ಗೋವು ಸಾಕಿ, ಕರುವಿಗೆ 'ಅಪ್ಪು' ಎಂದು ಹೆಸರಿಟ್ಟ ಮಂಗಳೂರು ಆಯುಕ್ತರು
ಮಂಗಳೂರು, ಡಿಸೆಂಬರ್ 08; ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ವತಃ ಗೋವುಗಳನ್ನು ಸಾಕುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಈದೀಗ ಕಮೀಷನರ್ ಸಾಕಿದ ಗೋವೊಂದು ಗಂಡು ಕರುವಿಗೆ ಜನ್ಮ ನೀಡಿದ್ದು, ಆ ಕರುವಿಗೆ 'ಅಪ್ಪು' ಅಂತಾ ನಾಮಕರಣ ಮಾಡುವ ಮೂಲಕ ಕಮೀಷನರ್ ಎನ್. ಶಶಿಕುಮಾರ್ ಪುನೀತ್ ರಾಜ್ಕುಮಾರ್ ಮೇಲಿನ ಅಭಿಮಾನ ಮೆರೆದಿದ್ದಾರೆ.
ಕಾಳಿಕಾಂಬೆ ಮೇಲೆ ಹಾಡು ಬರೆದು, ಹಾಡಿದ ಮುಸ್ಲಿಂ ಯುವಕ!
2021ರ ಜನವರಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ ಎನ್. ಶಶಿಕುಮಾರ್ ವಿವಿಧ ಕಾರಣಗಳಿಂದ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಮಹತ್ವದ ಪ್ರಕರಣಗಳನ್ನು ಬೇಧಿಸಲು ವಿಫಲರಾದ ಟೀಕೆಗಳಿದ್ದರೂ, ಪೊಲೀಸ್ ಮತ್ತು ಜನರ ನಡುವೆ ಇದ್ದ ಅಂತರವನ್ನು ತೆರೆದು ಜನಸ್ನೇಹಿ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ.
ಮಂಗಳೂರು: ಬಾಡಿಗೆ ಮನೆಯಲ್ಲಿದ್ದರೂ ಪ್ರತಿದಿನ 600 ಬೀದಿ ನಾಯಿಗಳನ್ನು ಪೋಷಿಸುವ ರಜನಿ ಶೆಟ್ಟಿ
ಸದ್ಯ ಪಾಂಡೇಶ್ವರದ ಪೊಲೀಸ್ ಲೇನ್ನಲ್ಲಿ ವಾಸವಿರುವ ಕಮೀಷನರ್ ಎನ್. ಶಶಿಕುಮಾರ್, ದೇಸಿ ಗೋವನ್ನು ತಮ್ಮ ಮನೆಯಲ್ಲಿ ಸಾಕಿಕೊಂಡಿದ್ದಾರೆ. ಆ ಗೋವಿನ ಲಾಲನೆ ಪಾಲನೆಯನ್ನು ಸ್ವತಃ ಕಮೀಷನರ್ ಅವರೇ ಮಾಡುತ್ತಿದ್ದಾರೆ. ಮೊದಲಿನಿಂದಲೂ ಗ್ರಾಮೀಣ ಬದುಕು, ಕೃಷಿಯಲ್ಲಿ ಅಪೂರ್ವ ಆಸಕ್ತಿಯನ್ನು ಹೊಂದಿರುವ ಕಮೀಷನರ್ ಕೆಲಸಗಳ ಒತ್ತಡದ ನಡುವೆಯೂ ಗೋವನ್ನು ಸಾಕುತ್ತಾ ನೆಮ್ಮದಿಯನ್ನು ಕಾಣುತ್ತಿದ್ದಾರೆ.
ಮಂಗಳೂರು; ಸಿನಿಮಾ ಶೈಲಿಯಲ್ಲಿ ಮೈಸೂರಿನ ಫೋಟೋಗ್ರಾಫರ್ ಕೊಲೆ!
ಕಮೀಷನರ್ ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದು, ಅಪ್ಪು ನಿಧನದ ವೇಳೆ ಕಂಬನಿ ಮಿಡಿದಿದ್ದರು. ಪುನೀತ್ ಆಸ್ಪತ್ರೆಯಲ್ಲಿದ್ದಾಗ ಅಪ್ಪುವಿಗಾಗಿ ಪ್ರಾರ್ಥನೆ ಮಾಡೋಣ ಅಂತಾ ಜನರಲ್ಲಿ ಮನವಿ ಮಾಡಿದ್ದರು.
ಇದೀಗ ತಾನು ಪ್ರೀತಿಯಿಂದ ಸಾಕಿದ ಗೋವು ಗಂಡುಕರುವಿಗೆ ಜನ್ಮ ನೀಡಿದ್ದು, ಆ ಕರುವಿಗೆ ಕಮೀಷನರ್ ಅಪ್ಪು ಎಂಬುವುದಾಗಿ ನಾಮಕರಣ ಮಾಡಿದ್ದಾರೆ. ಬಿಳಿ-ಕಂದು ಬಣ್ಣದ ಮುದ್ದಾದ ಕರುವನ್ನು ಹಿಡಿದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಖುಷಿಯಿಂದ ಹಂಚಿಕೊಂಡಿದ್ದಾರೆ. ನಮ್ಮ ಮನೆಗೆ ನೂತನ ಸದಸ್ಯನ ಆಗಮನವಾಗಿದೆ. ಅವನಿಗೆ ಅಪ್ಪು ಅಂತಾ ಹೆಸರಿಟ್ಟಿದ್ದೇವೆ ಅಂತಾ ಬರೆದುಕೊಂಡಿದ್ದಾರೆ.
