ಮಂಗಳೂರು ದಸರಾ ಎಷ್ಟೊಂದು ಸುಂದರ..ಎಲ್ಲೆಲ್ಲೂ ಬೆಳಕಿನ ಚಿತ್ತಾರ...
ಮಂಗಳೂರು, ಸೆ.30: ಮಂಗಳೂರು ನಗರದ ಎಲ್ಲಿ ನೋಡಿದರೂ ಬೆಳಕಿನ ಚಿತ್ತಾರ. ರಸ್ತೆ ಬದಿಯೆಲ್ಲಾ ವಿದ್ಯುತ್ ದೀಪಗಳು ರಂಗು ಮೂಡಿಸಿದೆ. ನಗರದ ಸುಮಾರು 7 ಕಿಲೋ ಮೀಟರ್ ಉದ್ದಕ್ಕೆ ಬರೋಬ್ಬರಿ 22 ಲಕ್ಷ ಬಲ್ಬ್ಗಳು ಪ್ರಕಾಶಮಾನವಾಗಿ ಬೆಳಗುತ್ತಿದೆ. ಮಂಗಳೂರು ನಗರದಲ್ಲಿ ಸಂಜೆಯಾಗುತ್ತಿದ್ದಂತೆ ಬೆಳಕಿನ ರಂಗೋಲಿ ಮೂಡುತ್ತಿದ್ದು, ಎಲ್ಲಿ ನೋಡಿದರೂ ಬಣ್ಣ ಬಣ್ಣದ ಬೆಳಕಿನ ಚಿತ್ತಾರ ಕಂಡುಬರುತ್ತಿದೆ. ಮೈಸೂರು ದಸರಾ ವೈಭವಕ್ಕೆ ಮಂಗಳೂರು ದಸರಾ ವೈಭವ ಸಾಟಿ ನೀಡುತ್ತಿದೆ.
ಕೊಯಮತ್ತೂರ್ನಿಂದ ಧರ್ಮಸ್ಥಳಕ್ಕೆ KSRTC ವೋಲ್ವೊ ಬಸ್ ಸೇವೆ ಆರಂಭ
ವಿದ್ಯುತ್ ದೀಪಗಳ ವರ್ಣಮಯ ಶೃಂಗಾರ ಪ್ರಮುಖ ಆಕರ್ಷಣೆ
ಹಿಂದೆಲ್ಲಾ ದಸರಾ ಎಂದರೆ ನೆನಪಾಗುತ್ತಿದ್ದದ್ದು ಮೈಸೂರು ದಸರಾ. ಆದರೆ ಈಗ ಹಾಗಲ್ಲ, ಮಂಗಳೂರು ದಸರಾ ಕೂಡ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಪಡೆಯುತ್ತಿದೆ. ದಸರಾ ಇಷ್ಟರ ಮಟ್ಟಿಗೆ ಖ್ಯಾತಿ ಗಳಿಸಲು ಪ್ರಮುಖ ಕಾರಣ ಇಲ್ಲಿನ ವಿದ್ಯುತ್ ದೀಪಗಳ ವರ್ಣಮಯ ಶೃಂಗಾರ. ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ.
ಕುದ್ರೋಳಿ ಕ್ಷೇತ್ರ ಮಾತ್ರವಲ್ಲದೆ ದಸರಾ ಮೆರವಣಿಗೆ ಹಾದು ಹೋಗುವ ನಗರದ ಸುಮಾರು 7 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಕ್ಷೇತ್ರದ ವತಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಬಾರಿಯ ದಸರಾಕ್ಕಾಗಿ 10 ಲಕ್ಷ ದೊಡ್ಡ ಪ್ರಮಾಣದ ಬಲ್ಬ್ಗಳು ಸೇರಿದಂತೆ ಒಟ್ಟು 22 ಲಕ್ಷ ಬಲ್ಬ್ಗಳಿಂದ ಶೃಂಗರಿಸಲಾಗಿದೆ. ಈ ಸೌಂದರ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ.
