ಅಪಘಾತದಲ್ಲಿ ಮಡಿದ ಜೀವನ್ ಫರ್ನಾಂಡೀಸ್ ಆತ್ಮ ಅಮರ
ಮಂಗಳೂರು, ಏ. 21: ಮಗ ಕಳೆದು ಹೋದ ಕಹಿನೆನಪು ಮುಖದಲ್ಲಿ ಮರೆಯಾಗಿಲ್ಲ. ಮಗನನ್ನು ಮಣ್ಣು ಮಾಡಿದ್ದೇವೆ. ಆದರೆ ಆತನ ದೇಹದ ವಿವಿಧ ಅಂಗಾಂಗಗಳು ಇನ್ನು ಮಿಡಿಯುತ್ತಿವೆ. ಅದೇ ನಮಗೆ ಸಮಾಧಾನ. ಎಲ್ಲರ ಪ್ರಾರ್ಥನೆಯಂತೆ ಆತನ ಆತ್ಮಕ್ಕೆ ಶಾಂತಿ ಸಿಗಲಿ...
ಇದು ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಜೀವನ್ ವಿಜಯ್ ಫರ್ನಾಂಡಿಸ್ ಹೆತ್ತವರ ಮನದಾಳದ ಮಾತು. ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರು ಗ್ರಾಮದ ಕೊಪ್ಪಲದಲ್ಲಿರುವ ವಿಜಯ್ ಮನೆಗೆ ಭೇಟಿ ನೀಡಿದ 'ಒನ್ ಇಂಡಿಯಾ' ಮುಂದೆ ಜೀವನ್ ಅವರ ತಂದೆ ಜೆರೋಂ ಫರ್ನಾಂಡಿಸ್, ತಾಯಿ ಗ್ರೇಸಿ ಫರ್ನಾಂಡಿಸ್ ಮಗನ ಅಗಲಿಕೆ ದುಃಖದ ನಡುವೆಯೂ ಸಮಾಧಾನದ ನಿಟ್ಟುಸಿರು ಅವರದ್ದು.[ಕುಡ್ಲದಲ್ಲಿ ಮಿಡಿದ ಜೀವಂತ ಹೃದಯ ಬೆಂಗಳೂರಿಗೆ]
ನಾವೇನು ದುಡ್ಡಿಗಾಗಿ ಮಗನ ಕಿಡ್ನಿ, ಲಿವರ್, ಹೃದಯವನ್ನು ದಾನ ಮಾಡಿಲ್ಲ. ಯಾರಿಗಾದರೂ ಜೀವದಾನವಾಗಲಿ. ಆಗ ಮಗನ ಆತ್ಮಕ್ಕೂ ಶಾಂತಿ ಸಿಗುತ್ತದೆ ಎಂದು ದಾನ ಮಾಡಿದ್ದೇವೆ. ದಾನ ಪಡೆದವರು ಯಾರು? ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ದೇಹದ ಅಂಗಾಂಗಗಳ ಜೋಡಣೆ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ತಿಳಿದು ತೃಪ್ತಿಗೊಂಡೆವು ಎನ್ನುವಾಗ ಅವರು ಗದ್ಗದಿತರಾದರು.
ಮಂಗಳೂರಿನ ಅಡ್ಯಾರ್ ಬಳಿ ಏ. 9ರಂದು ನಡೆದ ಬೈಕ್ ಅಪಘಾತದಲ್ಲಿ ಜೀವನ್ ವಿಜಯ್ ಫರ್ನಾಂಡಿಸ್ ಗಂಭೀರ ಗಾಯಗೊಂಡಿದ್ದರು. ಅವರ ಮಿದುಳು ನಿಷ್ಕ್ರಿಯವಾಗಿತ್ತು. ಜೀವನ್ ಬದುಕುಳಿಯುವುದು ಅಸಾಧ್ಯ ಎಂದು ಖಾತರಿಯಾದ ಬಳಿಕ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿತ್ತು.[ಬೆಂಗಳೂರಿನ ಹೃದಯಕ್ಕೆ ಹೈದರಾಬಾದ್ ನಲ್ಲಿ ಹೊಸ ಜೀವ]
ಮಧ್ಯಮ ವರ್ಗಕ್ಕೆ ಸೇರಿದ ಈ ಕುಟುಂಬ ಕೃಷಿ ಚಟುವಟಿಕೆಯನ್ನು ಆಧರಿಸಿಕೊಂಡು ಜೀವನ ಸಾಗುತ್ತಿದೆ. ಜೀವನ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಗಳು, ಇನ್ನೊಬ್ಬ ಮಗಳು ಮತ್ತು ಮಗ ಇದ್ದಾರೆ.
