ಹಿಂದೂಗಳಿಗೆ ಅಪಮಾನ. ಸಚಿವ ಕಾಗೋಡು ಕ್ಷಮೆಯಾಚನೆಗೆ ಭಜರಂಗದಳ ಆಗ್ರಹ
ಮಂಗಳೂರು, ಸೆಪ್ಟೆಂಬರ್ 26 : ಗೋ ಮಾಂಸ ಮತ್ತು ಹಂದಿ ಮಾಂಸ ಎರಡೂ ಒಂದೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಕಾಗೋಡು ತಿಮ್ಮಪ್ಪ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಸಚಿವರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮಂಗಳೂರು ಭಜರಂಗದಳ ಎಚ್ಚರಿಸಿದೆ.
ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, "ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಗೋವಿನ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಸಚಿವರು ಹಿಂದೂಗಳಿಗೆ ಅವಮಾನ ಮಾಡಿದ್ದಾರೆ" ಎಂದು ಆರೋಪಿಸಿದರು.
"ನಾನು ಗೋಮಾಂಸ ತಿಂದಿದ್ದೇನೆ ಎಲ್ಲರೂ ಗೋಮಾಂಸ ತಿನ್ನಬಹುದು " ಎಂದು ಕರೆ ನೀಡುವ ಸಚಿವರು ತಾಕತ್ತಿದ್ದರೆ ಹಂದಿ ಮಾಂಸವನ್ನೂ ಎಲ್ಲರೂ ತಿನ್ನಬೇಕು ಎನ್ನುವ ಕರೆಯನ್ನೂ ನೀಡಲಿ ಎಂದು ಸವಾಲೆಸಿದರು.
ಸಚಿವ ಕಾಗೋಡು ತಿಮ್ಮಪ್ಪನವರು ಕೂಡಲೇ ತಮ್ಮ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಬೇಕು. ಇಲ್ಲದೇ ಹೋದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಮುಂದೆ ಬರುವ ದೀಪಾವಳಿಯು ಗೋ ಮಾತೆಯ ದೀಪಾವಳಿಯಂತೆ ಆಚರಿಸುವ ಅಗತ್ಯವಿದೆ ಎಂದ ಅವರು ಪ್ರತಿಯೊಬ್ಬ ಹಿಂದುಗಳು ತಮ್ಮ ಗ್ರಾಮಗಳಲ್ಲಿ ದೀಪಾವಳಿಯ ದಿನ ಗೋ ಪೂಜೆಯನ್ನು ನೆರವೇರಿಸುವಂತೆ ಸಂದರ್ಭದಲ್ಲಿ ಅವರು ಕರೆ ನೀಡಿದರು.