ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನಾಧಿಕಾರಿ ಎಸಿಬಿ ಬಲೆಗೆ
ಮಂಗಳೂರು, ಜನವರಿ. 05 : ಮಂಗಳೂರು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನಾಧಿಕಾರಿ ಗಾಯತ್ರಿ ನಾಯಕ್ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಗಾಯತ್ರಿ ನಾಯಕ್ ಅವರು ಬುಧವಾರ ಮಂಗಳೂರಿನ ಮಿನಿ ವಿಧಾನಸೌಧ ಸಮೀಪ ಇರುವ ತಮ್ಮ ಕಚೇರಿಯಲ್ಲಿ ಯೋಗೀಶ್ ಎಂಬುವರಿಂದ 20 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169ರ ಭೂಸ್ವಾಧೀನಾಧಿಕಾರಿಯಾಗಿರುವ ಗಾಯತ್ರಿ ನಾಯಕ್, ಯೋಗೀಶ್ ಎಂಬವರಿಗೆ ಸಿಕ್ಕಿದ ಪರಿಹಾರದ ಮೊತ್ತದಲ್ಲಿ 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಈಗಾಗಲೇ ಯೊಗೀಶ್ ಅವರು ಸುಮಾರು 1.30 ಲಕ್ಷ ರು ಹಣವನ್ನು ಗಾಯತ್ರಿ ನಾಯ್ಕ್ ಅವರಿಗೆ ನೀಡಿದ್ದಾರೆ. ಗಾಯತ್ರಿ ನಾಯ್ಕ್ ಅವರ ಧನದಾಹಕ್ಕೆ ಬೇಸತ್ತ ಯೋಗೀಶ್ ಕೊನೆಗೂ ಎಸಿಬಿ ಮೊರೆಹೋಗಿದ್ದಾರೆ.
ಬುಧವಾರ ಮಧ್ಯಾಹ್ನ ಯೊಗೀಶ್ ಲಂಚದ ಮೊತ್ತವನ್ನು ಗಾಯತ್ರಿ ನಾಯಕ್ ಅವರಿಗೆ ನೀಡುತ್ತಿರುವಾಗಲೆ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಗಾಯತ್ರಿ ನಾಯಕ್ ಕುಂದಾಪುರದಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹಿಂದೆ ಇವರ ವಿರುದ್ಧ ಭ್ರಷ್ಟಚಾರದ ಪ್ರಕರಣಗಳು ಕೇಳಿಬಂದಿದ್ದವು.
ಆದರೆ, ಬೈಂದೂರು ಶಾಸಕ ಗೋಪಾಲ ಪೂಜಾರಿಯವರಿಗೆ ಬಹಳ ಆಪ್ತರಾಗಿದ್ದ ಅಧಿಕಾರಿ ಎಂದು ಆಗ ಗುಸುಗುಸು ಇದ್ದ ಕಾರಣ ಗಾಯತ್ರಿ ನಾಯಕ್ ಬಚಾವ್ ಆಗಿದ್ದರು ಎನ್ನಲಾಗುತ್ತಿದೆ.
ಮತ್ತೆ ತಮ್ಮ ಚಾಳಿ ಮುಂದುವರಿಸಿರುವ ಗಾಯತ್ರಿ ನಾಯಕ್ ತಮ್ಮ ಲಂಚದಾಹಕ್ಕೆ ತಾವೇ ಸಿಕ್ಕಿಬಿದ್ದು ಎಸಿಬಿ ವಶದಲ್ಲಿದ್ದಾರೆ.