ಬೆಳಗ್ಗೆ ಬಿಜೆಪಿ ಸೇರಿದ್ದ ಸದಸ್ಯೆ ಸಂಜೆ ಮರಳಿ ಕಾಂಗ್ರೆಸ್ಗೆ; ಆಪರೇಷನ್ ಕಮಲ ಠುಸ್
ಮಂಗಳೂರು, ಫೆಬ್ರವರಿ 10: ಬೆಳಗ್ಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ವೀರಕಂಬ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯೆ ಲಲಿತಾ ಅವರು ಸಂಜೆ ವೇಳೆಗೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ.
ಈ ಬಾರಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮ ಪಂಚಾಯತ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಸಮಬಲ ಸಾಧಿಸಿದ್ದರು. ಹೀಗಾಗಿ ಈ ಗ್ರಾಮ ಪಂಚಾಯತ್ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು.
ಈ ಹಿನ್ನೆಲೆ ಅಧಿಕಾರ ಪಡೆಯಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಅದರಂತೆ ಅಲ್ಲಿನ ಗ್ರಾಮ ಪಂಚಾಯತಿ ಸದಸ್ಯೆ ಲಲಿತಾ ಅವರನ್ನು ಬಿಜೆಪಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಭಾನುವಾರ ಬೆಳಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯೆ ಲಲಿತಾ ಅವರು ಬಿಜೆಪಿ ಸೇರಿದ್ದರು.
ಈ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಅಲರ್ಟ್ ಆಗಿದ್ದು, ಸ್ವತಃ ಮಾಜಿ ಸಚಿವ ಬಿ.ರಮಾನಾಥ್ ರೈ ಅವರನ್ನೇ ವೀರಕಂಬಕ್ಕೆ ಕರೆಸಿ ಲಲಿತಾ ಅವರನ್ನು ಮರಳಿ ಕಾಂಗ್ರೆಸ್ಗೆ ಕರೆತರುವ ಪ್ರಯತ್ನ ಮಾಡಿದ್ದರು. ರಮಾನಾಥ ರೈ ಅವರು ವೀರಕಂಬಕ್ಕೆ ಬಂದು ಮಾತನಾಡುತ್ತಿದ್ದಂತೆ ಲಲಿತಾ ಅವರು ಮತ್ತೆ ತನ್ನ ನಿರ್ಧಾರವನ್ನು ಬದಲಿಸಿದ್ದು, ಮತ್ತೆ ಕಾಂಗ್ರೆಸ್ಗೆ ಮರಳುವುದಾಗಿ ತಿಳಿಸಿದ್ದಾರೆ.
ಹೀಗಾಗಿ ಸಂಜೆ ವೇಳೆಗೆ ಲಲಿತಾ ಅವರು ರೈ ಸಮ್ಮುಖದಲ್ಲಿ ಮರಳಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಇದೀಗ ವೀರಕಂಬ ಗ್ರಾಮ ಪಂಚಾಯತ್ನಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಈ ಹಿಂದೆ ಈ ಗ್ರಾಮ ಪಂಚಾಯತ್ನಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಸದಸ್ಯರು ಆಡಳಿತ ನಡೆಸಿದ್ದರು.