“ಉಳಿಯ ದ್ವೀಪ” ಉಳಿಸಲು ಹೊರಟ ಮಾದರಿ ವಿದ್ಯಾರ್ಥಿಗಳು
ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯತ್ನಲ್ಲಿ ಉಳಿಯ ಎಂಬ ದ್ವೀಪವಿದೆ. ಬಹಳ ಹಿಂದುಳಿದಿರುವ, ಸಾರಿಗೆ ಸಂಪರ್ಕಗಳಿಲ್ಲದ ಈ ದ್ವೀಪವನ್ನು ಮೇಲೆತ್ತಲು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ಶ್ರಮಿಸುತ್ತಿದೆ.
ಮಂಗಳೂರು, ಮೇ 4: ಇದೊಂದು ಮಂಗಳೂರು ನಗರದಿಂದ ಮಾರು ದೂರದಲ್ಲಿರುವ ಪುಟ್ಟ ದ್ವೀಪ. ಈ ದ್ವೀಪ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಿದ್ದರೂ ಅಲ್ಲಿನ ಜನರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುತ್ತಿಲ್ಲ. ಇದನ್ನರಿತ ಯುವ ಪಡೆಯೊಂದು ಆ ಹಳ್ಳಿಗೆ ತಮ್ಮಿಂದಾದ ಸಹಾಯ ಮಾಡಿದ ಕಥೆ ಇದು.
ಅಪರೂಪದ ದ್ವೀಪ
ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯತ್ನಲ್ಲಿ ಉಳಿಯ ಎಂಬ ದ್ವೀಪ ಪ್ರದೇಶವಿದೆ. ಸುತ್ತಲೂ ನೇತ್ರಾವತಿ ನದಿಯೂ ಆವರಿಸಿಕೊಂಡಿದೆ. ಅಲ್ಲಿ ಸುಮಾರು 200 ಜನ ವಾಸಿಸುತ್ತಿದ್ದಾರೆ. ಆ ದ್ವೀಪಕ್ಕೆ ತೆರಳಲು ಕೇವಲ ಒಂದು ದೋಣಿ ವ್ಯವಸ್ಥೆ ಇದೆ.
ಇಲ್ಲಿನ ಇನ್ನೂರು ಜನರಿಗೂ ಒಂದೇ ಬಾವಿ ಇದೆ. ಸುತ್ತಲೂ ಉಪ್ಪು ನೀರು ಆವರಿಸಿರುವುದರಿಂದ ಬಾವಿಯ ನೀರಿನಲ್ಲಿಯೂ ಉಪ್ಪು ನೀರಿನ ಅಂಶ ಇದೆ. ಇಷ್ಟೆಲ್ಲಾ ಇದ್ದರೂ ಈ ಹಳ್ಳಿಯಲ್ಲಿ ಜೀವನ ಸಾಗಿಸಬೇಕು.
ದ್ವೀಪ ಬಯಲು
ಅಲಿಸ್ಟರ್ ಲಸ್ರಾದೋ ಎಂಬ ಯುವಕ ಸಹ್ಯಾದ್ರಿ ಕಾಲೇಜಿನಲ್ಲಿ ಎರಡನೇ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ಕಲಿಯುತ್ತಿದ್ದು, ಆತನ ತಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದಾರೆ. ಅವರು ರಾತ್ರಿ ಪಾಳಿಯಲ್ಲಿ ಗಸ್ತು ತಿರುಗುವುದನ್ನು ತಮ್ಮ ಪುಸ್ತಕದಲ್ಲಿ ನಮೂದಿಸುತ್ತಿದ್ದರು. ಅದರಂತೆ ಈ ದ್ವೀಪದ ಬಗ್ಗೆಯೂ ಪ್ರಸ್ತಾಪಿಸಿದ್ದರು. ಇದನ್ನು ತಿಳಿದ ಅಲಿಸ್ಟರ್ ಜಿಪಿಎಸ್ ಮೂಲಕ ಆ ದ್ವೀಪದ ಬಗ್ಗೆ ತಿಳಿದು ಆ ಕುತೂಹಲದಿಂದ ದ್ವೀಪಕ್ಕೆ ಭೇಟಿ ನೀಡುತ್ತಾರೆ. ಅಲ್ಲಿನ ಜನರ ಬಗ್ಗೆ ಸ್ನೇಹ ಬೆಳೆಸಿಕೊಂಡು ಅವರ ಕಷ್ಟ ಕಾರ್ಪಣ್ಯ ತಿಳಿಯುತ್ತಾರೆ.
