ಮಂಗಳೂರು ಬಾಂಬ್ ಪ್ರಕರಣ: ಆರೋಪಿ ಆದಿತ್ಯರಾವ್ ಬೆಂಗಳೂರಲ್ಲಿ ಶರಣಾಗಿದ್ದು ಈ ಕಾರಣಕ್ಕಾಗಿ!
ಮಂಗಳೂರು, ಜನವರಿ 23: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಪ್ರಕರಣದ ಆರೋಪಿ ಆದಿತ್ಯರಾವ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಜ. 20ರ ಮಧ್ಯಾಹ್ನ 2.30ರ ಸುಮಾರಿಗೆ ಇಂಡಿಗೋ ವಿಮಾನಯಾನ ಸಂಸ್ಥೆಯ ಅಧಿಕಾರಿಗೆ ಬೆದರಿಕೆ ಕರೆ ಬಂದಿತ್ತು. ಹೈದರಾಬಾದ್ಗೆ ತೆರಳುವ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಸಿದ್ದು ವರದಿಯಾಗಿತ್ತು. ಈ ಕರೆ ಮಾಡಿದ್ದು ಆದಿತ್ಯರಾವ್ ಎನ್ನುವುದು ಪೊಲೀಸರ ವಿಚಾರಣೆ ವೇಳೆ ದೃಢಪಟ್ಟಿದೆ ಎನ್ನಲಾಗಿದೆ.
ಶರಣಾದವ ಮುಸ್ಲಿಂ ಆಗಿದ್ದರೆ ಕಥೆ ಏನಾಗುತ್ತಿತ್ತು?: ಕುಮಾರಸ್ವಾಮಿ
ಈ ಬೆದರಿಕೆ ಕರೆ ಕುರಿತು ಬಜ್ಪೆ ವಿಮಾನ ನಿಲ್ದಾಣದ ಸಿಬ್ಬಂದಿ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೈದರಾಬಾದ್ನಿಂದ ಮಂಗಳೂರಿಗೆ ಮಧ್ಯಾಹ್ನ 2.15ರ ವೇಳೆಗೆ ಬಂದಿದ್ದ ವಿಮಾನವು, ಮಧ್ಯಾಹ್ನ 3 ಗಂಟೆಗೆ ಮರಳಿ ಹೈದರಾಬಾದ್ಗೆ ಹೊರಡಬೇಕಿತ್ತು. ಚೆಕ್ ಆಗಿ ಎಲ್ಲ ಪ್ರಯಾಣಿಕರನ್ನು ವಿಮಾನದ ಒಳಗೆ ಕಳುಹಿಸಲಾಗಿತ್ತು. ವಿಮಾನ ಟೇಕಾಫ್ ಆಗುವ ಮುನ್ನ ಇಂಡಿಗೋ ಕಚೇರಿ ಅಧಿಕಾರಿಗೆ ಕರೆ ಬಂದಿತ್ತು, ಹೈದರಾಬಾದ್ಗೆ ತೆರಳುವ ವಿಮಾನದಲ್ಲಿ ಬಾಂಬ್ ಇದೆ ಎಂದು ಕರೆ ಮಾಡಿದ್ದ ವ್ಯಕ್ತಿ ಹೇಳಿದ್ದ.
ಹುಸಿ ಬಾಂಬ್ ಕರೆ
ಈ ಕುರಿತು ಅಧಿಕಾರಿಯು ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಕೂಡಲೇ ವಿಮಾನ ಸಂಚಾರ ನಡೆಸದಂತೆ ಸೂಚಿಸಿ ಎಲ್ಲ ಪ್ರಯಾಣಿಕರನ್ನು ಟರ್ಮಿನಲ್ಗೆ ವಾಪಸ್ ಕಳುಹಿಸಲಾಗಿತ್ತು. ವಿಮಾನದಲ್ಲಿದ್ದ ಪ್ರತಿ ಬ್ಯಾಗ್ಅನ್ನೂ ತೆಗೆದು ಕೂಲಂಕಷವಾಗಿ ತಪಾಸಣೆ ಮಾಡಲಾಗಿತ್ತು. ಸಂಜೆ ನಾಲ್ಕು ಗಂಟೆಯಿಂದ ರಾತ್ರಿ 7.30ರವರೆಗೂ ತಪಾಸಣೆ ನಡೆದಿತ್ತು. ಎಲ್ಲಿಯೂ ಬಾಂಬ್ ಪತ್ತೆಯಾಗದಿದ್ದರಿಂದ ಇದು ಹುಸಿ ಕರೆ ಎಂದು ತೀರ್ಮಾನಿಸಲಾಗಿತ್ತು. ನಂತರ ವಿಮಾನವು ಹೈದರಾಬಾದ್ಗೆ ಪ್ರಯಾಣಿಸಿತ್ತು.
