ಮಂಗಳೂರಿನ ಭರತನಾಟ್ಯ ಕಲಾವಿದೆ ಜಯಲಕ್ಷ್ಮಿ ಆಳ್ವ ನಿಧನ
ಮಂಗಳೂರು, ಜುಲೈ, 23 : ಹಿರಿಯ ಭರತನಾಟ್ಯ ಕಲಾವಿದೆ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತೆ ವಿದುಷಿ ಜಯಲಕ್ಷ್ಮಿ ಆಳ್ವ ಮಂಗಳವಾರ ತಡರಾತ್ರಿ ನಿಧನರಾದರು.
1933ರ ಅಕ್ಟೋಬರ್ 25ರಂದು ತಮಿಳುನಾಡಿನ ಕುಂಭಕೋಣದಲ್ಲಿ ಜನಿಸಿದ ಅವರು 1948ರ ಮಾರ್ಚ್7 ರಂದು ರಂಗಪ್ರವೇಶ ಮಾಡಿದರು. ಬಳಿಕ ಇವರು ಪ್ರದರ್ಶನ ಕಲಾವಿದೆಯಾಗಿ ಭಾರತದ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಭರತನಾಟ್ಯ ಭಂಗಿಗಳ ಮೂಲಕ ಜನರು ಭರತನಾಟ್ಯದ ಕಡೆ ಒಲವು ತೋರುವಂತೆ ಮಾಡಿದ್ದಾರೆ.[ನೃತ್ಯಾಸಕ್ತರಿಗೆ ಆನ್ ಲೈನ್ ಮೂಲಕ ಕ್ಲಾಸ್!]
ಜಯಲಕ್ಮ್ಷಿಅವರ ಮುಂಬಯಿ ನೃತ್ಯ ಪ್ರದರ್ಶನದ ಸಮಯದಲ್ಲಿ ಪರಿಚಯವಾದ ರಾಮಕೃಷ್ಣ ಆಳ್ವ ಅವರ ಅಭಿಲಾಷೆಯಂತೆ ವಿವಾಹವಾಗಿ ಕರಾವಳಿ ನಾಡನ್ನು ಪ್ರವೇಶಿಸಿ ತಮ್ಮ ಪ್ರತಿಭೆಯನ್ನು ಕರಾವಳಿ ಜನತೆಯ ಮೆಚ್ಚುಗೆಗೆ ಪಾತ್ರರಾದರು.
1959 ರಲ್ಲಿ ಚಿತ್ರಾಂಬಲಂ ನೃತ್ಯ ಕೇಮದ್ರವನ್ನು ಮುಂಬಯಿಯಲ್ಲಿ ಪ್ರಾರಂಭಿಸಿದ ಈ ದಂಪತಿ ಅನೇಕ ಶಾಸ್ತ್ರೀಯ ನೃತ್ಯ ಬಂಧಗಳು, ನೃತ್ಯ ರೂಪಕಗಳನ್ನು ನಿರ್ದೇಶಿಸಿ, ಪ್ರದರ್ಶಿಸಿ ಚಿತ್ರರಂಗದ ಶ್ರೇಷ್ಠ ಕಲಾವಿದೆಯರಿಗೆ ನೃತ್ಯ ಗುರುಗಳಾಗಿ ಪ್ರಸಿದ್ದಿ ಪಡೆದರು.[ಸಮಾಜ ಸೇವಕ ಕೆ. ಸದಾನಂದ ನಾಯಕ್ ಇಂದಾಜೆ ನಿಧನ]
1974ರಲ್ಲಿ ಶ್ರೀದೇವಿ ನೃತ್ಯ ಕೇಂದ್ರವನ್ನು ಕರಾವಳಿ ನಾಡಲ್ಲಿ ತೆರೆದ ಇವರು, ಮೃಣಾಲಿನಿ ಸಾರಭಾಯಿಯವರ ದರ್ಪಣ ತಂಡದೊಂದಿಗೆ ರೋಮ್, ಇಟಲಿ, ಸ್ವಿಟ್ಜರ್ ಲ್ಯಾಂಡ್, ಜರ್ಮನಿ, ರಷ್ಯಾ ಮುಮತಾದ ರಾಷ್ಟ್ರಗಳಲ್ಲಿ ನೃತ್ಯ ಪ್ರದರ್ಶನ ಮಾಡಿದರು.
ದೇಶ ವಿದೇಶಗಳಲ್ಲಿ ತಮ್ಮ ಶಿಷ್ಯ ವೃಂದ ಸೃಷ್ಟಿಸಿದ ಇವರು ನಾಟ್ಯರಾಣಿ ಶಂತಲಾ, ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ, ನೃತ್ಯಭಾರತಿ, ನಾಟ್ಯಕಲಾರತ್ನ, ಶ್ರೀರಾಮ ವಿಠಲ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಎಂದಿನಂತೆ ಹಲವಾರು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಜಯಲಕ್ಷ್ಮಿ ಅವರು ತಪಾಸಣೆ ನಿಮಿತ್ತ ಆಸ್ಪತ್ರೆಗೆ ತೆರಳಿದ ಸಮಯದಲ್ಲಿ ಇದ್ದಕ್ಕಿದ್ದಂತೆ ಆಸ್ಪತ್ರಯಲ್ಲಿಯೇ ಕುಸಿದು ಬಿದ್ದರು. ಶೀಘ್ರವೇ ತಪಾಸಣೆ ನಡೆಸಿದ ವೈದ್ಯರು ಮೆದುಳಿನಲ್ಲಿ ರಕ್ತಸ್ರಾವ ಆಗಿರುವುದರಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.