ಹಾರ್ಟ್ ಅಟ್ಯಾಕ್ ಸಾಮಾನ್ಯ
ಉಳಿಯೂರು ದ್ವೀಪದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ತುರ್ತು ಸಂದರ್ಭದಲ್ಲಿ ಅವರಿಗೆ ದಡ ದಾಟಲು ನಾಡದೋಣಿಯೊಂದೇ ಗತಿ. ಈ ಮೊದಲು ಆ ದ್ವೀಪದಲ್ಲಿ ತುಂಬಾ ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಉಪಯೋಗಿಸುತ್ತಿರುವ ನೀರಿನಲ್ಲಿ ಹೆಚ್ಚಿನ ಉಪ್ಪಿನಾಂಶ ಇರುವುದು ಎಂಬುದನ್ನು ದೃಢೀಕರಿಸಿದ್ದಾರೆ.
ಹೃದಯಾಘಾತವಾದರೆ ದೇವರೇ ಗತಿ
ಎಷ್ಟೋ ಜನ ಹೃದಯಾಘಾತ ಹೊಂದಿದಾಗ ಆಸ್ಪತ್ರೆಗೆ ತುರ್ತಾಗಿ ಸಾಗಿಸಲು ಸಾಧ್ಯವಾಗದೇ ಇದ್ದಾಗ ದಾರಿಯಲ್ಲಿ ಕೊನೆಯುಸಿರೆಳೆದ ಕರುಣಾಜನಕ ಕಥೆ ಅಲಿಸ್ಟರ್ ಮನ ಮಿಡಿಯುವಂತೆ ಮಾಡಿತು. ಇದರಿಂದ ಪ್ರೇರೇಪಿತನಾದ ಈ ಯುವಕ ತನ್ನ ಸಹಪಾಠಿ ಜೋನಥಾನ್ ಹಾಗೂ ಅಲೆನ್ ಡಿ'ಸೋಜ ಜತೆಗೆ ತನ್ನ ಕಾಲೇಜಿನ 14 ಜನ ಸಹಪಾಠಿಗಳೊಂದಿಗೆ 'ಟ್ರಿಗಾನ್' ಎಂಬ ತಂಡ ರಚಿಸಿ ಆ ಹಳ್ಳಿಗೆ ಸಹಾಯ ಮಾಡುತ್ತಿದ್ದಾರೆ.
ಶುದ್ದ ನೀರು ಕೊಡುವ ಸಾಹಸ
ಈಗಾಗಲೇ ತಮ್ಮ ಸಹಪಾಠಿ ಹಾಗೂ ಕಾಲೇಜು ಮತ್ತಿತರ ದಾನಿಗಳಿಂದ 4 ರಿಂದ 5 ಲಕ್ಷ ವೆಚ್ಚದ ಶುದ್ದ ಕುಡಿಯುವ ನೀರಿನ ಆ್ಯರೋಪ್ಯೂರಿಫೈಯರ್ ಎಂಬ ಸಾಧನವನ್ನು ಬಾವಿಗೆ ಅಳವಡಿಸಿ ಅದರಿಂದ ನೀರನ್ನು ಶುದ್ದೀಕರಿಸಿ ಎಲ್ಲಾ ಮನೆಗಳಿಗೂ ಪೈಪ್ ಮೂಲಕ ನೀರು ಪೂರೈಕೆ ಮಾಡಲು ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಸರ್ವೆ ಕಾರ್ಯವು ನಡೆದಿದೆ. ಅಗಸ್ಟ್ ತಿಂಗಳ ಒಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ. ಐದು ವರ್ಷದ ಒಳಗೆ ಇದನ್ನ ಪ್ರವಾಸಿ ತಾಣವಾಗಿ ಮಾಡುತ್ತೇವೆ ಎನ್ನುತ್ತಾರೆ ಟ್ರಿಗಾನ್ ತಂಡದ ಸದಸ್ಯ ಅಲೆನ್. ಜೊತೆಗೆ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ತೂಗುಗತ್ತಿಯಲ್ಲಿ ತೂಗುಸೇತುವೆ
ಈ ಪ್ರದೇಶದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಇದೆ. ಆದರೆ ಶಿಕ್ಷಕರು ಇಲ್ಲಿಗೆ ಬರಲು ಒಪ್ಪದೇ ಇರುವುದರಿಂದ ಮುಚ್ಚಿಹೋಗಿದೆ. ಇದರಿಂದ ಇಲ್ಲಿನ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುವುದರಿಂದ ಮಕ್ಕಳು ಶಾಲೆಗೆ ಹೋಗಲಾಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.
