ಕುಮಾರಸ್ವಾಮಿ ಬಿಚ್ಚಿಟ್ಟ ಮಂಗಳೂರು ಗೋಲಿಬಾರ್ ನ ಇನ್ನೊಂದು ಮುಖ
ಬೆಂಗಳೂರು, ಫೆಬ್ರವರಿ 19: ವಿಧಾನಸಭೆ ಅಧಿವೇಶನದಲ್ಲಿ ಇಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಭಾಷಣ ಗಮನಸೆಳೆಯಿತು.
ಅವರ ಭಾಷಣ ಮುಖ್ಯವಾಗಿ ಮಂಗಳೂರು ಗಲಭೆ ಕುರಿತೇ ಆಗಿತ್ತು. ಮಂಗಳೂರು ಗಲಬೆ ಕುರಿತು ತಿಳಿಯದ ಸತ್ಯಗಳನ್ನು ವಿಧಾನಸಭೆಯಲ್ಲಿ ತೆರೆದಿಟ್ಟರು.
ಮಂಗಳೂರು ಗೋಲಿಬಾರ್: ಸರ್ಕಾರವನ್ನು ಬೆತ್ತಲು ಮಾಡಿದ ಕುಮಾರಸ್ವಾಮಿ
ಮಂಗಳೂರು ಗಲಭೆ ಕುರಿತು ಮಾತನಾಡಿದ ಕುಮಾರಸ್ವಾಮಿ, ಗಲಭೆಯ ಇನ್ನೊಂದು ಮುಖವನ್ನು ತೆರೆದಿಟ್ಟರು. ಪೊಲೀಸರು ನೀಡಿದ್ದ ಮಾಹಿತಿಯಂತೆ ಗಲಭೆ ವ್ಯವಸ್ಥಿತ ಕೃತ್ಯವಾಗಿತ್ತು, ಆದರೆ ಕುಮಾರಸ್ವಾಮಿ ಪೊಲೀಸರ ಹೇಳಿಕೆ ಸುಳ್ಳೆಂದು ವಾದಿಸಿ ದಾಖಲೆಗಳನ್ನೂ ಸದನದಲ್ಲಿ ನೀಡಿದರು.
ಸಿಎಎ ಕುರಿತು ಮಂಗಳೂರು ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟಿದ್ದರು. ಅವರಿಬ್ಬರಿಗೂ ಸರ್ಕಾರ ಮೊದಲಿಗೆ ಪರಿಹಾರ ಘೊಷಿಸಿತ್ತಾದರೂ ನಂತರ ಪರಿಹಾರವನ್ನು ಹಿಂಪಡೆಯಿತು.
ವಿಧಾನಸಭೆಯಲ್ಲಿ 'ವಿವಾದಿತ' ಕವಿತೆ ಓದಿದ ಕುಮಾರಸ್ವಾಮಿ
ಗಲಭೆ ನಂತರ ಮಂಗಳೂರಿಗೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಗಲಭೆಯಲ್ಲಿ ಗಾಯಾಳುಗಳಾಗಿದ್ದವರನ್ನೂ ಭೇಟಿ ಮಾಡಿದ್ದರು. ಗಾಯಾಳುಗಳ ಯಾತನಾಮಯ ಬದುಕನ್ನು ಅವರಿಂದು ವಿಧಾನಸಭೆಯಲ್ಲಿ ತೆರೆದಿಟ್ಟರು.
'ಗೋಲಿಬಾರ್ ನಲ್ಲಿ ಮೃತರಾದವರ ಮಾಹಿತಿ ಮಾತ್ರವೇ ಕೊಟ್ಟರು'
'ಗೋಲಿಬಾರ್ನಲ್ಲಿ ಹತರಾದ ಇಬ್ಬರ ಮಾಹಿತಿಯನ್ನು ಮಾತ್ರವೇ ಪೊಲೀಸರು ನೀಡಿದರು, ಆದರೆ ಗೋಲಿಬಾರ್ನಿಂದ ಗಾಯಗೊಂಡ ಹತ್ತು ಜನರ ಮಾಹಿತಿಯನ್ನು ಅವರು ನೀಡಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
''ಪಿಎಚ್ಡಿ ವ್ಯಾಸಾಂಗ ಮಾಡುತ್ತಿದ್ದವ ಹೊಟ್ಟೆಗೆ ಗುಂಡು''
''ಪಿಎಚ್ಡಿ ವ್ಯಾಸಾಂಗ ಮಾಡುತ್ತಿದ್ದ ಆಟೋ ಡ್ರೈವರ್ ಮಗನೊಬ್ಬನಿಗೆ ಪೊಲೀಸರ ಗುಂಡು ಹೊಟ್ಟೆಗೆ ತಗುಲಿತ್ತು. ಆತ ಜೀವನ್ಮರಣದ ನಡುವೆ ಈಗಲೂ ಹೋರಾಡುತ್ತಿದ್ದಾನೆ. ಆ ಬಡ ಕುಟುಂಬ ಈವರೆಗೆ 25 ಲಕ್ಷ ಖರ್ಚು ಮಾಡಿದ್ದಾರೆ. ಆತ ಮಿತ ಭಾಷೆ, ಸರಳ, ಸಜ್ಜನಿಕೆಯ ಮನುಷ್ಯ, ಆತನ ಬಡಕುಟುಂಬಕ್ಕೆ ಈಗ ಯಾರು ದಿಕ್ಕು'' ಎಂದು ಸದನದಲ್ಲಿ ಪ್ರಶ್ನೆ ಮಾಡಿದರು.
