎಂಬುದು ಅಧಿಕಾರಿಯ ಮಾತಿನಿಂದ ಸ್ಪಷ್ಟವಾಗುತ್ತದೆ.
ಗೋಲಿಬಾರ್ ನಡೆದ ಸ್ಥಳದಲ್ಲಿ ಸಿಸಿಟಿವಿ ಇದೆ
ವಿಡಿಯೋ ಬಿಡುಗಡೆ ಮಾಡಿರುವ ಕುಮಾರಸ್ವಾಮಿ, 'ಗೋಲಿಬಾರ್ ನಡೆದು ಇಬ್ಬರು ಸತ್ತ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಒಂದು ಇದೆ. ಅದು 360 ಡಿಗ್ರಿ ದೃಶ್ಯ ಸೆರೆ ಹಿಡಿಯುತ್ತದೆ. ಸರ್ಕಾರ ಆ ಸಿಸಿಟಿವಿ ಕ್ಯಾಮೆರಾದ ದೃಶ್ಯ ಬಿಡುಗಡೆ ಮಾಡಲಿ' ಎಂದು ಸವಾಲು ಎಸೆದಿದ್ದಾರೆ.
ವಿವಿಧ ಘಟನಾವಳಿಗಳನ್ನು ಒಟ್ಟು ಮಾಡಿದ ವಿಡಿಯೋ
ದೀರ್ಘವಾದ ಈ ವಿಡಿಯೋದಲ್ಲಿ ಮುಸ್ಲಿಂ ನಾಯಕರು ಪ್ರತಿಭಟನಾಕಾರರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡುವುದು. ಗಲಭೆ ಆದ ನಂತರ ಸಾರ್ವಜನಿಕರು ಮಾತನಾಡಿರುವುದು. ಇನ್ನೂ ಹಲವು ದೃಶ್ಯಗಳು ಇವೆ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋ ನೋಡಿದರೆ ಪೊಲೀಸರೇ ಗಲಭೆಗೆ ಪ್ರಚೋದನೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಗೋಲಿಬಾರ್ ಮಾಡಿದ್ದಾರೆಯೇ ಎಂಬ ಅನುಮಾನ ಬರುತ್ತದೆ.