ನಿಪಾಹ್ ವೈರಸ್ ಭೀತಿಯಿಂದ ನಿರಾಳರಾದ ಮಂಗಳೂರಿಗರು
ಮಂಗಳೂರು, ಮೇ 25: ಕೇರಳದಲ್ಲಿ ಭಾರೀ ಆತಂಕ ಸೃಷ್ಟಿಸಿರುವ ನಿಪಾಹ್ ವೈರಸ್ ಸೋಂಕು ಕರಾವಳಿ ಪ್ರವೇಶಿಸದಂತೆ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಈ ನಡುವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಇಬ್ಬರು ರೋಗಿಗಳಿಗೆ ನಿಪಾಹ್ ವೈರಸ್ ಬಾಧಿಸಿಲ್ಲ ಎಂಬುದು ದೃಡಪಟ್ಟಿದೆ.
ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಆವರಿಸಿದ್ದ ಭಾರೀ ಅತಂಕ ದೂರವಾಗಿದ್ದು ಮಂಗಳೂರಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
'ನಿಪಾಹ್ ವೈರಸ್ ಕುರಿತ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ'
ನಿಪಾಹ್ ಸೋಂಕು ತಗುಲಿದ ಲಕ್ಷಣಗಳು ಮಂಗಳೂರಿನಲ್ಲಿ ದಾಖಲಾಗಿದ್ದ ಇಬ್ಬರು ರೋಗಿಗಳಲ್ಲಿ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಸಂಶಯದ ಮೇರೆಗೆ ಅವರ ರಕ್ತದ ಹಾಗು ಗಂಟಲಿನ ದ್ರವವನ್ನು ಮಣಿಪಾಲದ ಪಿಸಿಆರ್ ಸೆಂಟರ್ ಗೆ ಕಳುಹಿಸಿ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಂಕಿತ ನಿಪಾಹ್ ವೈರಸ್ ಹರಡಿರುವ ಬಗ್ಗೆ ಮಂಗಳೂರಿನಲ್ಲಿ ಭಾರೀ ಆತಂಕ ಮನೆಮಾಡಿತ್ತು.
ಆದರೆ ಈಗ ಮಣಿಪಾಲ್ ನ ಪಿಸಿಆರ್ ಸೆಂಟರ್ ನ ವರದಿ ಬಂದಿದ್ದು ಅದರಲ್ಲಿ ಮಂಗಳೂರಿನಲ್ಲಿ ದಾಖಲಾಗಿರುವ ರೋಗಿಗಳಿಬ್ಬರ ಗಂಟಲಿನ ಸ್ಯಾಂಪಲ್ ನಲ್ಲಿ ನಿಪಾಹ್ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂಬುದನ್ನು ವರದಿ ದೃಢಪಡಿಸಿದೆ. ಈ ನಡುವೆ ಆ ಇಬ್ಬರು ರೋಗಿಗಳ ಮೇಲೆ ಕಳೆದೆರಡು ದಿನಗಳಿಂದ ಹೆಚ್ಚಿನ ನಿಗಾ ವಹಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಇಬ್ಬರು ಸ್ಪಂದಿಸಿದ್ದು ಆರೋಗ್ಯ ಸ್ಥತಿ ಸಾಮಾನ್ಯ ವಾಗಿದೆ ಎಂದು ಹೇಳಲಾಗಿದೆ.
ಚಿತ್ರದಲ್ಲಿ ನೋಡಿ ನಿಪಾಹ್ ವೈರಸ್ ಮುನ್ನೆಚ್ಚರಿಕೆ ಕ್ರಮ
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಪಾಹ್ ವೈರಸ್ ಕುರಿತು ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವದಂತಿಗಳಿಗೆ ಕಿವಿಕೊಡಬೇಡಿ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಕರೆ ನೀಡಿದ್ದಾರೆ.