ಹೃದ್ರೋಗಿಯನ್ನು ಸಕಾಲಕ್ಕೆ ಆಸ್ಪತ್ರೆ ಸೇರಿಸಿ ಮಾನವೀಯತೆ ಮೆರೆದ ಎಸ್ಸೈ
ಮಂಗಳೂರು, ಮಾರ್ಚ್ 25: ಹೃದಯ ರೋಗಿಯೊಬ್ಬರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಕಾವೂರು ಎಸೈ ಉಮೇಶ್ ಕುಮಾರ್ ಮಾನವೀಯತೆ ಮೆರೆದ ಘಟನೆ ನಡೆದಿದೆ.
ದೇರೆಬೈಲ್ ನ ಲ್ಯಾಂಡ್ ಲಿಂಕ್ಸ್ ಟೌನ್ ಶಿಪ್ ನ ಲ್ಲಿ ವಾಸವಾಗಿರುವ ಮಂಗಳೂರಿನ ಖಾಸಗಿ ಶಾಲೆಯೊಂದರ ಶಿಕ್ಷಕಿ ಶ್ರಾವಣಿ ಎಂಬವರ ಪತಿ ದೀಪಕ್ ಎಂಬವರೇ ಪೊಲೀಸ್ ಅಧಿಕಾರಿಯ ಸಮಯೋಚಿತ ಸಹಾಯದಿಂದ ಬದುಕಿ ಬಂದವರು. ದೀಪಕ್ ಗೆ ಕೆಲ ದಿನಗಳ ಹಿಂದೆಯಷ್ಟೇ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯದ ಖಾಯಿಲೆಗೆ ಸಂಬಂಧಿಸಿ ಶಸ್ತ್ರ ಚಿಕಿತ್ಸೆ ನಡೆದಿತ್ತು.
ಮೊನ್ನೆ ಮಧ್ಯರಾತ್ರಿ ಮತ್ತೆ ಎದೆನೋವು ಉಂಟಾಗಿ ಗಂಭೀರ ಸ್ಥಿತಿ ತಲುಪಿದರು ತಕ್ಷಣ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಎದುರಾಯಿತು. ಆದರೆ ಆಗ, ಯಾವುದೇ ವಾಹನ ಸಿಗಲಿಲ್ಲ.
ಲ್ಯಾಂಡ್ ಲಿಂಕ್ಸ್ ನಿಂದ ದೇರೆಬೈಲ್ ಮುಖ್ಯ ರಸ್ತೆಗೆ ಹೇಗೋ ತಲುಪಿದ ದೀಪಕ್ ಹಾಗೂ ಶ್ರಾವಣಿಯವರು ರಸ್ತೆಯಲ್ಲಿ ವಿರಳವಾಗಿ ಹೋಗುತ್ತಿದ್ದ ವಾಹನಗಳಿಗೆ ಕೈ ಅಡ್ಡ ಹಿಡಿದರೂ ಯಾರೂ ವಾಹನ ನಿಲ್ಲಿಸಲಿಲ್ಲ. ಈ ನಡುವೆ ಇದೇ ದಾರಿಯಾಗಿ ರಾತ್ರಿ ಗಸ್ತು ವಾಹನದಲ್ಲಿ ತಿರುಗಾಡುತ್ತಿದ್ದ ಕಾವೂರು ಎಸೈ ಉಮೇಶ್ ಕುಮಾರ್ ವಾಹನ ನಿಲ್ಲಿಸಿ ವಿಚಾರಿಸಿದಾಗ ದಂಪತಿಯ ಅಸಹಾಯಕತೆ ಗೊತ್ತಯಿತು. ಕೂಡಲೇ ವಾಹನಕ್ಕೆ ಅವರನ್ನು ಹತ್ತಿಸಿ ನೀರು ಕೊಟ್ಟು ಉಪಚರಿಸಿ ನಗರದ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ಸಿಕ್ಕಿರುವುದನ್ನು ಖಾತ್ರಿ ಪಡಿಸಿ ಪುನಃ ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ.
ಎಸೈ ಉಮೇಶ್ ಕುಮಾರ್ ಹಾಗೂ ಅವರ ಜತೆಗಿದ್ದ ಪೊಲೀಸರ ಮಾನವೀಯತೆ ನೋಡಿದ ಶಿಕ್ಷಕಿ ಶ್ರಾವಣಿ, ಗೃಹ ಸಚಿವ ಪರಮೇಶ್ವರ್ ಹಾಗೂ ಪೊಲೀಸ್ ಕಮಿಷನರ್ , ಜಿಲ್ಲಾಧಿಕಾರಿಗೆ ಪತ್ರ ಬರೆದು ಕಾವೂರು ಎಸೈ ಉಮೇಶ್ ಕುಮಾರ್ ಅವರ ಮಾನವೀಯ ಕಾರ್ಯವನ್ನು ಗುರುತಿಸಿ ಅಭಿನಂದಿಸಬೇಕೆಂದು ಕೋರಿದ್ದಾರೆ.