'ಮಂಗಳೂರು ಚಲೋ': ರಾಜಕಾರಣಿಗಳ ಮೇಲಾಟದಲ್ಲಿ ಜನರಿಗೆ ನಿಷೇಧಾಜ್ಞೆ ಭೀತಿ
ಮಂಗಳೂರು, ಸೆಪ್ಟೆಂಬರ್ 5: ಪಿಎಫ್ಐ ಮತ್ತು ಎಸ್'ಡಿಪಿಐ, ಕೆಎಫ್'ಡಿ ಮತ್ತಿತರ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಇಂದು 'ಮಂಗಳೂರು ಚಲೋ' ಜಾಥಾ ಆರಂಭಿಸಿತ್ತು. ಜಾಥಾಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರಾಜ್ಯ ಸರಕಾರ ದಿಢೀರ್ ಬ್ರೇಕ್ ಹಾಕಿದೆ.
"ಮಂಗಳೂರು ಚಲೋ ಬೈಕ್ ಜಾಥಾ" ರಾಜ್ಯದ ನಾನಾ ಜಿಲ್ಲೆಗಳಿಂದ ಆರಂಭವಾಗಿದ್ದು ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಿ ದೊಡ್ಡ ಸಮಾವೇಶ ನಡೆಯಲಿದೆ. ಇದಕ್ಕೆ ಒಂದೆಡೆ ದೊಡ್ಡ ಮಟ್ಟದ ಸಿದ್ಧತೆಯನ್ನು ಬಿಜೆಪಿ ಮಾಡುತ್ತಿದ್ದರೆ, ಇನ್ನೊಂದೆಡೆ ಈ ಜಾಥಾಕ್ಕೆ ನಾನಾ ಪಕ್ಷ ಸಂಘಟನೆಗಳಿಂದ ವಿರೋಧಗಳು ಕೂಡ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೂಡ ಜಾಥಾಗೆ ಪರವಾನಿಗೆ ನೀಡಿಲ್ಲ.
ಜಾಥಾಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಯಂತ್ರಿಸಲು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹಾಗೂ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ತಂಡ, ರಾಜ್ಯ ಮೀಸಲು ಪೊಲೀಸ್ ಪಡೆ, ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತಲಾ ಹತ್ತು ತುಕಡಿಗಳು ಮಂಗಳೂರಿಗೆ ಬಂದು ಇಳಿದಿವೆ.
ಬೇರೆ ಬೇರೆ ಜಿಲ್ಲೆಗಳಿಂದ ಬಂದ ಪೊಲೀಸರು
ಮಂಗಳೂರಿಗೆ ಬೇರೆ ಬೇರೆ ಜಿಲ್ಲೆಗಳಿಂದ ಪೊಲೀಸರ ತಂಡ ಆಗಮಿಸಿದೆ. ವಿಜಯಪುರ, ಧಾರವಾಡ, ಗದಗ, ಬೆಳಗಾವಿ, ಸೇರಿದಂತೆ ನಾನಾ ಜಿಲ್ಲೆಯಿಂದ ಸುಮಾರು ನೂರಕ್ಕೂ ಅಧಿಕ ಪೊಲೀಸರು ಆಗಮಿಸಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ತಿಳಿಸಿದ್ದಾರೆ.
ಇನ್ನು, "ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಕೆಎಸ್ಆರ್ಪಿಯ ಹದಿನೈದು ತುಕಡಿಗಳು ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ," ಎಂದು ದಕ್ಷಿಣ ಕನ್ನಡ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮತ್ತೆ ಸೆಕ್ಷನ್ ಭಯ
ಬೈಕ್ ಜಾಥಾಕ್ಕೆ ನಗರದಲ್ಲಿ ಅವಕಾಶ ನೀಡಿಲ್ಲ. ಒಂದು ವೇಳೆ ಆದೇಶ ಮೀರಿ ಜಾಥಾ ನಡೆಸುವ ಪ್ರಯತ್ನ ಪಟ್ಟರೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಅನಿವಾರ್ಯತೆ ಉಂಟಾಗುತ್ತದೆ ಎಂದು ಮಂಗಳೂರು ಆಯುಕ್ತ ಟಿಆರ್ ಸುರೇಶ್ ತಿಳಿಸಿದ್ದಾರೆ.
ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 62 ದಿನಗಳ ಕಾಲ ಸಿಆರ್'ಪಿಸಿ ಸೆಕ್ಷನ್ 144 ಹಾಕಲಾಗಿತ್ತು. ಇತ್ತೀಚೆಗಷ್ಟೆ ಇದನ್ನು ಹಿಂತೆಗೆಯುವ ಮೂಲಕ ತಿಂಗಳಿಂದೀಚೆಗೆ ಜಿಲ್ಲೆ ಮತ್ತೆ ಶಾಂತಿಯುತವಾಗಿದೆ. ಆದರೆ, ಈಗ ಮತ್ತೆ ಪ್ರತಿಭಟನೆ ಜಾಥಾ ತಲೆ ಎತ್ತಿದ್ದು ಜಿಲ್ಲೆಗೆ ನಿಷೇಧಾಜ್ಞೆಯ ಕರಿಛಾಯೆ ಗೋಚರಿಸುವ ಲಕ್ಷಣ ಎದ್ದು ಕಾಣುತ್ತಿದೆ.
ರೈ ವಿರುದ್ಧ ಬಿಜೆಪಿ ಮುಖಂಡರು ಗರಂ
ರಾಜ್ಯ ಸರ್ಕಾರ 'ಮಂಗಳೂರು ಚಲೋ' ಬೈಕ್ ಜಾಥಾಗೆ ದಿಢೀರ್ ಬ್ರೇಕ್ ಹಾಕಿದ್ದು ಇದಕ್ಕೆ ರಮಾನಾಥ್ ರೈ ಕೂಡಾ ಕಾರಣ ಎಂದು ಮಂಗಳೂರಿನ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ರಮಾನಾಥ ರೈ ಆಯೋಜಿಸಿರುವ ಸೆಪ್ಟೆಂಬರ್ 12ರ ಸಾಮರಸ್ಯದ ನಡಿಗೆಯಲ್ಲಿ ಅವರು ಇದರ ನೇರ ಪರಿಣಾಮವನ್ನು ಕಾಣಲಿದ್ದಾರೆ ಎಂದು ಎಚ್ಚರಿಕೆ ಕೂಡ ಬಿಜೆಪಿ ನೀಡಿದೆ.
ಸೆಪ್ಟೆಂಬರ್ 12ರಂದು ಸಾಮರಸ್ಯ ನಡಿಗೆ
ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯಕ್ಕಾಗಿ ಪಕ್ಷಾತೀತ ನೆಲೆಯಲ್ಲಿ ಸೆಪ್ಟೆಂಬರ್ 12 ರಂದು ಸಾಮರಸ್ಯದ ನಡಿಗೆಯನ್ನು ಪರಂಗಿಪೇಟೆಯಿಂದ ಆರಂಭಿಸಲು ಸಚಿವ ಬಿ ರಮಾನಾಥ ರೈ ನಿರ್ಧರಿಸಿದ್ದರು. ಸಾಮರಸ್ಯ ನಡಿಗೆ ಮಂಗಳೂರಿನ 'ನೆಹರೂ ಮೈದಾನ'ದಲ್ಲಿ ಸಮಾವೇಶಗೊಂಡ ನಂತರ ಸಾರ್ವಜನಿಕ ಸಮಾವೇಶ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಒಂದು ವೇಳೆ ಜಿಲ್ಲೆಯಲ್ಲಿ ಸೆಕ್ಷನ್ ಜಾರಿ ಆದಲ್ಲಿ ಈ ನಡಿಗೆ ಕೂಡ ನಡೆಯುವುದು ಅನುಮಾನವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.