ಸ್ನೇಹಿತನ ಮದುವೆಗೆ ಬಂದು ಹಳ್ಳಿಯ ಹಣೆಬರಹ ಬದಲಿಸಿದ ಯುವತಿ!
ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನದ ಯೋಚನೆಯನ್ನು ದೇಶದ ಜನರ ಮುಂದಿಡುವ ನಾಲ್ಕು ವರ್ಷಕ್ಕೆ ಮುನ್ನವೇ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಪಣ ತೊಟ್ಟ ಯುವತಿಯ ಯಶಸ್ಸಿನ ಗಾಥೆ ಇದು. ಹಾಗೆ ಶೌಚಾಲಯ ನಿರ್ಮಿಸುವ ಮೂಲಕ ಬಯಲುಮುಕ್ತ ಶೌಚಾಲಯ ಗ್ರಾಮದ ಕಿರೀಟ ತೊಡಲು ಕಾರಣಳಾದ ಆ ಯುವತಿ ಇತರರಿಗೆ ಪ್ರೇರಣೆ ಆಗಿದ್ದಾರೆ.
ಬೆಂಗಳೂರಿನಲ್ಲಿ ಸಂಸ್ಥೆ ಒಂದರಲ್ಲಿ ಕೈ ತುಂಬಾ ಸಂಬಳವನ್ನು ಪಡೆಯುತಿದ್ದ ಎಂ.ಸ್.ಡಬ್ಲ್ಯೂ ಸ್ನಾತಕೋತ್ತರ ಪದವೀಧರೆ ಭವ್ಯ ರಾಣಿ ಇತರರಿಗೆ ಪ್ರೇರಣೆಯಾಗಿರುವ ಯುವತಿ. 2010ರಲ್ಲಿ ತುಮಕೂರು ಜಿಲ್ಲೆಯ ತುರವೇಕೆರೆ ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿಗೆ ಸ್ನೇಹಿತರ ಮದುವೆಗೆ ಹೋದಾಗ ಆಕೆಗೆ ಆದ ಕಹಿ ಅನುಭವ ಇಂದಿನ ಸಾಧನೆಗೆ ಕಾರಣವಾಗಿದೆ. 400ಕ್ಕೂ ಹೆಚ್ಚು ಶೌಚಾಲಯ ನಿರ್ಮಾಣಕ್ಕೆ ಪ್ರೇರಣೆಯಾಗಿದೆ.[ಗ್ರಾಪಂ ಅಧ್ಯಕ್ಷೆಯಿಂದ ಒಂದೇ ದಿನದಲ್ಲಿ ಶೌಚಾಲಯ ಸಿದ್ಧ!]
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಅನಂತಡಿಯ ಈ ಯುವತಿ, ತನ್ನ ಸ್ನೇಹಿತನ ಮದುವೆಗೆ ಅಂತ ಬಂದಾಗ ಗ್ರಾಮದಲ್ಲಿ ಶೌಚಾಲಯ ಇಲ್ಲದೆ ಕಹಿ ಅನುಭವ ಎದುರಿಸಿದ್ದರು. ಅದನ್ನೇ ಮನಸಿನಲ್ಲಿ ಇಟ್ಟುಕೊಂಡಿದ್ದ ಭವ್ಯ ರಾಣಿ ಕೆಲವೇ ದಿನಗಳಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಗ್ರಾಮಕ್ಕೆ ವಾಪಸ್ ಬಂದು ಗ್ರಾಮಸ್ಥರನ್ನು ಪರಿಚಯ ಮಾಡಿಕೊಂಡರು. ಶೌಚಾಲಯದ ಬಗ್ಗೆ ಅರಿವನ್ನು ಮೂಡಿಸಿದರು.
ಆದರೆ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 22 ಹಳ್ಳಿಗಳಿದ್ದು, 1200 ಶೌಚಾಲಯಗಳ ಕೊರತೆ ಇದ್ದವು. ಭವ್ಯ ಮಾತು ಕೇಳಿದ ಗ್ರಾಮಸ್ಥರು ಶೌಚಾಲಯ ಕಟ್ಟಿಕೊಳ್ಳುವುದಕ್ಕೆ ಒಪ್ಪಿಕೊಂಡರು. ಆದರೆ ಅವರ ಯಾರ ಬಳಿಯೂ ಹಣ ಇರಲಿಲ್ಲ. ಇದರಿಂದ ಎದೆಗುಂದದೆ ತಾನು ಕೂಡಿಸಿಟ್ಟ 2 ಲಕ್ಷ ರುಪಾಯಿಯಲ್ಲಿ 2010ರಲ್ಲಿಯೇ 100 ಶೌಚಾಲಯಗಳ ನಿರ್ಮಾಣಕ್ಕೆ ಸಾಮಗ್ರಿಗಳನ್ನು ಒದಗಿಸಿದರು.[5 ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳು : ಸಿದ್ದರಾಮಯ್ಯ ಘೋಷಣೆ!]
ಅಷ್ಟಕ್ಕೇ ಸುಮ್ಮನಾಗದ ಭವ್ಯ ರಾಣಿ, ಬಳಿಕ ಗ್ರಾಮ ಪಂಚಾಯತಿಗೆ ಹೋಗಿ ಚರ್ಚಿಸಿ ಸರಕಾರದಿಂದ ಬರುವಂತಹ ಅನುದಾನವನ್ನು ಬಳಸಲು ಸಲಹೆ ನೀಡಿ, ತಾವೇ ಖುದ್ದಾಗಿ ನಿಂತು ಶೌಚಾಲಯ ನಿರ್ಮಿಸಲು ಸಹಕಾರಿಯಾಗಿದ್ದಾರೆ. ಗ್ರಾಮದ ಸುತ್ತಮುತ್ತ ಸುಮಾರು 400ಕ್ಕೂ ಅಧಿಕ ಶೌಚಾಲಯ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
ಆದರೆ, ಇಂಥ ಮಹತ್ತರ ಕೆಲಸದ ಆರಂಭದಲ್ಲೆ ಈಕೆಗೇನೋ ಹುಚ್ಚು ಅಂತ ಕೆಲವರು ಮಾತನಾಡುತ್ತಿದ್ದರು. ಈಗ ಭವ್ಯ ನಮ್ಮ ಗ್ರಾಮದ ದತ್ತು ಮಗಳು ಅಂತ ಗುಣಗಾನ ಮಾಡುತ್ತಿದ್ದಾರೆ.