ಸರಳತೆಯಿಂದಲೂ ಗುರುತಿಸಿಕೊಂಡಿರುವ ಕಮೀಷನರ್ ಮನೆಯಲ್ಲಿ ತಾವೇ ಅಡಿಗೆ ತಯಾರು ಮಾಡಿಕೊಳ್ಳುತ್ತಾರೆ. ಅಧಿಕಾರಿ ಎಂಬ ಅಹಂ ತೋರಿಸದೇ ಸಾಮಾನ್ಯರಲ್ಲಿ ಸಾಮನ್ಯರಾಗಿ ಜನರೊಂದಿಗೆ ಬೆರೆಯೋದು ಜನರ ಮೆಚ್ಚುಗೆ ಗಳಿಸಿದೆ.
ಮಂಗಳೂರಿನಲ್ಲಿ ನೈಟ್ ಬೀಟ್ ಮಾಡಿ ಬೀಚ್ಗಳಲ್ಲಿ, ನಿರ್ಜನ ಪ್ರದೇಶದಲ್ಲಿ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದ ಜನರ ಹೆಡೆ ಮುರಿ ಕಟ್ಟಿದ್ದರು. ಪೊಲೀಸರ ಆರೋಗ್ಯದ ದೃಷ್ಠಿಯಿಂದಲೂ ವಿಶೇಷ ಗಮನಹರಿಸಿದ ಅವರು ಹಲವು ಸುಧಾರಣಾ ಅಂಶಗಳನ್ನು ಜಾರಿಗೆ ತಂದಿದ್ದರು.
ನಿರ್ದಿಷ್ಟ ತೂಕದಿಂದ ಜಾಸ್ತಿ ಇರುವ ಪೊಲೀಸರನ್ನು ಗುರುತಿಸಿ ಅವರಿಗೆ ತಿಂಗಳ ಕಾರ್ಯಾಗಾರವನ್ನು ಮಾಡಿದ್ದರು. ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಪೊಲೀಸರಿಗಾಗಿ ಮಾಡಿದ್ದರು. ಕಮೀಷನರ್ ಅವರ ಈ ಕಾರ್ಯ ಪೊಲೀಸರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಇತ್ತೇಚೆಗೆ ಕಟೀಲು ಸಮೀಪದ ಎಕ್ಕಾರಿನಲ್ಲಿ ನಡೆದ ಕೆಸರುಗದ್ದೆ ಕೂಟದಲ್ಲೂ ಕಮೀಷನರ್ ತಾನೊಬ್ಬ ಅಧಿಕಾರಿಯಾದರೂ, ಜನರೊಂದಿಗೆ ಸಂಭ್ರಮದಿಂದ ಭಾಗಿಯಾಗಿದ್ದರು. ಅಲ್ಲದೇ ತಮ್ಮ ಕುಟುಂಬಿಕರ ಮಕ್ಕಳು, ಪೊಲೀಸರ ಜೊತೆ ಕೆಸರಿನಲ್ಲಿ ಆಟ ಆಡಿ ಸಂಭ್ರಮಿಸಿದ್ದಾರೆ.
ಕರಾವಳಿಯ ಸಂಪ್ರದಾಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಎನ್. ಶಶಿಕುಮಾರ್ ಯಕ್ಷಗಾನ, ದೈವಾರಾಧನೆ ಯಲ್ಲೂ ಭಾಗವಹಿಸಿದ್ದಾರೆ. ಸಂಗೀತ ಕಮೀಷನರ್ ಆಸಕ್ತಿಯ ಕ್ಷೇತ್ರವಾಗಿದ್ದು,ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
ಆದರೆ ಕೇವಲ ಜನಸ್ನೇಹಿ ಅಧಿಕಾರಿಯಾದರೆ ಸಾಲದು ದಕ್ಷವಾಗಿ ಕಾರ್ಯ ನಿರ್ವಹಿಸಬೇಕು ಎನ್ನೋದು ಹಲವರ ಅಭಿಪ್ರಾಯ ವಾಗಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ವಕೀಲ ಕೆ. ಎಸ್. ಎನ್. ರಾಜೇಶ್ ನಾಪತ್ತೆಯಾಗಿ 50 ದಿನ ಕಳೆದರೂ ಆತನನ್ನು ಬಂಧಿಸದಿರೋದು ಪೊಲೀಸ್ ಕಮೀಷನರ್ ವೈಫಲ್ಯ ಅಂತಾ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಆರೋಪಿಸಿದ್ದಾರೆ. ಕಮೀಷನರ್ ಸಾಹೇಬರು ಕೇವಲ ಹಾಡು ಹೇಳೋದು ಮಾತ್ರವಲ್ಲ,ಆರೋಪಿಗಳನ್ನು ಬಂಧಿಸುವಲ್ಲೂ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದ್ದಾರೆ.
Recommended Video
ಹನ್ನೊಂದು ತಿಂಗಳಿನಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿರುವ ಎನ್. ಶಶಿಕುಮಾರ್ ಈಗ ಗೋವುನ್ನು ಸಾಕುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಜನಸ್ನೇಹಿಯಾಗಿ ಗುರುತಿಸಿರುವ ಕಮೀಷನರ್ ಅಪರಾಧ ಪ್ರಕರಣಗಳಿಗೂ ಕಡಿವಾಣ ಹಾಕಿ, ಮಂಗಳೂರಿನಲ್ಲಿ ಕಿಡಿಗೇಡಿಗಳನ್ನು ಮಟ್ಟ ಹಾಕಲಿ ಅನ್ನೋದು ಜನರ ಆಶಯ.