ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ, ಲಕ್ಷಾಂತರ ರೂಪಾಯಿ ಸ್ವತ್ತು ವಶಕ್ಕೆ
ಮಂಗಳೂರು, ಜುಲೈ 6: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡದ ಮೇಲೆ ಮಂಗಳೂರು ಪೊಲೀಸರು ದಾಳಿ ನಡೆಸಿದ ಘಟನೆ ಜುಲೈ 5 ಶುಕ್ರವಾರದಂದು ನಡೆದಿದೆ. ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ಪೊಲೀಸರು ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಅಡ್ಡದ ಮೇಲೆ ದಾಳಿ ನಡೆಸಿ 4 ಟಿಲ್ಲರ್ ಮೆಷಿನ್, ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು 31 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕುವೈತ್ ನಲ್ಲಿ ಗೃಹ ಬಂಧನದಲ್ಲಿದ್ದ ಮಂಗಳೂರಿನ ಮಹಿಳೆ ರಕ್ಷಣೆ
ಮೂಡಬಿದ್ರೆ ಬಡಗಮಿಜಾರು ಗ್ರಾಮದ ಪದಮಲೆ ಮತ್ತು ಮಂಜನಬೈಲು ಎಂಬಲ್ಲಿ ಜೋಕಿಂ ಕೊರೆಯ ಮತ್ತು ಹೇಮಚಂದ್ರ, ಜಗದೀಶ್ ಎಂಬುವರು ಯಾವುದೇ ಪರವಾನಗಿ ಇಲ್ಲದೇ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ.
ಪಣಂಬೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ ಆರ್.ಗೌಡ ಅವರ ನೇತೃತ್ವದ ರೌಡಿ ನಿಗ್ರಹ ದಳವು ಸ್ಥಳದ ಮೇಲೆ ದಾಳಿ ನಡೆಸಿದ್ದರು. ತುಂಬಿದ ಕೆಂಪು ಕಲ್ಲುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸ್ವತ್ತುಗಳನ್ನು ಹಸ್ತಾಂತರಿಸಿದ್ದಾರೆ.