ಇಂದಿನಿಂದ ಮಂಗಳೂರು- ಬೆಂಗಳೂರು ರೈಲು ಸಂಚಾರ ಪುನರಾರಂಭ
ಮಂಗಳೂರು, ಆಗಸ್ಟ್ 26: ಮಂಗಳೂರು- ಬೆಂಗಳೂರು ರೈಲು ಓಡಾಟ ಇಂದಿನಿಂದ ಪುನರಾರಂಭಗೊಂಡಿದೆ. ಸುಬ್ರಹ್ಮಣ್ಯ ರೋಡ್- ಸಕಲೇಶಪುರ ಘಾಟ್ ರೈಲು ಮಾರ್ಗದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಇಂದು ರಾತ್ರಿ ರೈಲು ಪುನರಾರಂಭಗೊಳ್ಳಲಿದೆ.
ಆಗಸ್ಟ್ 11ರ ವರೆಗೆ ಮಂಗಳೂರು- ಬೆಂಗಳೂರು ರೈಲು ಸಂಚಾರ ರದ್ದು
ಸುಬ್ರಹ್ಮಣ್ಯ-ಸಕಲೇಶಪುರದ ನಡುವೆ ಸಿರಿವಾಗಿಲು ಎಂಬಲ್ಲಿ ಭೂಕುಸಿತ ಸಂಭವಿಸಿದ್ದ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವೆ ರೈಲು ಓಡಾಟವನ್ನು ರದ್ದು ಗೊಳಿಸಲಾಗಿತ್ತು. ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಹಳಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದೀಗ ಪೂರ್ಣಗೊಂಡಿದೆ.
ದುರಸ್ತಿಗೊಂಡ ಮಾರ್ಗದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಶನಿವಾರ ಪ್ರಾಯೋಗಿಕ ರೈಲು ಸಂಚಾರ ಹಾಗೂ ಭಾನುವಾರ ರಾತ್ರಿ ಒಂದು ಗೂಡ್ಸ್ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ. ಮೈಸೂರು ವಿಭಾಗ ರೈಲ್ವೆ ಪ್ರಬಂಧಕಿ ಅಪರ್ಣಾ ಗಾರ್ಗ್ ಈ ಪ್ರದೇಶಕ್ಕೆ ಭೇಟಿ ನೀಡಿ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ರೈಲು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಭಾನುವಾರ ಪರಿಶೀಲನೆ ನಡೆಸಿದ ಇಲಾಖೆಯ ಹಿರಿಯ ಅಧಿಕಾರಿಗಳು ರೈಲು ಓಡಾಟ ಪುನರಾರಂಭಿಸಲು ತೀರ್ಮಾಸಿದ್ದಾರೆ.
ಕುಲಶೇಖರ- ಪಡೀಲ್ ನಡುವೆ ಗುಡ್ಡಕುಸಿತದಿಂದ ಸ್ಥಗಿತಗೊಂಡ ಮಂಗಳೂರು- ಮುಂಬೈ ನಡುವಿನ ಕೊಂಕಣ ರೈಲು ಮಾರ್ಗ ದುರಸ್ತಿ ಕೂಡ ಮುಕ್ತಾಯ ಹಂತದಲ್ಲಿದ್ದು, ಇಂದಿನಿಂದ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆ ಇದೆ. ಭಾರೀ ಮಳೆಗೆ ಮಂಗಳೂರು ಹೊರವಲಯದ ಕುಲಶೇಖರ- ಪಡೀಲ್ ನಡುವೆ ಗುಡ್ಡಕುಸಿತದಿಂದ ಕಳೆದ ಎರಡು ದಿನಗಳಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಪಡೀಲಿನಲ್ಲಿ ಭರದಿಂದ ಮಣ್ಣು ತೆರವು ಕಾಮಗಾರಿ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.