ಪಬ್ ದಾಳಿ ಆರೋಪಿಗಳು ದೋಷಮುಕ್ತ, ಸಿಹಿ ಹಂಚಿ ಸಂಭ್ರಮಾಚರಣೆ
ಮಂಗಳೂರು, ಮಾರ್ಚ್ 12: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸುದ್ದಿಯಾಗಿದ್ದ 2009 ರ ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನ್ಯಾಯಾಲಯ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಹಿನ್ನಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಸಿಹಿ ವಿತರಣೆ ಮಾಡಿದ್ದಲ್ಲದೇ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 9 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಜೆಎಂಎಫ್ ಸಿ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣದ ಪ್ರಮುಖ ಆರೋಪಿಗಳೆಂದು ಗುರುತಿಸಲಾಗಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪ್ರಸಾದ್ ಅತ್ತಾವರ್ , ಸುಭಾಷ್ ಪಡೀಲ್ ಸೇರಿದಂತೆ ಎಲ್ಲಾ 25 ಆರೋಪಿಗಳನ್ನು ಇಂದು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
2009ರ ಮಂಗಳೂರು ಪಬ್ ದಾಳಿ ಪ್ರಕರಣ: 25 ಆರೋಪಿಗಳು ಖುಲಾಸೆ
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, "2009 ಜನವರಿ 24ರಂದು ಅಮ್ನೇಶಿಯಾ ಪಬ್ ಮೇಲೆ ದಾಳಿ ನಡೆದಿತ್ತು. ಇದರಲ್ಲಿ 30 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಜೆಎಂಎಫ್ ಸಿ 3ನೇ ನ್ಯಾಯಾಲಯ 25 ಜನರನ್ನು ಖುಲಾಸೆಗೊಳಿಸಿದೆ. ಇದು ಸತ್ಯಕ್ಕೆ ಸಂದ ಜಯ," ಎಂದು ಹೇಳಿದರು.
ಆರೋಪ ಹೊಂದಿದ್ದ ಮೂವರು ವಿದೇಶಕ್ಕೆ ತೆರಳಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಈ ಪ್ರಕರಣದಲ್ಲಿ 9 ಸೆಕ್ಷನ್ ಗಳನ್ನು ಹಾಕಲಾಗಿತ್ತು. ಈ ಘಟನೆಯಲ್ಲಿ ನಾನು ಭಾಗಿಯಾಗಿರಲಿಲ್ಲ ಆದರು ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆ ನಡೆಯುವ ಸಂದರ್ಭದಲ್ಲಿ ನಾನು ಮಹಾರಾಷ್ಟ್ರದ ಪುಣೆಯ ಸಮ್ಮೇಳನ ಒಂದರಲ್ಲಿ ಭಾಗವಹಿಸಿದ್ದೆ. ಅಲ್ಲಿಂದ ಹಿಂತಿರುಗಿದಾಗ ನನ್ನನ್ನು ಬಂಧಿಸಿದ್ದರು. 16 ದಿನ ನನ್ನನ್ನು ಜೈಲಿನಲ್ಲಿಟ್ಟು ಮಾನಸಿಕ, ದೈಹಿಕ ಹಿಂಸೆ ನೀಡಿದ ಅಂದಿನ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂದು ಅವರು ಕಿಡಿಕಾರಿದರು.
ನನಗೆ ಹಿಂಸೆ ನೀಡಲೆಂದೇ ಬಿಜೆಪಿಯವರು ಸಂಚು ಮಾಡಿ ಬಂಧಿಸಿದ್ದರು ಎಂದು ಆರೋಪಿಸಿದ ಅವರು, "ಮುಂಬರುವ ದಿನಗಳಲ್ಲಿ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ," ಎಂದು ಹೇಳಿದರು. ಬಿಜೆಪಿ ನಾಯಕರಿಂದಲೇ ಹಿಂದೂ ಸಂಘಟನೆಯನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತ ಕೆ.ಟಿ. ನವೀನ್ ಕುಮಾರ್ ನನ್ನು ಬಂಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆಯೂ ಆಕ್ರೋಶ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್, "ಕೆ.ಟಿ. ನವೀನ್ ನನ್ನು ಪ್ರಕರಣದಲ್ಲಿ ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ. ಯಾವುದೇ ಆಧಾರವಿಲ್ಲದಿದ್ದರೂ ಗೌರಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಘಟನೆ ನಡೆದು ಸಾಕಷ್ಟು ಸಮಯ ಕಳೆದಿದ್ದರೂ ಇಷ್ಟು ದಿನಗಳ ಕಾಲ ತನಿಖೆ ಕೈಗೊಂಡ ಬಳಿಕವೂ ದೊರೆಯದ ಆರೋಪಿಯನ್ನು ಈಗ ಏಕಾಏಕಿ ಪತ್ತೆ ಮಾಡಲು ಹೇಗೆ ಸಾಧ್ಯ?" ಎಂದು ಅವರು ಪ್ರಶ್ನಿಸಿದರು.