ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದಲ್ಲಿ ಮಂಗಳೂರು ಮೂಲದ ಮಹಿಳೆ ಸಾವು
ಮಂಗಳೂರು, ಏಪ್ರಿಲ್ 21:ಶ್ರೀಲಂಕಾದ ಕೊಲಂಬೋದಲ್ಲಿ ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದ ಕ್ರೈಸ್ತರ ಮೇಲೆ ಇಂದು ಭಾನುವಾರ ಬಾಂಬ್ ದಾಳಿ ನಡೆಸಲಾಗಿದೆ. ಇಲ್ಲಿನ ಚರ್ಚ್, ಹೋಟೆಲ್ ಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿದೆ.ಈ ಘಟನೆಯಲ್ಲಿ ಕನಿಷ್ಟ 150 ಮಂದಿ ಸಾವನ್ನಪ್ಪಿದ್ದರೆ, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಮಂಗಳೂರಿಗೂ ಒಂದು ಆಘಾತ ಸುದ್ದಿ ಎದುರಾಗಿದೆ. ಹೌದು, ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಮಂಗಳೂರು ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಬೈಕಂಪಾಡಿ ಮೂಲದ ಕುಕ್ಕಾಡಿ ಮನೆತನದ ಅಬ್ದುಲ್ ಖಾದರ್ ಕುಕ್ಕಾಡಿ ಅವರ ಪತ್ನಿ ರಝೀನಾ ಖಾದರ್ ಕುಕ್ಕಾಡಿ(58) ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.
ಶ್ರೀಲಂಕಾದಲ್ಲಿ ಇಲ್ಲಿ ತನಕ ಸಂಭವಿಸಿದ ಭೀಕರ ಸ್ಫೋಟಗಳು
ಕೊಲಂಬೋದಲ್ಲಿ ರಝೀನಾ ಖಾದರ್ ಕುಕ್ಕಾಡಿ ಅವರ ಬಂಧುಗಳು ನೆಲೆಸಿದ್ದು, ಅವರನ್ನು ಭೇಟಿಯಾಗಲು ರಝೀನಾ ಖಾದರ್ ಕುಕ್ಕಾಡಿ ತೆರಳಿದ್ದರು. ಅಲ್ಲಿನ ಶಾಂಗ್ರಿಲಾ ಹೊಟೇಲ್ ನಲ್ಲಿ ರಝೀನಾ ಉಳಿದುಕೊಂಡಿದ್ದರು. ಆದರೆ ಅವರ ಪತಿ ದುಬೈಗೆಂದು ವಿಮಾನದಲ್ಲಿ ಹೊರಟಿದ್ದರು.
ಈ ವೇಳೆ ಶಾಂಗ್ರಿಲಾ ಹೊಟೇಲ್ ನಲ್ಲಿ ನಡೆದ ಸ್ಫೋಟದಲ್ಲಿ ರಝೀನಾ ಸಾವನ್ನಪ್ಪಿದ್ದಾರೆ. ಮೂಲತಃ ಕುಕ್ಕಾಡಿ ಕುಟುಂಬ ಬೈಕಂಪಾಡಿಯಲ್ಲಿದ್ದರೂ ಈಗ ದುಬೈನಲ್ಲಿ ನೆಲೆಸಿದ್ದಾರೆ. ಅವರಿಗೆ ಸುರತ್ಕಲ್ ನಲ್ಲಿ ಮನೆ ಇದೆಯಾದರೂ ಅಲ್ಲಿ ಯಾರೂ ಇಲ್ಲ. ವರ್ಷಕ್ಕೊಮ್ಮೆ ಬಂದು ಹೋಗುತ್ತಾರೆ ಎನ್ನುತ್ತಾರೆ ಸ್ಥಳೀಯರು.
ಈಸ್ಟರ್ ದಿನ ದುರಂತ: ಶ್ರೀಲಂಕಾದ ಚರ್ಚ್ ಸ್ಫೋಟ, ಕನಿಷ್ಠ 160 ಸಾವು, 500 ಮಂದಿಗೆ ಗಾಯ
ಕುಕ್ಕಾಡಿ ಕುಟುಂಬ ಕೋಮು ಸೌಹಾರ್ದಕ್ಕೆ ಹೆಸರು ವಾಸಿಯಾಗಿದ್ದು, ಸ್ಥಳೀಯರೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದ ಮನೆತನ ಇದಾಗಿದೆ ಎಂದು ಹೇಳಲಾಗುತ್ತಿದೆ.