ರಸ್ತೆಗಳೆಲ್ಲಾ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿವೆ
ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ದಿನದಿಂದ 9 ದಿನಗಳ ಕಾಲ ಸಂಜೆ 6 ಗಂಟೆಯಾಗುತ್ತಿದ್ದಂತೆ ನಗರದೆಲ್ಲೆಲ್ಲಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಸದಾ ಜನಜಂಗುಳಿ ವಾಹನಗಳಿಂದ ತುಂಬಿರುವ ನಗರದ ರಸ್ತೆಗಳೆಲ್ಲಾ ಈ ಸಂದರ್ಭದಲ್ಲಿ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕೃತವಾಗುತ್ತದೆ. ದೇಶದ ಬೇರೆಲ್ಲೂ ಇಷ್ಟು ಪ್ರಮಾಣದಲ್ಲಿ ಬೆಳಕಿನ ಸಂಯೋಜನೆ ಕಾಣಸಿಗದು.
ಕುದ್ರೋಳಿ ಕ್ಷೇತ್ರದಿಂದಲೇ ಬೆಳಕಿನ ಸಂಯೋಜನೆ
ಇಷ್ಟೊಂದು ಪ್ರಮಾಣದ ಬೆಳಕಿನ ಚಿತ್ತಾರಕ್ಕಾಗಿ ಈ ಕ್ಷೇತ್ರ ಬರೋಬ್ಬರಿ 25 ಲಕ್ಷ ರೂಪಾಯಿ ಖರ್ಚು ಮಾಡುತ್ತದೆ ಸರ್ಕಾರದ ಅಥವಾ ಇನ್ಯಾವುದೇ ಅನುದಾನ ಇಲ್ಲದೆ ಕ್ಷೇತ್ರದ ವತಿಯಿಂದಲೇ ಈ ಬೆಳಕಿನ ಸಂಯೋಜನೆಯನ್ನು ಮಾಡಲಾಗುವುದು ಇಲ್ಲಿನ ವಿಶೇಷತೆ. ಈ ದಸರಾ ಸಂದರ್ಭದಲ್ಲಿ ದೇಶ- ವಿದೇಶದ ಅಸಂಖ್ಯಾತ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಅ.5ಕ್ಕೆ ಅದ್ದೂರಿ ಮಂಗಳೂರು ದಸರಾ ಮೆರವಣಿಗೆ
ಇನ್ನು ಕುದ್ರೋಳಿ ಕ್ಷೇತ್ರದ ಅಭಿವೃದ್ದಿಯ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯುವ ಈ ಮಂಗಳೂರು ದಸರಾ ವರ್ಷದಿಂದ ವರ್ಷಕ್ಕೆ ಹಲವು ವಿಶೇಷತೆಗಳಿಂದ ಜನರನ್ನು ಸೆಳೆಯುತ್ತಿದೆ. ಇಲ್ಲಿನ ಬೆಳಕಿನ ಚಿತ್ತಾರವನ್ನು ನೋಡಲು ರಾಜ್ಯ ಮಾತ್ರವಲ್ಲದೆ ದೇಶ - ವಿದೇಶಗಳಿಂದಲೂ ಲಕ್ಷಾಂತರ ಮಂದಿ ಮಂಗಳೂರಿಗೆ ಆಗಮಿಸುತ್ತಾರೆ. ಈ ಬೆಳಕಿನ ಸಂಯೋಜನೆಯೊಂದಿಗೆ ಇದೇ ಅಕ್ಟೋಬರ್ ಐದನೇ ತಾರೀಕಿನಂದು ಅದ್ದೂರಿ ಮಂಗಳೂರು ದಸರಾ ಮೆರವಣಿಗೆ ನಗರದಾದ್ಯಂತ ನಡೆಯಲಿದೆ. ಜೊತೆಗೆ ಗೋಕರ್ಣನಾಥ ಸೇವಾದಳದ ವತಿಯಿಂದ ಶಾರದಾ ಮಾತೆಗೆ ರಜತ ಪೀಠ ಸಮರ್ಪಣೆಯೂ ನಡೆಯಲಿದೆ.