ಮಂಗಳೂರು: ಮಲ್ಯ ಒಡೆತನದ ಎಂಸಿಎಫ್ ನಲ್ಲಿ ಜಲಕ್ಷಾಮ
ಮಂಗಳೂರು ನಗರದ ಪಣಂಬೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯ್ ಮಲ್ಯ ಒಡೆತನದ ಎಂಸಿಎಫ್ ರಸಗೊಬ್ಬರ ಕಾರ್ಖಾನೆಯಲ್ಲಿ ಜಲಕ್ಷಾಮ ಉಂಟಾಗಿದ್ದು ಕಾರ್ಖಾನೆಯನ್ನು ಮುಚ್ಚಲಾಗಿದೆ.
ಮಂಗಳೂರು, ಏಪ್ರಿಲ್ 4: ನಗರದ ಪಣಂಬೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯ್ ಮಲ್ಯ ಒಡೆತನದ ಎಂಸಿಎಫ್ ರಸಗೊಬ್ಬರ ಕಾರ್ಖಾನೆಯಲ್ಲಿ ಜಲಕ್ಷಾಮ ಉಂಟಾಗಿದೆ.
ಬೃಹತ್ ಕೈಗಾರಿಕೆಗಳಿಗೆ ಸರಬರಾಜು ಮಾಡುತ್ತಿರುವ ನೀರನ್ನು ಜಿಲ್ಲಾಡಳಿತ ನಿಲ್ಲಿಸಿದ್ದರಿಂದ ಕಾರ್ಖಾನೆ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಕ್ಷಿಣ ಭಾರತದ ಏಕೈಕ ಯೂರಿಯಾ ಉತ್ಪಾದಿಸುವ ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ (ಎಂಸಿಎಫ್) ಈ ಬಾರಿಯೂ ನೀರಿನ ಅಭಾವದಿಂದ ಬಾಗಿಲು ಮುಚ್ಚಿದೆ.[ಅರ್ಧ ಲೀಟರ್ ನೀರಿಗೆ 40 ರೂ., ಮಂಗಳೂರಲ್ಲಿ ಹೀಗೊಂದು ಹಗಲು ದರೋಡೆ]
ಎಂಸಿಎಫ್ಗೆ ಮಂಗಳೂರು ಮಹಾನಗರ ಪಾಲಿಕೆ ದಿನಕ್ಕೆ 10 ಎಂಜಿಡಿ ನೀರು ಪೂರೈಸುತ್ತಿತ್ತು. ಆದರೆ ತುಂಬೆಯಲ್ಲಿ ನೇತ್ರಾವತಿ ಒಳ ಹರಿವು ಸ್ಥಗಿತಗೊಂಡ ಕಾರಣ ಮಾರ್ಚ್ 3ರಿಂದ ಜಿಲ್ಲಾಡಳಿತ ನೀರು ಸರಬರಾಜು ಸ್ಥಗಿತಗೊಳಿಸಿತ್ತು.
ಮಾರ್ಚ್ 7ರಿಂದ ಸ್ಥಗಿತ
ಹೀಗಾಗಿ ಮಾರ್ಚ್ 7 ರಿಂದ ಎಂಸಿಎಫ್ ಕಾರ್ಖಾನೆ ಬಾಗಿಲು ಮುಚ್ಚಿದೆ. ಯೂರಿಯಾ ಉತ್ಪಾದನೆಯಲ್ಲಿ ನೀರು ಪ್ರಧಾನವಾಗಿರುವುದರಿಂದ ಉತ್ಪಾದನೆ ಸ್ಥಗಿತಗೊಳಿಸುವುದು ಕಾರ್ಖಾನೆಯ ಆಡಳಿತ ಮಂಡಳಿಗೆ ಅನಿವಾರ್ಯವಾಗಿತ್ತು.
ಯೂರಿಯಾ ಉತ್ಪಾದನೆಯಿಲ್ಲ
ಈ ಕಾರ್ಖಾನೆಯಲ್ಲಿ ದಿನಕ್ಕೆ 1200 ಟನ್ ನಂತೆ ತಿಂಗಳಿಗೆ 36,000 ಟನ್ ಯೂರಿಯಾ ಉತ್ಪಾದನೆಯಾಗುತ್ತದೆ. ಆದರೆ ಮಾರ್ಚ್ 7 ರಿಂದ ಕಾರ್ಯ ಸ್ಥಗಿತಗೊಳಿಸಿರುವುದರಿಂದ ಯೂರಿಯಾ ಉತ್ಪಾದನೆ ನಿಂತು ಹೋಗಿದೆ.[ಬಿಸಿಲ ಬೇಗೆಯ ನಡುವೆ ಮಂಗಳೂರಲ್ಲಿ ಶುರುವಾಯಿತೇ ನೀರಿನ ದಂಧೆ ?]
100 ಕೋಟಿ ಲಾಸ್
ಕಳೆದ ವರ್ಷ ಮೇ ತಿಂಗಳಲ್ಲಿ ಜಲಕ್ಷಾಮದಿಂದ ಸುಮಾರು ಒಂದು ತಿಂಗಳು ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ನೀರಿಲ್ಲದೆ ಉತ್ಪಾದನೆ ನಿಲ್ಲಿಸಿದ ಪರಿಣಾಮ ಕಂಪನಿಗೆ ಸುಮಾರು 100ಕೋಟಿ ರೂ. ನಷ್ಟ ಉಂಟಾಗಿತ್ತು.
ಕೃಷಿಕರಿಗೆ ರಸಗೊಬ್ಬರ ಕೊರತೆ
ಸಾಮಾನ್ಯವಾಗಿ ಕೃಷಿ ಚಟುವಟಿಕೆ ಜೂನ್ ತಿಂಗಳಿನಿಂದ ಆರಂಭವಾಗುವುದರಿಂದ ಯೂರಿಯಾಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇರುತ್ತದೆ. ಬೇಡಿಕೆ ಇರುವಾಗ ಉತ್ಪಾದನೆ ಇಲ್ಲದೆ ನಷ್ಟ ಎದುರಿಸಬೇಕಾಗಿದೆ.
ಇದರಿಂದ ಕೃಷಿಕರಿಗೆ ಸಕಾಲದಲ್ಲಿ ರಸಗೊಬ್ಬರ ದೊರಕದೆ ತೊಂದರೆ ಉಂಟಾಗಲಿದೆ. ಈಗಾಗಲೇ ಯೂರಿಯಾ ಪೂರೈಕೆ ಕೆಲಸ ಸ್ಥಗಿತಗೊಂಡಿದ್ದು ನಷ್ಟವನ್ನು ಸರಿದೂಗಿಸಲು ಯೂರಿಯಾ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಕೂಡ ಎದುರಾಗಲಿದೆ.
ದಿನಕ್ಕೆ 5-6 ಕೋಟಿ ನಷ್ಟ
ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದ್ದ ಎಂಸಿಎಫ್ ಘಟಕ ಒಮ್ಮೆ ಮುಚ್ಚಿ ತೆರೆಯುವಾಗ ಸುಮಾರು 5-6 ಕೋಟಿ ರೂ. ನಷ್ಟ ಉಂಟಾಗುತ್ತದೆ. ಕಳೆದ ವರ್ಷವೂ ಭೀಕರ ಜಲಕ್ಷಾಮಕ್ಕೆ ಎಂಸಿಎಫ್ ಒಂದು ತಿಂಗಳಿಗೂ ಹೆಚ್ಚು ಕಾಲ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.