ಮಂಗಳೂರು: ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು, ಅಕ್ಟೋಬರ್ 31: ನಗರದ ವಿವಿಧೆಡೆ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಗುರುಪುರ ನಿವಾಸಿ ಮೊಹಮ್ಮದ್ ಶಕೀರ್ (23)ಎಂದು ಗುರುತಿಸಲಾಗಿದೆ. ನಗರದ ಕೋಡಿಕಲ್ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕೋಡಿಕಲ್ ನ 10 ನೇ ಕ್ರಾಸ್ ಬಳಿ ಆರೋಪಿ ಮೊಹಮ್ಮದ್ ಶಕೀರ್ ನನ್ನು ಬಂಧಿಸಲಾಗಿದೆ.
ಬಂಧಿತನಿಂದ 1.8 ಕೆಜಿ ಗಾಂಜಾ, 2 ಮೊಬೈಲ್, ಒಂದು ಬೈಕ್ ಸೇರಿದಂತೆ ಒಟ್ಟು 1.19 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಕ್ಟೋಬರ್ 29 ರಂದು ಇದೇ ಕೋಡಿಕಲ್ ಮೈದಾನದ ಬಳಿ ದಾಳಿ ನಡೆಸಿದ್ದ ರೌಡಿ ನಿಗ್ರಹದಳ ಪೊಲೀಸರು ಗಾಂಜಾ ಸೇವಿಸುತ್ತಿದ್ದ 7ಮಂದಿ ಯುವಕರನ್ನು ಬಂಧಿಸಿದ್ದರು.