ಎಂಜಿನಿಯರಿಂದ ವಿದ್ಯಾರ್ಥಿಗೆ ಗುಂಡು ತಗುಲಿದೆ: ಕುಮಾರಸ್ವಾಮಿ
'ಇನ್ನೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಪೊಲೀಸರು ಹೊಡೆದ ಗುಂಡು ಬಿದ್ದಿದೆ. ಆತ ಜಿಲ್ಲಾಧಿಕಾರಿಗಳ ಕಚೇರಿಗೆ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲೆಂದು ಬಂದಿದ್ದ. ಆತ ಈಗಲೂ ಆಸ್ಪತ್ರೆಯಲ್ಲಿದ್ದಾನೆ ಆತನಿಗೆ ಯಾರ ಸಹಾಯವೂ ದೊರೆತಿಲ್ಲ' ಎಂದು ಕುಮಾರಸ್ವಾಮಿ ಹೇಳಿದರು.
ಬಿಹಾರದಿಂದ ಬಂದವನಿಗೆ ಭುಜಕ್ಕೆ ಗುಂಡು: ಕುಮಾರಸ್ವಾಮಿ
'ಬಿಹಾರದಿಂದ ಕೆಲಸ ಹುಡುಕಿ ಒಬ್ಬ ಮಂಗಳೂರಿಗೆ ಬಂದಿದ್ದ ಅವನ ಭುಜಕ್ಕೆ ಗುಂಡು ತಗುಲಿದೆ, ಅವನಿಗೆ ಕೆಲಸ ಮಾಡಲಾಗುತ್ತಿಲ್ಲ. ಕಬ್ಬಿಣ ವೆಲ್ಡ್ ಮಾಡುವ ಕಾರ್ಮಿಕ ಆತ, ಆತನ ಭವಿಷ್ಯ ಏನು?' ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
ಒಬ್ಬ ಜನಪ್ರತಿನಿಧಿಯೂ ಭೇಟಿ ಮಾಡಲಿಲ್ಲ: ಕುಮಾರಸ್ವಾಮಿ
'ಒಬ್ಬ ಸರ್ಕಾರಿ ಅಧಿಕಾರಿ, ಸರ್ಕಾರದ ಪ್ರತಿನಿಧಿ ಗಾಯಾಳುಗಳನ್ನು ಭೇಟಿ ಮಾಡಿಲ್ಲ, ಅವರ ಕಷ್ಟ ಸುಖ ಆಲಿಸಲಿಲ್ಲ. ಒಬ್ಬ ಜನಪ್ರತಿನಿಧಿಯೂ ಅವರನ್ನು ಭೇಟಿ ಮಾಡಿರಲಿಲ್ಲ' ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿಯೇ ಲಾಠಿಚಾರ್ಜ್ ಮಾಡಿದರು: ಎಚ್ಡಿಕೆ
ಪೊಲೀಸರು ಆಸ್ಪತ್ರೆಗೆ ನುಗ್ಗಿದರು, ಆಸ್ಪತ್ರೆಯಲ್ಲಿಯೇ ಲಾಠಿ ಚಾರ್ಜ್ ಮಾಡಿದರು. ಆಸ್ಪತ್ರೆಯಲ್ಲಿದ್ದ ಪೇಶೆಂಟ್ಗಳ ಗತಿ ಏನು? ಪೊಲೀಸರಿಗೆ ಸರ್ಕಾರವೇ ಆದೇಶ ನೀಡಿತ್ತಾ? ಅಥವಾ ಕಾಣದ ಕೈಗಳ ಆದೇಶದಿಂದ ಪೊಲೀಸರು ಹೀಗೆ ವರ್ತಿಸಿದರಾ? ಎಂದು ಪ್ರಶ್ನೆ ಮಾಡಿದರು.