ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ
ಮಂಗಳೂರು, ಜೂ. 21: ತಲೆಮರೆಸಿಕೊಂಡಿರುವ ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೀಶನಿಗೆ ಮಂಗಳೂರಿನ ಶ್ರೀಮಂತ ಉದ್ಯಮಿಗಳ ಮೊಬೈಲ್ ನಂಬರ್ಗಳನ್ನು ನೀಡುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಪಂಪ್ವೆಲ್ ಕಪಿತಾನಿಯೋ ಶಾಲೆ ಸಮೀಪದ ನಲಪಾಡ್ ರೆಸಿಡೆನ್ಸಿ ನಿವಾಸಿ ವಿಶಾಲ್ ಸಿ.ಉಚ್ಚಿಲ್ ಪ್ರಾಯ(27) ಬಂಧಿತ ಆರೋಪಿ. ನಗರದ ಅಶೋಕನಗರದಲ್ಲಿ ಅಕ್ರಮವಾಗಿ ಸಜೀವ ಮದ್ದುಗುಂಡುಗಳ ಸಹಿತ ತಿರುಗಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಮಂಗಳೂರು ನಗರದ ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.[ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ರವಿ ಪೂಜಾರಿ ಕರೆ]
ಆರೋಪಿ ಮಂಗಳೂರಿನ ಶ್ರೀಮಂತ ಉದ್ಯಮಿಗಳ ಮೊಬೈಲ್ ಫೋನ್ ಹಾಗೂ ಸ್ಥಿರ ದೂರವಾಣಿಗಳನ್ನು ಸಂಗ್ರಹಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ರವಿ ಪೂಜಾರಿ ಮತ್ತು ಕಲಿ ಯೋಗೀಶನಿಗೆ ನೀಡುತ್ತಿದ್ದ. ಅಲ್ಲದೆ ಮಂಗಳೂರು ಕಾರಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಪ್ರತಾಪ್ ಶೆಟ್ಟಿ ಎಂಬಾತನಿಗೆ ಮೊಬೈಲ್ ಸಂಖ್ಯೆಗಳನ್ನು ನೀಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯ ವಶದಿಂದ 5 ಸಜೀವ ಬುಲೆಟ್ಗಳು, 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಹಾಗೂ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಪೊಲೀಸ್ ಕಮಿಷನರ್ ಎಸ್.ಮುರುಗನ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ಎಂ.ಶಾಂತರಾಜು ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಎಸ್ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.