ಶಿರಸಿಯಲ್ಲಿ ಗಲಭೆ, ಮಂಗಳೂರಲ್ಲಿ 'ಸಾಮರಸ್ಯ ನಡಿಗೆ'
ಮಂಗಳೂರು, ಡಿಸೆಂಬರ್ 12: ಪರೇಶ್ ಮೇಸ್ತ ಸಾವಿನ ಹಿನ್ನಲೆಯಲ್ಲಿ ಹುಟ್ಟಿಕೊಂಡ ಗಲಭೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಹೊತ್ತಿ ಉರಿಯುತ್ತಿದೆ.
ಮಂಗಳೂರು: ಸಾಮರಸ್ಯ ನಡಿಗೆಗೂ ಮುನ್ನ ಬಸ್ ಮೇಲೆ ಕಲ್ಲು ತೂರಾಟ
ಇತ್ತ ದಕ್ಷಿಣ ಕನ್ನಡದಲ್ಲಿ ವಿವಿಧ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆಯುತ್ತಿರುವ 'ಸಾಮರಸ್ಯ ನಡಿಗೆ ಸೌಹಾದತೆಯೆಡೆಗೆ' ಕಾಲ್ನಡಿಗೆ ಜಾಥಾಕ್ಕೆ ಫರಂಗಿಪೇಟೆಯಲ್ಲಿ ಚಾಲನೆ ಸಿಕ್ಕಿದೆ.
ಚಿತ್ರನಟ ಪ್ರಕಾಶ್ ರೈ, ಮಾಜಿ ಸಚಿವ ಅಮರನಾಥ ಶೆಟ್ಟಿ ಸೇರಿದಂತೆ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬಲೂನುಗಳನ್ನು ಹಾರಿಸುವ ಮೂಲಕ ನಡಿಗೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, "ಜಿಲ್ಲೆಯ ಸಾಮರಸ್ಯಕ್ಕೆ ಕೆಲವರು ಧಕ್ಕೆಯುಂಟು ಮಾಡುತ್ತಿದ್ದಾರೆ. ಆದರೆ, ಶಾಂತಿಯನ್ನು ಕಾಪಾಡುವುದು ಜಾಥಾದ ಉದ್ದೇಶ. ಮಾಣಿಯವರೆಗೆ ಮಾತ್ರವಲ್ಲ ಜೀವನ ಪರ್ಯಂತ ಜತೆಯಾಗಿ ನಡೆಯೋಣ. ಜನರಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಜಾಥಾ ಸಾಗಲಿ," ಎಂದು ಅವರು ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯಲ್ಲಿ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಸಂಜೆ ಮಾಣಿಯಲ್ಲಿ ಸಮಾಪನಗೊಳ್ಳಲಿದೆ. ಜಾಥಾದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸೇರಿದಂತೆ ಇನ್ನಿತರ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದಾರೆ.