ಮಂಗಳೂರು; ಹೆದ್ದಾರಿಗೆ ಭೂಸ್ವಾಧೀನ, ರೈತರು ಕೋರ್ಟ್ಗೆ
ಮಂಗಳೂರು, ಅಕ್ಟೋಬರ್ 19; ರಸ್ತೆ ಅಭಿವೃದ್ಧಿ ಆಗಬೇಕೆಂಬುದು ಎಲ್ಲರ ಆಶಯ. ಆದರೆ ರಸ್ತೆ ಅಭಿವೃದ್ಧಿಯ ನೆಪದಲ್ಲಿ ಮಂಗಳೂರಿನಲ್ಲಿ ಕೃಷಿಕರಿಗೆ ಮಹಾಮೋಸವೊಂದು ನಡೆದಿದೆ. ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಪರಿಹಾರದ ವಿಚಾರದಲ್ಲಿ ಕೃಷಿಕರಿಗೆ ಅನ್ಯಾಯ ಆಗಿದೆ ಎಂದು 200ಕ್ಕೂ ಅಧಿಕ ಕೃಷಿಕರು ಈಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಂಗಳೂರಿನಿಂದ ಮೂಡಬಿದಿರೆಯಾಗಿ ಕಾರ್ಕಳವನ್ನು ಸಂಪರ್ಕಿಸುವ ರಸ್ತೆ ಬಹಳ ಕಿರಿದಾಗಿದ್ದು, ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತದೆ. ರಸ್ತೆ ಅಗಲೀಕರಣ ಆಗಬೇಕೆಂದು ಹಲವು ದಶಕಗಳಿಂದ ಜನರು ಒತ್ತಾಯವನ್ನು ಮಾಡುತ್ತಿದ್ದಾರೆ.
ನೈಸ್ ರಸ್ತೆ ದರೋಡೆ ಬಗ್ಗೆ ಕೇಳಿದ್ರೆ ಅಶೋಕ್ ಖೇಣಿ ಬಾಯಲ್ಲಿ ಬಂದ ಮಾತುಗಳು ಕೇಳಿ!
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಈ ರಸ್ತೆಗಾಗಿ ವಿಶೇಷ ಅನುದಾನವನ್ನು ಮೀಸಲಿರಿಸಿ ರಸ್ತೆ ಅಗಲೀಕರಣಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಆದರೆ ಈ ರಸ್ತೆ ಅಗಲೀಕರಣ ಮಾಡುವ ಸಲುವಾಗಿ ಭೂ ಸ್ವಾಧೀನ ಮಾಡಿಕೊಂಡ ಅಧಿಕಾರಿಗಳು ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಿದ್ದಾರೆ ಅಂತಾ ಕೃಷಿಕರು ಆರೋಪಿಸಿದ್ದಾರೆ. ಈ ಮಹಾಮೋಸದ ವಿರುದ್ಧ 200ಕ್ಕೂ ಅಧಿಕ ಕೃಷಿಕರು ಹೈಕೋರ್ಟ್ ಮೊರೆ ಹೋಗಿ ಭೂಸ್ವಾಧೀನ ಪ್ರಕ್ರಿಯೆ ಗೆ ತಡೆತಂದಿದ್ದಾರೆ.
2020ರಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರ ಸಂಖ್ಯೆ 1.20 ಲಕ್ಷ
ಮಂಗಳೂರು-ಮೂಡಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ಜನರ ಬಹುನಿರೀಕ್ಷಿತ ಯೋಜನೆಯಾಗಿದೆ. ಒಟ್ಟು 45 ಕಿ.ಮೀ. ದೂರದ ಯೋಜನೆಗೆ 851.88 ಕೋಟಿ ರೂಪಾಯಿ ವೆಚ್ಚದ ಅಗಲೀಕರಣ ಕಾಮಗಾರಿಯ ಭೂಸ್ವಾಧೀನ ವಿಚಾರದಲ್ಲಿ ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ಕೃಷಿಕರು ಆರೋಪಿಸಿದ್ದಾರೆ.
