ಇದು ತುಳುನಾಡ ಬಸ್! ಬಸ್ ನಲ್ಲಿ ಭಾಷಾ ಜಾಗೃತಿ
ಮಂಗಳೂರು, ಜನವರಿ 16: ಕರಾವಳಿಯಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ತುಳು ಭಾಷೆಯು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎನ್ನುವುದು ತುಳುನಾಡಿಗರ ಹಲವು ವರ್ಷಗಳ ಬೇಡಿಕೆ. ಆದರೆ ಆ ಬೇಡಿಕೆ ಮಾತಿನಲ್ಲಿದ್ದರೆ ಸಾಲದು, ಹೇಗಾದರೂ ಅದು ವ್ಯಕ್ತಗೊಳ್ಳುತ್ತಲೇ ಇರಬೇಕು ಎಂಬ ಕಾರಣಕ್ಕೆ ವಿಭಿನ್ನ ಆಲೋಚನೆಯೊಂದು ಕಾರ್ಯ ರೂಪಕ್ಕೆ ಇಳಿದಿದೆ.
ಜನರು ಹೆಚ್ಚಾಗಿ ಓಡಾಡುವ ವಾಹನವಾದ ಬಸ್ ನಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗಿದೆ. ನಗರವಿಡೀ ಓಡಾಡುವ ಈ ಬಸ್ ಅನ್ನು ಜನ ತಿರುಗಿ ನೋಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಬಸ್ ಚಾಲಕಿಯಾದ ಐಎಎಸ್ ಅಧಿಕಾರಿ ಶಿಖಾ
ಮಂಗಳೂರು ನಗರದಲ್ಲಿ ಓಡಾಡುವ ಈ ಸಿಟಿ ಬಸ್ಸಿನಲ್ಲಿ ತುಳು ಲಿಪಿಯನ್ನು ಬರೆದು ತುಳು ಭಾಷೆಯು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂಬ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ. ಮಂಗಳೂರು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಮಾಲೀಕತ್ವದ ರೂಟ್ ನಂಬರ್ 27ರ ಗಣೇಶ್ ಪ್ರಸಾದ್ ಬಸ್ ತುಳು ಭಾಷೆಯಲ್ಲಿ ಬೋರ್ಡ್ ಹಾಕಿಕೊಂಡು ಸಿಂಗಾರಗೊಂಡು ಸಂಚರಿಸುತ್ತಿದೆ.
ಸ್ಟೇಟ್ ಬ್ಯಾಂಕ್ ನಿಲ್ದಾಣದಿಂದ ಅತ್ತಾವರ ಮುಖೇನ ಮಂಗಳಾದೇವಿಗೆ ತೆರಳುವ ಈ ಬಸ್ ಗೆ ಪೇಂಟಿಂಗ್ ಮಾಡುವ ಸಮಯದಲ್ಲಿ ಬಸ್ ನ ಎರಡು ಬದಿಗೂ ಬಸ್ ಹೆಸರು ಅಥವಾ ರೂಟ್ ಬರೆಯುವ ಬದಲು ಅ ದಿಂದ ಅಂ ವರೆಗಿನ ತುಳು ಲಿಪಿ ಬರೆದು ಪಕ್ಕದಲ್ಲೇ ಹ್ಯಾಷ್ ಟ್ಯಾಗ್ ಮುಖೇನ ತುಳು ಟು 8ತ್ ಶೆಡ್ಯೂಲ್ ಹ್ಯಾಷ್ ತುಳು ಅಫೀಷಿಯಲ್ ಕೆಎ ಕೆಎಲ್ ಎಂದು ಬರೆಯಲಾಗಿದೆ.
ಕೆಎಸ್ಆರ್ಟಿಸಿಯ ವಿವಿಧ ಮಾದರಿ ಬಸ್ಗಳಿಗೆ ಯಡಿಯೂರಪ್ಪ ಚಾಲನೆ
ಕೆಲ ದಿನಗಳ ಹಿಂದೆ ಪೇಂಟಿಂಗ್ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲೂ ಈ ಬಸ್ ಖ್ಯಾತಿ ಪಡೆದಿದೆ. ಮಂಗಳೂರಿನ ಈ ಬಸ್ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಮಾಲೀಕ ದಿಲ್ ರಾಜ್ ಆಳ್ವ ಬಳಿ 5 ಸಿಟಿ ಬಸ್ ಇದ್ದು, ಹಿಂದೆಯೂ ಇವರು ಈ ರೀತಿ ವಿಶೇಷ ಪರಿಕಲ್ಪನೆಯಲ್ಲಿ ಗಮನ ಸೆಳೆದಿದ್ದರು. ಸ್ವಚ್ಛ ಭಾರತ್, ಸೇವ್ ವಾಟರ್ ಸೇರಿದಂತೆ ವಿವಿಧ ಪರಿಕಲ್ಪನೆಯಡಿ ಈ ಹಿಂದೆಯೂ ಬಸ್ ಗಳಲ್ಲಿ ಪೇಂಟಿಂಗ್ ಮೂಡಿ ಬಂದಿತ್ತು.
ಜಾಗೃತಿಯೊಂದಿಗೆ ಬಸ್ ಕೂಡ ರಂಗು ರಂಗಾಗಿ ಕಂಗೊಳಿಸುತ್ತಿದ್ದು, ಈ ಕ್ರಿಯಾಶೀಲ ಆಲೋಚನೆಗೆ ಬೆಂಬಲ, ಪ್ರಶಂಸೆ ಹರಿದುಬರುತ್ತಿದೆ.