ಮೇ 4ರಂದು ಜೀವನ್ ನ ಸಹೋದರಿಯೊಬ್ಬರಿಗೆ ಮದುವೆ ನಿಶ್ಚಯ ಮಾಡಲಾಗಿದೆ. ಆದೆರ ದಿಢೀರ್ ಎಂದು ಬಂದೆರಗಿದ ಮನೆ ಮಗನ ಸಾವು ನೋವಿನ ಕೂಪದಲ್ಲಿ ದೂಡಿದೆ.
ಜೀವನ್ ನ ಕೊನೆಯ ಕ್ಷಣಗಳನ್ನು ಬಿಚ್ಚಿಡುವ ತಾಯಿಯ ಮಾತುಗಳು ಎಂಥವರ ಕರುಳನ್ನು ಹಿಂಡುತ್ತದೆ. ಏ.9ರಂದು ಸಂಜೆ ಹೊತ್ತು ಮನೆಗೆ ಬಂದವನು, ಊಟ ಬಡಿಸಲು ಹೇಳಿದ್ದ. ನಾನು ಅನ್ನಕ್ಕೆ ಬಸಳೆ ಸಾರು ಹಾಕಿ ಬಡಿಸಿದೆ. ಅದನ್ನು ನೋಡಿ ಅಮ್ಮ ಏಕೆ ಇಂದು ಮೀನು ಸಾರು ಮಾಡಿಲ್ಲ ಎಂದು ಕೇಳಿದ. ನಾನಿವತ್ತು ತುಂಬಾ ಕೆಲಸದಲ್ಲಿದ್ದೆ. ನಾಳೆ ಮೀನು ಸಾರು ಮಾಡುತ್ತೇನೆಂದೆ. ಊಟ ಮಾಡಿದ ತಕ್ಷಣ ಬಟ್ಟೆ ಬದಲಿಸಿ ಹೊರಟು ನಿಂತ. ಈ ರಾತ್ರಿ ಹೊತ್ತು ಎಲ್ಲಿಗೆ ಎಂದು ತಡೆದೆ. ಸ್ನೇಹಿತನ ಮನೆಯಲ್ಲಿ ಮದುವೆಯಿದೆ. ನಾನೀಗ ಅಲ್ಲಿಗೆ ಹೋಗದೇ ಇದ್ದರೆ ಅವರು ನಮ್ಮ ಮದುವೆಗೆ ಬರುವುದಿಲ್ಲ ಎಂದು ಹಠ ಮಾಡಿದ. ನನ್ನ ಪ್ರತ್ಯುತ್ತರಕ್ಕೆ ಕಾಯದೇ ಹೊರಟೇ ಹೋದವ ವಾಪಸ್ ಬರಲೇ ಇಲ್ಲ ಎಂದು ಹೇಳುವಾಗ ತಾಯಿ ಗ್ರೇಸಿಯ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಜೀವನ್ ಸಹೋದರಿಯ ಬಯಕೆಯಂತೆ ನಾವು ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದೆವು. ಇದು ನಮ್ಮ ಮಗನ ನೆನಪನ್ನು ಗಟ್ಟಿಕಗೊಳಿಸುತ್ತದೆ ಎಂದು ಹೇಳುತ್ತಾರೆ.
ಜೀವನ್ ಶಾಲಾ ದಿನಗಳಿಂದನೂ ನಮ್ಮ ಕಣ್ಣು ತಪ್ಪಿಸಿ ಬೈಕ್ ಓಡಿಸುತ್ತಾ ಇದ್ದ. ಯಾರಾದರೂ ಬೈಕ್ ಕೊಟ್ಟರೆ ಸಾಕು, ಊಟವೂ ಬೇಡ, ಏನೂ ಬೇಡ. ಒಮ್ಮೆ ಹೀಗೆ ಹಠ ಮಾಡಿ ಮನಸ್ತಾಪನೂ ಮಾಡಿಕೊಂಡಿದ್ದ. ಆದರೆ ಈಗ ಅದೇ ಬೈಕ್ ಹುಚ್ಚು ಆತನ ಜೀವ ಮತ್ತು ಜೀವನವನ್ನೇ ಬಲಿ ಪಡೆದುಕೊಂಡಿತು ಎಂದು ಹೇಳುವ ತಾಯಿ ಗ್ರೇಸಿ ಬೈಕ್ ಇರುವುದು ಸಂಚಾರಕ್ಕೆ ಹೊರತು ಸರ್ಕಸ್ ಗೆ ಅಲ್ಲ ಎಂದು ಹೇಳಲು ಮರೆಯುವುದಿಲ್ಲ.