ಇನ್ನು ಈ ದ್ವೀಪಕ್ಕೆ ತೂಗುಸೇತುವೆ ಬಗ್ಗೆ ಸ್ಥಳೀಯ ಶಾಸಕ ಹಾಗೂ ಸಚಿವ ಯು.ಟಿ. ಖಾದರ್ ಪ್ರಸ್ತಾಪಿಸಿದ್ದರು. ಇದಕ್ಕಾಗಿ 1.75 ಕೋಟಿ ಬಿಡುಗಡೆ ಮಾಡಿದ್ದರು. ಆದರೆ ಅಭಿಯಂತರರ ಪ್ರಕಾರ ಇದರ ವೆಚ್ಚ 3.50 ಕೋಟಿ ಆಗುತ್ತದೆಂದಿದ್ದಾರೆ. ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿಗಳಿಂದ 5 ಕೋಟಿ ವಿಶೇಷ ಅನುದಾನಕ್ಕಾಗಿ ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.
ಚರ್ಚ್ ಗೆ ಖಾಯಂ ಫಾದರ್ ಗಳ ಭೇಟಿ
ಈ ದ್ವೀಪದಲ್ಲಿ ಒಂದು ಚರ್ಚ್ ಇದ್ದು, ವಿಶೇಷವೆಂದರೆ ಆ ಚರ್ಚ್ ಗೆ ಫಾದರ್ ಗಳು ಯಾವಾಗಲೂ ಪ್ರಾರ್ಥನೆ ನಡೆಸಲು ದೋಣಿಯಲ್ಲಿ ಸಾಗಿ ಬರುತ್ತಾರೆ. ಎಷ್ಟೇ ಮಳೆ ಗಾಳಿ ಬಂದರೂ ಅವರು ಚರ್ಚ್ಗೆ ಬಂದು ಪೂಜೆ ಸಲ್ಲಿಸುವುದನ್ನು ಬಿಡುವುದಿಲ್ಲ.
ಪ್ರಧಾನಿ, ಸಿಎಂಗೆ ಪತ್ರ
ಉಳಿಯೂರಿನ ಈ ಸಮಸ್ಯೆ ಬಗ್ಗೆ ಪ್ರಧಾನಿ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿಯವರಿಗೆ ಶಾಸಕ ಯು.ಟಿ ಖಾದರ್ ಮೂಲಕ ಇದೇ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ಎಪ್ರಿಲ್ 10ರೊಳಗೆ ಕ್ರಮ ಕೈಗೊಳ್ಳುತ್ತೇವೆಂಬ ಸೂಚನೆ ಕೇಂದ್ರದಿಂದ ದೊರಕಿದ್ದು ಬಿಟ್ಟರೆ ಯಾವುದೇ ಪ್ರಗತಿ ಸಾಧಿಸಿಲ್ಲ ಎನ್ನುತ್ತಾರೆ ಸ್ಥಳೀಯರು.
ಜತೆಗೆ ಕೃಷಿ ಇಲಾಖೆಯ ಸಹಾಯದಿಂದ ಅಲ್ಲಿ ಯಾವ ರೀತಿಯ ಕೃಷಿ ನಡೆಸಬಹುದೆಂಬ ಅಭಿಪ್ರಾಯ ಪಡೆಯಲಾಗಿದೆ. ಈ ಮೂಲಕ ದ್ವೀಪದ ಸರ್ವಾಂಗೀಣ ಅಭಿವೃದ್ದಿ ನಡೆಸಲು ಪಣ ತೊಟ್ಟಿದ್ದಾರೆ ವಿದ್ಯಾರ್ಥಿಗಳು.