ರಾಖಿ ಕಟ್ಟಿದ್ದಕ್ಕೆ ಮುಸ್ಲಿಂ ಯುವತಿಯರ ಮೇಲೆ ದಬ್ಬಾಳಿಕೆ
ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಮತ್ತೆ ಸುದ್ದಿಯಾಗಿದೆ . ವಿವಾದಿಂದಲೇ ಕುಖ್ಯಾತಿಯಲ್ಲಿರುವ ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಮತ್ತೆ ಧಾರ್ಮಿಕ ಸೌಹಾರ್ದತೆ ಕೆಡಿಸುವ ಬರಹ ಪೋಸ್ಟ ಮಾಡಲಾಗಿದೆ.
ಮಂಗಳೂರು, ಆಗಸ್ಟ್ 12 : ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ಮತ್ತೆ ಸುದ್ದಿ ಮಾಡಿದೆ. ವಿವಾದಿಂದಲೇ ಕುಖ್ಯಾತಿಯಲ್ಲಿರುವ ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ಮತ್ತೆ ಧಾರ್ಮಿಕ ಸೌಹಾರ್ದತೆ ಕೆಡಿಸುವ ಬರಹ ಪೋಸ್ಟ್ ಮಾಡಲಾಗಿದೆ.
ಈ ಬಾರಿ ರಾಖಿ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದು, ಸಹೋದರ ಸಹೋದರಿಯರ ಬಾಂಧವ್ಯದ ಹಬ್ಬವಾದ ರಕ್ಷಾ ಬಂಧನದಂದು ರಾಖಿ ಕಟ್ಟಿಸಿಕೊಂಡ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಂಗಳೂರು ಮುಸ್ಲಿಂ ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನಕಾರಿಯಾಗಿ ನಿಂದಿಸಲಾಗಿದೆ.
ಕಾಲೇಜು ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರಿಗೆ ಹುಡುಗರು ರಕ್ಷಾ ಬಂಧನವನ್ನು ಕಟ್ಟುವ ಫೋಟೋವನ್ನು ಅಪ್ ಲೋಡ್ ಮಾಡಿ ಟೀಕಿಸಿರುವ ಮುಸ್ಲಿಂ ಪೇಜ್, ಇಸ್ಲಾಂ ತತ್ವ ಆದರ್ಶಗಳನ್ನು ಗಾಳಿಗೆ ತೂರಿ ಹಿಂದೂ ಯುವಕರ ಮುಂದೆ ಕೈ ಚಾಚಿ ರಾಖಿ ಕಟ್ಟಿಸಿಕೊಳ್ಳುವವರು ಮುಸ್ಲಿಮರೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಮುಸ್ಲಿಮರಿಗೆ ಕಾಲೇಜು ಶಿಕ್ಷಣದ ಅಗತ್ಯ ಇದ್ಯಾ? ಅಥವಾ ಇಸ್ಲಾಮಿಕ್ ಶಿಕ್ಷಣದ ಅಗತ್ಯ ಇದ್ಯಾ? ಇವರನ್ನು ಶಾಲೆಗೆ ಕಳುಹಿಸಿ ಅದೇನು ಸಾಧನೆ ಮಾಡಲಿರುವಿರಿ? ಇವತ್ತು ರಾಖಿ ಕಟ್ಟುವವರು ನಾಳೆ ತಾಳಿ ಕಟ್ಟುವರು ಎಂದು ಮುಸ್ಲಿಂ ವಿದ್ಯಾರ್ಥಿನಿಗಳನ್ನು ಹೀನಾಯವಾಗಿ ನಿಂದಿಸಲಾಗಿದೆ.
ಮಂಗಳೂರು ಮುಸ್ಲಿಂ ಪೇಜ್ ನ ಈ ಕೀಳು ನಿಂದನೆ ವಿರುದ್ಧ ಭಾರಿ ಆಕ್ರೋಶ ಕೂಡ ವ್ಯಕ್ತವಾಗಿದೆ. ಈ ನಿಂದನಾ ಬರಹಗಳನ್ನು ಮುಸ್ಲಿಂ ಧರ್ಮದವರೇ ವಿರೋಧಿಸಿದ್ದು ಮಂಗಳೂರು ಮುಸ್ಲಿಂ ಪೇಜ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.