ಹಾಜಬ್ಬ ಕಿತ್ತಳೆ ಮಾರುತ್ತಿದ್ದ ರಸ್ತೆಗೆ ಹರೇಕಳ ಹಾಜಬ್ಬ ಹೆಸರು!
ಮಂಗಳೂರು, ಜನವರಿ 02; ಸರ್ವ ಜನರಿಗೂ ಸ್ಫೂರ್ತಿಯಾಗಿರುವ ಪದ್ಮಶ್ರೀ ವಿಜೇತ, ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಶ್ರೇಷ್ಠ ಗೌರವವನ್ನು ನೀಡಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಹಾಜಬ್ಬ ಕಿತ್ತಳೆ ಹಣ್ಣನ್ನು ಮಾರುತ್ತಿದ್ದ ರಸ್ತೆ 'ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ' ಎಂದು ನಾಮಕರಣ ಮಾಡಲು ಮಂಗಳೂರು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ. ಈ ಮೂಲಕ ಸರಳ ವ್ಯಕ್ತಿತ್ವದ ಪರಮ ತ್ಯಾಗಿ ಹಾಜಬ್ಬರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಆಲೋಚನೆ ಮಾಡಲಾಗಿದೆ.
ಹರೇಕಳ ಹಾಜಬ್ಬ ರಾಷ್ಟ್ರದ ಅತ್ಯುನ್ನತ ನಾಲ್ಕನೇ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಹಾಜಬ್ಬರತ್ತ ಇಡೀ ದೇಶವೇ ತಿರುಗಿ ನೋಡಿದೆ. ಕಾಲಿಗೆ ಸವೆದ ಹವಾಯಿ ಚಪ್ಪಲಿ, ಇಸ್ತ್ರಿಯನ್ನೇ ನೋಡದ ಮೇಲಿನ ಗುಂಡಿ ಬಿಚ್ಚಿದ, ಅರ್ಧ ಕೈ ಮಡಚಿದ ಬಿಳಿ ಅಂಗಿ, ಮೊಣಕಾಲುದ್ದದ ಬಿಳಿ ಪಂಚೆಯ ಹಾಜಬ್ಬರು ಈಗ ಸಮಯವೇ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ.
ಪದ್ಮಶ್ರೀ ಪುರಸ್ಕೃತ ಹಾಜಬ್ಬ ಸನ್ಮಾನಕ್ಕೆ ಅಭಿಮಾನಿಗಳ ತಳ್ಳಾಟ; ಗಲಿಬಿಲಿಯಾಗಿ ಓಟಕ್ಕಿತ್ತ ಹಾಜಬ್ಬ
ರಾಜ್ಯದ ಹಲವು ಭಾಗಗಳಿಗೆ ಬರಲು ಹಾಜಬ್ಬರಿಗೆ ಪ್ರತಿನಿತ್ಯ ಅಹ್ವಾನ ಬರುತ್ತಿದೆ. ಹಾಜಬ್ಬ ಶಾಲೆಗೆ ಅವರ ಅಭಿಮಾನಿಗಳು ಸಹಾಯವನ್ನು ಮಾಡುತ್ತಿದ್ದಾರೆ. ಹಾಜಬ್ಬರಿಗೆಂದು ಹಣ ನೀಡಿದರೂ ಅದನ್ನೂ ಶಾಲೆಗೇ ನೀಡುವ ಮೂಲಕ ಹಾಜಬ್ಬ ಮತ್ತೆ ತಾನು ಬರಿಗಾಲ ಫಕೀರ ಅನ್ನೋದನ್ನು ನಿರೂಪಿಸಿದ್ದಾರೆ.
ವರ್ಷದ ವ್ಯಕ್ತಿ; ಸ್ವಂತ ಸೂರಿಲ್ಲದ ಕಿತ್ತಳೆ ವ್ಯಾಪಾರಿ ಹರೇಕಳ ಹಾಜಬ್ಬಗೆ ಪದ್ಮಶ್ರೀ ಪ್ರಶಸ್ತಿ
ಮಂಗಳೂರಿನ ಜನ ಹರೇಕಳ ಹಾಜಬ್ಬರನ್ನು ಚಿರಕಾಲ ನೆನಪು ಮಾಡುವಂತಹ ಯೋಜನೆಗೆ ಈಗ ಮಂಗಳೂರು ಮಹಾನಗರ ಪಾಲಿಕೆ ಕೈ ಹಾಕಿದೆ. ಕಿತ್ತಳೆ ಹಣ್ಣು ಮಾರುತ್ತಾ, ಅದರಲ್ಲಿ ಬಂದ ಹಣದಿಂದ ಶಾಲೆ ಆರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ ಹರೇಕಳ ಹಾಜಬ್ಬರು ಕಿತ್ತಳೆ ಹಣ್ಣನ್ನು ಮಾರಿದ ಸ್ಟೇಟ್ ಬ್ಯಾಂಕ್ ರಸ್ತೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ರಸ್ತೆ ಎಂಬುದಾಗಿ ನಾಮಕರಣ ಮಾಡಲು ಮುಂದಾಗಿದೆ.
