ಮಂಗಳೂರು ಸೈಂಟ್ ಲಾರೆನ್ಸ್ ಚರ್ಚ್ ವಾರ್ಷಿಕ ಮಹೋತ್ಸವ
ಮಂಗಳೂರು, ಆಗಸ್ಟ್, 11: ಕ್ರೈಸ್ತರು ಮನಸ್ಸಿನಲ್ಲಿ ಕನಸು, ಕಣ್ಣಲ್ಲಿ ದಯೆ, ಮುಖದಲ್ಲಿ ಸಂತೋಷ, ಬಾಯಲ್ಲಿ ಸತ್ಯ, ಹೃದಯದಲ್ಲಿ ಪ್ರೀತಿ, ಸೇವಾ ಮನೋಭಾವನೆ ಹೊಂದಿ ಬಾಳ್ವೆ ನಡೆಸಬೇಕು ಎಂದು ಬಳ್ಳಾರಿಯ ಬಿಷಪ್ ರೈ|ರೆ|ಡಾ| ಹೆನ್ರಿ ಡಿಸೋಜಾ ಕರೆ ನೀಡಿದರು.
ಬೋಂದೆಲ್ ಸೈಂಟ್ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಸೋಮವಾರ ನಡೆದಿದ್ದು, ಇದರಲ್ಲಿ ಭಾಗವಹಿಸಿದ ಇವರು ಸಂಭ್ರಮದ ಬಲಿ ಪೂಜೆಯ ನೇತೃತ್ವ ವಹಿಸಿದ್ದರು. ಬೋಂದೆಲ್ ಚರ್ಚ್ ಪುಣ್ಯ ಕ್ಷೇತ್ರವಾಗಿ ಬೆಳವಣಿಗೆ ಹೊಂದುತ್ತಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.[ರೈಲು ಅಪಘಾತ ತಡೆದ ಫ್ರಾಂಕ್ಲಿನ್ ಗೆ ಸನ್ಮಾನ]
ಹಬ್ಬದ ಸಂದೇಶದ ಬಗ್ಗೆ ಮಾತನಾಡಿದ ಕುಲಶೇಖರ ಹೋಲಿ ಕ್ರಾಸ್ ಚರ್ಚ್ನ ಧರ್ಮಗುರು ವಂ| ವಿಕ್ಟರ್ ಮಚಾದೊ ಅವರು, ಸಮರ್ಪಣಾ ಮನೋಭಾವದ ಜೀವನ ಎನ್ನುವುದು ಕೇವಲ ಕ್ರೈಸ್ತರಿಗೆ ಮಾತ್ರ ಸೀಮಿತವಲ್ಲ. ಮಹಾತ್ಮಾ ಗಾಂಧಿ, ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ನಂತಹ ಮಹನೀಯರು ಇಂತಹ ಬದುಕು ನಡೆಸಿ ಆದರ್ಶರಾಗಿದ್ದಾರೆ. ಅರ್ಪಣಾ ಮನೋಭಾವದ ಬದುಕನ್ನು ನಾವು ನಡೆಸೋಣ ಎಂದರು.
ಶಿಲುಬೆ ಕುರುಹು ಪ್ರತಿಷ್ಠಾಪನೆ:
ಯೇಸು ಕ್ರಿಸ್ತರ ಶಿಲುಬೆ ಕುರುಹನ್ನು ಚರ್ಚ್ನಲ್ಲಿ ಪ್ರತಿಷ್ಠಾಪಿಸುವ ಕಾರ್ಯ ಈ ಸಂದರ್ಭದಲ್ಲಿ ಜರುಗಿದ್ದು, ಬಿಷಪ್ ಹೆನ್ರಿ ಡಿಸೋಜಾ ಅವರು ನೆರವೇರಿಸಿದರು.
ಫ್ರಾಂಕ್ಲಿನ್ ಗೆ ಸನ್ಮಾನ:
ವಾರದ ಹಿಂದೆ ಪಚ್ಚನಾಡಿಯಲ್ಲಿ ರೈಲು ಹಳಿ ಬಿರುಕು ಬಿಟ್ಟಿರುವ ಸ್ಥಳದಲ್ಲಿ ರಥ ಪುಷ್ಪ ಗುಚ್ಚವನ್ನು ಕೆಂಪು ಬಾವುಟವಾಗಿ ಬಳಸಿ ರೈಲಿಗೆ ತೋರಿಸಿ ಸಂಭಾವ್ಯ ರೈಲು ದುರಂತ ತಪ್ಪಿಸಿದ ಫ್ರಾಂಕ್ಲಿನ್ ಡಿಸೋಜಾ ಅವರನ್ನು ಬೋಂದೆಲ್ ಚರ್ಚ್ ವತಿಯಿಂದ ಸನ್ಮಾನಿಸಲಾಯಿತು.
ಬೋಂದೆಲ್ ಚರ್ಚ್ನ ಧರ್ಮಗುರು ಡಿಸೋಜಾ, ಪಾಲನಾ ಮಂಡಳಿ ಉಪಾಧ್ಯಕ್ಷ ಪಿಂಟೊ, ಕಾರ್ಯದರ್ಶಿ ವಿಲ್ಫೆಡ್ ಅಲ್ವಾರಿಸ್, ಪ್ರಚಾರ ಸಮಿತಿಯ ಸಂಚಾಲಕ ಸ್ಟ್ಯಾನಿ ಅಲ್ವಾರಿಸ್ ಉಪಸ್ಥಿತರಿದ್ದರು.