ಮಂಗಳೂರು - ಮೈಸೂರು ರೈಲ್ವೆ ಹಳಿ ವಿದ್ಯುದೀಕರಣ
ಮಂಗಳೂರು ಏ. 27: ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಮೈಸೂರು- ಮಂಗಳೂರು ನಡುವೆ ವಿದ್ಯುದೀಕರಣ ಯೋಜನೆಗೆ ಶೀಘ್ರ ದಲ್ಲೇ ಚಾಲನೆ ದೊರಕಲಿದೆ. ಈ ಕಾಮಗಾರಿ 2 ಹಂತದಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿದ್ದು ಶೀಘ್ರ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಹೊಂದಲಾಗಿದೆ.
ಕೇಂದ್ರ ಬಜೆಟ್ನಲ್ಲಿ ಮೈಸೂರು- ಹಾಸನ-ಮಂಗಳೂರು ಮಾರ್ಗ ವಿದ್ಯುದೀಕರಣಕ್ಕೆ 316 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ಮೊದಲ ಹಂತದಲ್ಲಿ ಮಂಗಳೂರು ಹಾಸನ ನಡುವೆ ಕಾಮಗಾರಿ ಆರಂಭವಾಗಲಿದೆ. ಬಳಿಕ ಹಾಸನ-ಮೈಸೂರು ಕೆಲಸ ಕೈಗೆತ್ತಿಕೊಳ್ಳಲು ನಿರ್ದರಿಸಲಾಗಿದೆ.
ಫೆ.21ರಿಂದ ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲು
ಈ ಮಾರ್ಗದ ವಿದ್ಯುದೀಕರಣದ ಅಂತಿಮ ತೀರ್ಮಾನ ಪ್ರಕಟಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಪಡೀಲ್ನಿಂದ ಬಂಟ್ವಾಳ, ಕಬಕ ಪುತ್ತೂರು, ಎಡಮಂಗಲ, ಸುಬ್ರಹ್ಮಣ್ಯ ಘಾಟಿ, ಸಕಲೇಶಪುರ-ಹಾಸನ ಹಳಿಯು ವಿದ್ಯುದೀಕರಣಗೊಳ್ಳಬೇಕಿದೆ. ರೈಲ್ವೇ ಇಲಾಖೆಯ ಅಲಹಾಬಾದ್ನ ಸೆಂಟ್ರಲ್ ಆರ್ಗನೈಸೇಶನ್ ಫಾರ್ ರೈಲ್ವೇ ಎಲೆಕ್ಟ್ರಿಫಿಕೇಶನ್ ವಿಭಾಗವು ಈ ಕಾಮಗಾರಿಯನ್ನು ನಿರ್ವಹಿಸಲಿದ್ದು, ಸದ್ಯ ಸರ್ವೆ ನಡೆಸಿ ಪ್ರಾರಂಭಿಕ ಸಿದ್ಧತೆ ಕೈಗೊಳ್ಳುತ್ತಿದೆ.
ಪಶ್ಚಿಮ ಘಟ್ಟ ಪ್ರದೇಶದ ಮೂಲಕ ಈ ರೈಲು ಮಾರ್ಗ ಸಾಗುವ ಹಿನ್ನೆಲೆಯಲ್ಲಿ ಸಕಲೇಶಪುರ ಮಾರ್ಗವು ಪರಿಸರ ಸೂಕ್ಷ್ಮ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಹೊಂದಿದೆ. ತಿರುವುಗಳು ಅಧಿಕವಿದ್ದು, ಸುರಕ್ಷಿತ ಯಾನದ ನೆಲೆಯಲ್ಲೂ ಇಲ್ಲಿ ಹೆಚ್ಚು ರೈಲು ಓಡಾಟಕ್ಕೆ ಅವಕಾಶವಿಲ್ಲ. ವೇಗವೂ ನಿಯಂತ್ರಿತ. ಹೀಗಾಗಿ ಇಲ್ಲಿ ಹಳಿ ವಿದ್ಯುದೀಕರಣ ಸವಾಲಿನ ಕಾರ್ಯ ಎಂಧು ಹೇಳಲಾಗಿದೆ. ವಿದ್ಯುದೀಕರಣಗೊಂಡ ಬಳಿಕವೂ ಈ ಮಾರ್ಗದಲ್ಲಿ ರೈಲು ಶರವೇಗದಲ್ಲಿ ಚಲಿಸದೇ ಮಿತ ವೇಗದಲ್ಲೇ ಸಂಚರಿಸಬೇಕಿದೆ.
ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್ಪ್ರೆಸ್ ರೈಲು
ಕೊಂಕಣ ರೈಲ್ವೇಯಲ್ಲಿ ಸುರತ್ಕಲ್ ಸಮೀಪದ ತೋಕೂರಿನಿಂದ ಮಹಾರಾಷ್ಟ್ರದ ರೋಹಾವರೆಗಿನ ಒಟ್ಟು 741 ಕಿ.ಮೀ. ಮಾರ್ಗದ ವಿದ್ಯು ದೀಕರಣ ನಡೆಯುತ್ತಿದ್ದು, ಮೈಸೂರು- ಮಂಗಳೂರು ನಡುವೆ ವಿದ್ಯುದೀಕರಣ ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನಿಂದ ಮೈಸೂರು ವರೆಗೆ ರೈಲು ಮಾರ್ಗ ಈಗಾಗಲೇ ವಿದ್ಯುದೀಕರಣಗೊಂಡಿದ್ದು, ಅಲ್ಲಿಂದ ಮಂಗಳೂರು ವರೆಗಿನ ಸುಮಾರು 310 ಕಿ.ಮೀ. ಮಾರ್ಗ ಬಾಕಿಯಿದೆ. ಈ ಪೈಕಿ ಮಂಗಳೂರು-ಹಾಸನ ವಿದ್ಯುದೀಕರಣಕ್ಕೆ ಮೊದಲ ಹಂತದ ಮಂಜೂರಾತಿ ದೊರಕಿದೆ ಎಂದು ಹೇಳಲಾಗಿದೆ.