ಹರೇಕಳದಲ್ಲಿ ಪದ್ಮಶ್ರೀ ಪುರಸ್ಕೃತರ ಸಮಾಗಮ; ನಾಡಿಗೆ ಸಾಮರಸ್ಯದ ಸಂದೇಶ ಕಳುಹಿಸಿದ ದಿಗ್ಗಜರು
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಅಬ್ದುಲ್ ಲತೀಫ್ ಸ್ಟೇಟ್ ಬ್ಯಾಂಕ್ ರಸ್ತೆಗೆ ಹರೇಕಳ ಹಾಜಬ್ಬರ ಹೆಸರನ್ನು ಇಡುವಂತೆ ಪಾಲಿಕೆಗೆ ಮನವಿ ಸಲ್ಲಿಸಿದ್ದು, ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಕಾರ್ಯಸೂಚಿ ಮಂಡನೆಯಾಗಿದೆ.
ಸ್ಟೇಟ್ ಬ್ಯಾಂಕ್ ವೃತ್ತದಿಂದ ರಾವ್ & ರಾವ್ ವೃತ್ತದವರೆಗಿನ ರಸ್ತೆಗೆ ಪದ್ಮಶ್ರೀ ಹರೇಕಳ ಹಾಜಬ್ಬ ಹೆಸರು ಇಡಲು ಮನವಿ ಮಾಡಲಾಗಿದೆ. ಈ ರಸ್ತೆಗೆ ಮಾಡಲು ಸಾಧ್ಯವಿಲ್ಲದಿದ್ದರೆ, ಈ ರಸ್ತೆಗೆ ಹೊಂದಿಕೊಂಡಿರುವ ಮೂರು ರಸ್ತೆಗಳ ಪೈಕಿ ಯಾವುದಾದರೂ ರಸ್ತೆಗೆ ಅಥವಾ ವೃತ್ತಕ್ಕೆ ಹೆಸರಿಡುವಂತೆ ಮಹಾನಗರ ಪಾಳಿಕೆ ಸದಸ್ಯ ಅಬ್ದುಲ್ ಲತೀಫ್ ಮನವಿ ಮಾಡಿದ್ದರು.
ಆದರೆ ರಸ್ತೆಗೆ ನಾಮಕರಣ ಮಾಡಲು ಹಲವು ನಿಯಮಗಳಿವೆ. ಸಾರ್ವಜನಿಕ ರಸ್ತೆಗೆ ಹೆಸರಿಡುವ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಅದರದ್ದೇ ಆದ ಕಾರ್ಯಸೂಚಿಗಳಿವೆ. ರಸ್ತೆಗೆ ನಾಮಕರಣ ಮಾಡಲು ಮಹಾನಗರ ಪಾಲಿಕೆ ಅಭಿಪ್ರಾಯ ಪಟ್ಟರೆ, ನಗರ ಯೋಜನೆ ಸ್ಥಾಯಿ ಸಮಿತಿ ಇದನ್ನು ಪರಿಶೀಲನೆ ಮಾಡಲಿದೆ.
ಪಾಲಿಕೆ ಗೊತ್ತುವಳಿ ಅಂಗೀಕರಿಸಿದ ನಂತರ ಅದನ್ನು ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಿಸಬೇಕು. ದಿನಪತ್ರಿಕೆಗಳಲ್ಲಿ ಪ್ರಕಟವಾದ ತಿಂಗಳೊಳಗೆ ಈ ಬಗ್ಗೆ ಆಕ್ಷೇಪಣೆ ಅಥವಾ ಸಲಹೆಗಳು ಬಂದರೆ ಪಾಲಿಕೆಯ ಸಭೆಯಲ್ಲಿ ಆ ಸಲಹೆ ಅಥವಾ ಆಕ್ಷೇಪಣೆಯನ್ನು ಮಂಡಿಸಬೇಕಾಗುತ್ತದೆ..
ರಾಜ್ಯ ಸರ್ಕಾರದ ಯಾವುದೇ ನಿರ್ದೇಶನಗಳಿದ್ದರೆ, ಅವುಗಳಿಗೆ ಒಳಪಟ್ಟ ಗೊತ್ತುವಳಿಯನ್ನು ಅಂಗೀಕರಿಸಿದ ಮೇಲೆ ಅದರಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಹರೇಕಳ ಹಾಜಬ್ಬರ ಹೆಸರು ಹಾಜಬ್ಬರು ಕಿತ್ತಳೆ ಮಾರಿದ ರಸ್ತೆ ಗೆ ಇಡುವ ನಿರ್ಧಾರ ಕರಾವಳಿಗರಲ್ಲಿ ಹರ್ಷ ತಂದಿದೆ. ಈ ಮೂಲಕ ಶಿಕ್ಷಣ ಸಂತನಿಗೆ ಗೌರವವನ್ನು ನೀಡಲಾಗಿದೆ.