ಬಡ್ಡಿ ಮಾಫಿಯಾಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಮಂಗಳೂರಿನ ದಂಪತಿ
ಮಂಗಳೂರು, ಜೂನ್ 9: ಹಣಕಾಸಿನ ಮುಗ್ಗಟ್ಟಿನಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಕದ್ರಿ ಬಳಿಯ ಪಿಂಟೋ ಲೇನ್ನಲ್ಲಿ ನಡೆದಿದೆ.
ಪಿಂಟೋ ಲೇನ್ ನಿವಾಸಿ ಸುರೇಶ್(62) ಹಾಗೂ ಅವರ ಪತ್ನಿ ವಾಣಿ(55) ಆತ್ಮಹತ್ಯೆ ಮಾಡಿಕೊಂಡ ದಂಪತಿಯಾಗಿದ್ದಾರೆ. ಮನೆಯ ಟೇರೆಸ್ನಲ್ಲಿ ನೇಣು ಬಿಗಿದು ಪತ್ನಿ ವಾಣಿ ಆತ್ಮಹತ್ಯೆಕೊಂಡರೆ, ಮನೆಯ ಬಾವಿಗೆ ಹಾರಿ ಪತಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಚಿಟ್ ಫಂಡ್ನಲ್ಲಾದ ನಷ್ಟದಿಂದ ಆತ್ಮಹತ್ಯೆಗೆ ಶರಣಾದ ಬಗ್ಗೆ ತನಿಖೆಯಲ್ಲಿ ತಿಳಿದುಬಂದಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಂಪತಿ ಆತ್ಮಹತ್ಯೆ ಬೆನ್ನಲ್ಲೇ ಬಡ್ಡಿ ಮಾಫಿಯಾಗೆ ಕಮಿಷನರ್ ವಾರ್ನಿಂಗ್ ನೀಡಿದ್ದು, ಆತ್ಮಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಕಮಿಷನರ್ ಶಶಿಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
"ದಂಪತಿಗಳ ಆತ್ಮಹತ್ಯೆ ಕೆಟ್ಟ ನಿರ್ಧಾರವಾಗಿದೆ. ಚೀಟಿ ವ್ಯವಹಾರ, ಹಣಕಾಸು ಸಮಸ್ಯೆ ಇದ್ದಲ್ಲಿ ಹೇಳಿಕೊಳ್ಳಬಹುದಿತ್ತು. ಈ ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಹಲವೆಡೆ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡ್ತಿರೋದು ಗಮನಕ್ಕೆ ಬಂದಿದೆ. ಇಂಥವರ ವಿರುದ್ದ ಎಕ್ಸೋರ್ಬಿಟಂಟ್ ರೇಟ್ ಅಫ್ ಇಂಟ್ರೆಸ್ಟ್ ಆಕ್ಟ್ನಡಿ ಪ್ರಕರಣ ದಾಖಲಿಸಲು ಅವಕಾಶ ಇದೆ. ಅತಿಯಾದ ಬಡ್ಡಿ ವಸೂಲಿಗೆ ಒತ್ತಡ, ಬೆದರಿಕೆ ಹಾಕಿದಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಿ'' ಅಂತಾ ಜನರಿಗೆ ಮನವಿ ಮಾಡಿದ್ದಾರೆ.
ಚೀಟಿ ವ್ಯವಹಾರ ಮಾಡುವವರು ಆತ್ಮಹತ್ಯೆ ಮಾಡಿಕೊಳ್ಳುವುದು, ಊರು ಬಿಟ್ಟು ಹೋಗುವುದು ಮಾಡುತ್ತಿದ್ದಾರೆ. ಇಂಥಹ ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಹಣಕಾಸು ವ್ಯವಹಾರ ಮಾಡಿದರೆ ಉತ್ತಮ. ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಕಂಡುಬಂದರೆ ದೂರು ಕೊಡಿ. ಸೂಕ್ತ ಕಾನೂನು ಕ್ರಮಕ್ಕೆ ನಮ್ಮ ಎಲ್ಲಾ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದ್ದಾರೆ.