ಪಶ್ಚಾತ್ತಾಪ ವ್ಯಕ್ತಪಡಿಸಿದ ಆದಿತ್ಯ
ಮಂಗಳೂರಿನ ಉತ್ತರ ಎಸಿಪಿ ಕಚೇರಿಯಲ್ಲಿ ಆದಿತ್ಯರಾವ್ನನ್ನು ತಡರಾತ್ರಿಯವರೆಗೂ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಆತ ವಿಚಿತ್ರವಾಗಿ ವರ್ತಿಸುತ್ತಿದ್ದ. ಜತೆಗೆ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದ. ರಾತ್ರಿ ಆಗಾಗ ಎದ್ದು ಮಲಗುತ್ತಿದ್ದ ಎನ್ನಲಾಗಿದೆ. ಆದಿತ್ಯರಾವ್ನನ್ನು ಇರಿಸಿರುವ ಸೆಲ್ಗೆ ಇಬ್ಬರು ಪಿಎಸ್ಐ ಮತ್ತು ಹತ್ತು ಕಾನ್ಸ್ಟೆಬಲ್ಗಳ ಭದ್ರತೆ ಒದಗಿಸಲಾಗಿದೆ. ಆತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಹಾಜರುಪಡಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಮುನ್ನ ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಆರೋಪಿ ಆದಿತ್ಯರಾವ್ ಕೃತ್ಯದ ಕುರಿತು ಸಹೋದರ ಹೇಳಿದ್ದೇನು?
ತಾನೇ ಶರಣಾಗಿದ್ದು ಏಕೆ?
ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಅಲ್ಲಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ ಆದಿತ್ಯರಾವ್, ತಾನಾಗಿಯೇ ಪೊಲೀಸರ ಮುಂದೆ ಹೋಗಿ ಶರಣಾಗಿದ್ದು ಏಕೆ? ಈ ಪ್ರಶ್ನೆಗೆ ಆದಿತ್ಯ ನೀಡಿರುವ ಉತ್ತರ ಅಚ್ಚರಿ ಮೂಡಿಸುತ್ತದೆ. ಸಿಸಿಟಿವಿ ವಿಡಿಯೋ ಮತ್ತು ಫೋಟೊಗಳನ್ನು ಬಿಡುಗಡೆ ಮಾಡಿದ್ದರಿಂದ ಪೊಲೀಸರು ಹೇಗೂ ನನ್ನನ್ನು ಬಂಧಿಸುತ್ತಾರೆ ಎನ್ನುವುದು ಖಚಿತವಾಗಿತ್ತು. ಹೀಗಾಗಿ ಪೊಲೀಸರು ನನ್ನನ್ನು ಬಂಧಿಸುವ ಮೊದಲೇ ನಾನೇ ಶರಣಾದರೆ ಒಳ್ಳೆಯದು ಎಂದು ತೀರ್ಮಾನಿಸಿದೆ ಎಂಬುದಾಗಿ ಆದಿತ್ಯ ರಾವ್ ತಿಳಿಸಿದ್ದಾನೆ.
ಬೆಂಗಳೂರಿನಲ್ಲಿ ಶರಣಾದರೆ ಪ್ರಚಾರ
ಮಂಗಳೂರಿನಲ್ಲಿ ಶರಣಾದರೆ ಅಥವಾ ಬಂಧನಕ್ಕೆ ಒಳಗಾದರೆ ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಗುವುದಿಲ್ಲ. ಹೀಗಾಗಿ ಬೆಂಗಳೂರಿಗೆ ಬಂದೆ. ಹೆಚ್ಚಿನ ಪ್ರಚಾರ ಪಡೆಯುವ ಸಲುವಾಗಿಯೇ ಡಿಜಿ ಕಚೇರಿಗೆ ಬಂದು ಶರಣಾಗಿದ್ದೇನೆ ಎಂದು ಆತ ವಿವರಿಸಿದ್ದಾನೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಬಾಂಬ್': ಪೊಲೀಸ್ ಕಮಿಷನರ್ ಹರ್ಷಗೆ 6 ಪ್ರಶ್ನೆಗಳು..