ಧಾರವಾಡ ಕೃಷಿ ವಿವಿ ಘಟಿಕೋತ್ಸವ; 53 ಚಿನ್ನದ ಪದಕ ಪ್ರದಾನ
ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂದು 12 ಗ್ರಾಮದ 200ಕ್ಕೂ ಹೆಚ್ಚು ಕೃಷಿಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಗಲೀಕರಣ ಕಾಮಗಾರಿಗೆ ಸ್ವಾಧೀನವಾಗುವ ಕೃಷಿ ಭೂಮಿಗೆ ಇಲಾಖೆಯಿಂದ ಸಿಗುವ ಪರಿಹಾರ ಸೆಂಟ್ಸ್ ಒಂದಕ್ಕೆ 27 ಸಾವಿರ ರೂಪಾಯಿಯಾದರೆ ಭೂ ಪರಿವರ್ತನೆ ಆಗಿರುವ ಭೂಮಿಗೆ ಸೆಂಟ್ಸ್ ಒಂದಕ್ಕೆ 2 ಲಕ್ಷದ 68 ಸಾವಿರ ರೂಪಾಯಿಯಾಗಿದೆ. ಅಧಿಕಾರಿಗಳ ಈ ತಾರತಮ್ಯ ನೀತಿಯ ವಿರುದ್ದ ಕೃಷಿಕರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೃಷಿ ಭೂಮಿಗೆ ಮಾರುಕಟ್ಟೆ ದರಕ್ಕಿಂತ 4 ಪಟ್ಟು ಹೆಚ್ಚು ನೀಡಬೇಕೆಂಬ ಕಾನೂನು ಇದೆ. ಆದರೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮಾರ್ಗಸೂಚಿ ಪಾಲನೆ ಮಾಡಿಲ್ಲ ಎಂದು ಕೃಷಿಕರು ಆರೋಪಿಸಿದ್ದಾರೆ. ಈ ಮೋಸದ ಬಗ್ಗೆ ಕೃಷಿಕರು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರಿಗೂ ದೂರು ನೀಡಿದ್ದಾರೆ.
ಹೀಗಾಗಿ ಕೃಷಿಕರಿಗೆ ನ್ಯಾಯಯುತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ಸಹ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸದ್ಯ ಹೈಕೋರ್ಟ್ನಿಂದ ಕಾಮಗಾರಿಗೆ ತಡೆಯಾಜ್ಞೆ ಬಂದಿದ್ದು ನ್ಯಾಯಯುತ ಪರಿಹಾರ ಸಿಗುವವರೆಗೂ ಭೂಮಿ ಬಿಟ್ಟು ಕೊಡಲ್ಲ ಅಂತಾ ಮಿಜಾರು ಪ್ರದೇಶದ ಭೂ ಸಂತ್ರಸ್ತ ಕೃಷಿಕ ಬ್ರಿಜೇಶ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಬೆಲೆ ನಿಗದಿ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮಾರ್ಗಸೂಚಿಯನ್ನು ಪಾಲನೆ ಮಾಡಿಲ್ಲ. ಮಾರ್ಗಸೂಚಿಯಲ್ಲಿ ಕೃಷಿ ಮತ್ತು ಪರಿವರ್ತಿತ ಎಂದು ವಿಂಗಡನೆ ಇಲ್ಲದಿದ್ದರೂ ಇದನ್ನು ಇಲ್ಲಿ ಜಾರಿ ಮಾಡಲಾಗಿದೆ.
ಇನ್ನು ಕಳೆದ 20 ವರ್ಷಗಳಿಂದ ಹೆದ್ದಾರಿ ಬದಿಯ ಭೂಮಿಯನ್ನು ಪರಿವರ್ತನೆ ಮಾಡೋಕೆ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಹೆದ್ದಾರಿ ಅಗಲೀಕರಣ ಆಗುವ ಉದ್ದೇಶದಿಂದ ಭೂ ಪರಿವರ್ತನೆಗೆ ಅಧಿಕಾರಿಗಳು ಸಮ್ಮತಿ ಸೂಚಿಸಿರಲಿಲ್ಲ.
ಆದರೆ ಕಳೆದ ಒಂದೂವರೆ ವರ್ಷದಿಂದ ಹಲವು ಎಕರೆ ಭೂಮಿಯನ್ನು ಭೂ ಪರಿವರ್ತನೆ ಮಾಡಲಾಗಿದೆ. ಅಧಿಕಾರಿಗಳ ಈ ದಂಧೆಯ ಜೊತೆ ಶಾಮೀಲಾಗಿ ಪರಿವರ್ತನೆ ಮಾಡಿಸಿಕೊಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಒಟ್ಟಿನಲ್ಲಿ ಅಧಿಕಾರಿಗಳ ಈ ತಾರತಮ್ಯದ ವಿರುದ್ದ ಕೃಷಿಕರು ಕೋರ್ಟ್ ಮೆಟ್ಟಿಲೇರಿದ್ದು ಕೋರ್ಟ್ ಯಾವ ತೀರ್ಪು ನೀಡುತ್ತೆ? ಎಂಬುದನ್ನು ಕಾದು ನೋಡಬೇಕಾಗಿದೆ.