'ಚಂದ್ರ'ನ ಮೇಲೆ ನಡೆದ ಮಂಗಳೂರಿನ 6ನೇ ತರಗತಿ ಬಾಲಕಿ!
ಮಂಗಳೂರು, ಸೆಪ್ಟೆಂಬರ್ 24: ಭೂಮಿಗೂ ಚಂದ್ರಲೋಕಕ್ಕೂ ಇರುವುದು 3 ಲಕ್ಷಕ್ಕೂ ಅಧಿಕ ಕಿ.ಮೀ. ದೂರ. ದೂರದ ಚಂದ್ರ ಅಷ್ಟು ಸುಂದರವಾಗಿ ಕಾಣುವಾಗ, ಅಲ್ಲಿನ ಮಂದಬೆಳಕಿನ ತಗ್ಗುದಿಣ್ಣೆಗಳ ರಸ್ತೆಯಲ್ಲಿ ಕಾಲಿಟ್ಟು ನಡೆಯುವುದು ಎಷ್ಟು ಸೊಗಸಾಗಿರಬಹುದು? ಚಂದ್ರನ ಮೇಲೆ ನಡೆದಾಡುವ ಕನಸು ಸದ್ಯಕ್ಕಂತೂ ನನಸಾಗುವುದಿಲ್ಲ. ಹಾಗೆಂದು ಆ 'ಅನುಭವ' ಸಿಗುವುದಿಲ್ಲ ಎಂದಲ್ಲ.
ಕೆಲವು ವಾರಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಚಂದ್ರಯಾನದ ಉಡುಗೆ ತೊಟ್ಟು ಬೆಂಗಳೂರಿನ ಕಿತ್ತುಹೋದ ರಸ್ತೆಯ ಮೇಲೆ ನಡೆಯುವ ಮೂಲಕ ಕಲಾವಿದ ಬಾದಲ್ ನಂಜುಂಡಸ್ವಾಮಿ ರಾಜ್ಯ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ಸುದ್ದಿಯಾಗಿದ್ದರು. ಅದೇ ರೀತಿ ಮಂಗಳೂರಿನಲ್ಲಿಯೂ ಬಾಲಕಿಯೊಬ್ಬಳು 'ಮೂನ್ ವಾಕ್' ಮಾಡಿದ್ದಾಳೆ.
ವೈರಲ್ ವಿಡಿಯೋ: ಬೆಂಗಳೂರು ಗಗನಯಾನಿ ಚಂದ್ರಯಾನ ಯಶಸ್ವಿ
ಗಗನಯಾನಿಯ ದಿರಿಸು ತೊಟ್ಟ ಆರನೇ ತರಗತಿ ಬಾಲಕಿ ಆಡ್ಲಿನ್ ಡಿಸೋಜಾ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನ ಹೊಂಡಗುಂಡಿನ ರಸ್ತೆಯಲ್ಲಿ 'ಮೂನ್ ವಾಕ್' ಮಾಡುವ ವಿಡಿಯೋ ವೈರಲ್ ಆಗಿದೆ.
ಚಂದ್ರಯಾನ -2ರ ಸಂದರ್ಭದಲ್ಲಿ ಬಾದಲ್ ನಂಜುಂಡಸ್ವಾಮಿ ತುಂಗಾ ನಗರದ ಮುಖ್ಯರಸ್ತೆಯಲ್ಲಿ ಗಗನಯಾತ್ರಿಯ ಉಡುಗೆ ತೊಟ್ಟು ಮೂನ್ ವಾಕ್ ಮಾಡಿದ್ದರು. ಇದು ಚಂದ್ರಯಾನದ ಕುರಿತು ತೀವ್ರ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿತ್ತು.
ಮೆಕ್ಸಿಕೊ ತಲುಪಿದ ಬಾದಲ್ ನಂಜುಂಡಸ್ವಾಮಿ ಸೃಜನಶೀಲತೆ
ಅದೇ ಮಾದರಿಯನ್ನು ಮಂಗಳೂರಿನ ಸಾಮಾಜಿಕ ಹೋರಾಟಗಾರ, ಮಂಗಳೂರು ನಗರ ಪಾಲಿಕೆ ನಾಗರಿಕ ಸಂಘಟನೆ ಸ್ಥಾಪಕ ಅಜೊಯ್ ಡಿಸೋಜಾ ಅನುಸರಿಸಿದ್ದಾರೆ. ತಮ್ಮ ಮಗಳಿಗೇ ಗಗನಯಾತ್ರಿಯ ಉಡುಗೆ ತೊಡಿಸಿದ್ದಾರೆ. ಬಾಲಕಿ ಆಡ್ಲಿನ್ ಕೂಡ ಅಷ್ಟೇ ಸೊಗಸಾಗಿ 'ಮೂನ್ ವಾಕ್' ಮಾಡಿದ್ದಾಳೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಸೆಂಟ್ರಲ್ ಮಾರ್ಕೆಟ್ ಮಾತ್ರವಲ್ಲ, ಮಂಗಳೂರಿನ ಅನೇಕ ಕಡೆ ರಸ್ತೆಗಳ ಹಣೆಬರಹ ಹೀಗೆ ಇದೆ. ಅವುಗಳ ಬಗ್ಗೆ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ರಸ್ತೆಗಳ ದುಸ್ಥಿತಿಯ ಮೇಲೆ ಬೆಳಕು ಚೆಲ್ಲಲು ನಡೆಸುತ್ತಿರುವ ಆಂದೋಲನದಲ್ಲಿ ಇದೂ ಒಂದು ಭಾಗ. ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಇದ್ದರೆ ಬೇರೆ ರಸ್ತೆಯಲ್ಲಿ ಇದೇ ರೀತಿಯ ಮತ್ತೊಂದು ಮೂನ್ ವಾಕ್ ಮಾಡಬೇಕಾಗುತ್ತದೆ. ನಾವು ಬೇರೆ ರೀತಿಯ ಪ್ರಯತ್ನಗಳನ್ನು ಮಾಡಬೇಕು. ಆದರೆ ಮುಖ್ಯವಾಗಿ ನಮ್ಮ ಉದ್ದೇಶ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವುದು ಎಂದು ಅಜೊಯ್ ಡಿಸೋಜಾ ಹೇಳಿದ್ದಾರೆ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: