ಎಂಥ ಲಕ್ ಮಾರ್ರೆ; ಕೇರಳ ರಾಜ್ಯ ಲಾಟರಿಯಲ್ಲಿ 1 ಕೋಟಿ ಗೆದ್ದ ತೊಕ್ಕೊಟ್ಟಿನ ವಾಚ್ಮನ್!
ಮಂಗಳೂರು, ಏಪ್ರಿಲ್ 9: ಅದೃಷ್ಟ ಮತ್ತು ತಾಳ್ಮೆ ಅನ್ನುವುದು ಇದ್ದರೆ ಯಾವ ಕ್ಷಣದಲ್ಲಿ ಬೇಕಾದರೂ ಕೆಲವರ ಬದುಕು ತಿರುವು ಪಡೆದುಕೊಳ್ಳುತ್ತದೆ ಅನ್ನುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ತೊಕ್ಕೊಟ್ಟು ಸಮೀಪದ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದಾರೆ.
ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟಿನ ಖಾಸಗಿ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಆಗಿರುವ ಕೇರಳ ಮೂಲದ ವ್ಯಕ್ತಿಗೆ ಕೇರಳ ರಾಜ್ಯದ ಭಾಗ್ಯಮಿತ್ರ ಲಾಟರಿಯಲ್ಲಿ1 ಕೋಟಿ ರೂ. ಬಂಪರ್ ಬಹುಮಾನ ಲಭಿಸಿ ಅದೃಷ್ಟ ಖುಲಾಯಿಸಿದೆ.
ಮೂಲತಃ ಕೇರಳದ ಕಲ್ಲಿಕೋಟೆ ನಿವಾಸಿಯಾಗಿರುವ ಮೊಯ್ದಿನ್ ಕುಟ್ಟಿ(65) ಒಂದು ಕೋಟಿ ರೂ. ಬಂಪರ್ ಬಹುಮಾನ ವಿಜೇತ ಅದೃಷ್ಟಶಾಲಿಯಾಗಿದ್ದು, ಸದ್ಯ ಸ್ಥಳೀಯವಾಗಿ ಎಲ್ಲರ ಬಾಯಲ್ಲೂ ಇವರದ್ದೇ ಸುದ್ದಿಯಾಗಿದೆ.
ಮೊಯ್ದಿನ್ ಕುಟ್ಟಿ ಅವರು ಪತ್ನಿ, ಮೂವರು ಮಕ್ಕಳನ್ನು ಹೊಂದಿದ್ದು, ಕೆಲಸ ಅರಸುತ್ತಾ ದಕ್ಷಿಣ ಕನ್ನಡದ ತೊಕ್ಕೊಟ್ಟಿಗೆ ಬಂದು ಕೆಲವು ವರ್ಷಗಳಿಂದ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಲಾಟರಿ ಖರೀದಿಸುವ ಹವ್ಯಾಸ ಹೊಂದಿದ್ದ ಅವರು, ಕಳೆದ ವಾರ ತೊಕ್ಕೊಟ್ಟಿನ ಟೈಲರ್ ರವಿ ಎಂಬವರಿಂದ 500 ರೂ. ಸಾಲ ಪಡೆದು ಉಪ್ಪಳಕ್ಕೆ ಹೋಗಿದ್ದು, ಏ.4ರಂದು ಡ್ರಾಗೊಳ್ಳುವ 100 ರೂ. ಬೆಲೆಯ ಭಾಗ್ಯಮಿತ್ರ ಟಿಕೆಟ್ ಖರೀದಿಸಿದ್ದರು.
ಈ ಲಾಟರಿಯಲ್ಲಿ ಐವರಿಗೆ ತಲಾ 1 ಕೋಟಿ ರೂ. ಬಂಪರ್ ಬಹುಮಾನ ಲಭಿಸಿದ್ದು, ಈ ಪೈಕಿ ಮೊಯ್ದಿನ್ ಕುಟ್ಟಿ ಅದೃಷ್ಟಶಾಲಿಗಳಲ್ಲಿ ಒಬ್ಬರಾಗಿದ್ದಾರೆ. ತಾನು ಸಾಲವಾಗಿ ನೀಡಿದ ಹಣದಲ್ಲಿ ಮೊಯ್ದಿನ್ ಕುಟ್ಟಿ ಅವರಿಗೆ 1 ಕೋಟಿ ರೂ. ಬಹುಮಾನ ಬಂದಿರುವುದು ಖುಷಿ ಕೊಟ್ಟಿದೆ ಎಂದು ತೊಕ್ಕೊಟ್ಟಿನ ಟೈಲರ್ ರವಿ ಹೇಳಿದ್ದಾರೆ.