ಮಂಗಳೂರಿನ ತ್ರಿವಳಿ ಹತ್ಯೆ: ಇದುವರೆಗೆ ಬಂಧಿತರಾದವರು ಎಷ್ಟು ಜನ- ಪ್ರವೀಣ್ ಸೂದ್ ಕೊಟ್ಟ ಮಾಹಿತಿ
ಮಂಗಳೂರು, ಆಗಸ್ಟ್, 01: ದಕ್ಷಿಣ ಕನ್ನಡದಲ್ಲಿ ನಡೆದ ಹತ್ಯೆಗಳ ಬಗ್ಗೆ ಡಿಜಿ ಪ್ರವೀಣ್ ಸೂದ್ ಮಂಗಳೂರಿಗೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆಯ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ 10 ದಿನಗಳ ಅಂತರದಲ್ಲಿ ನಡೆದ ತ್ರಿವಳಿ ಕೊಳೆಗಳ ಸಂಬಂಧ ಇದುವರೆಗೆ ಎಷ್ಟು ಜನರ ಬಂಧನ ಆಗಿದೆ ಎಂಬ ವಿವರವನ್ನೂ ನೀಡಿದರು.
ಯಾವುದೇ ಪ್ರಕರಣಗಳಿರಲಿ ಅದನ್ನು ನೋಡಿರುವ, ಮಾಹಿತಿಯಿದ್ದ ನಾಗರಿಕರು ಇದ್ದೇ ಇರುತ್ತಾರೆ. ಅಂಥವರು ಮುಂದೆ ಬಂದು ಪೊಲೀಸ್ ಗೆ ಮಾಹಿತಿ ನೀಡಿದರೆ ಪ್ರಕರಣ ಬೇಧಿಸಲು ಸುಲಭವಾಗುತ್ತದೆ. ಮಾಹಿತಿ ನೀಡದಿದ್ದಲ್ಲಿ ಅವರೂ ಇದರಲ್ಲಿ ಭಾಗೀದಾರರೆಂದು ನಾವು ತಿಳಿಯಬೇಕಾಗುತ್ತದೆ ಎಂದು ಡಿಜಿ ಪ್ರವೀಣ್ ಸೂದ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, "ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಷ್ಟೇ ನಾಗರಿಕರ ಜವಾಬ್ದಾರಿಯೂ ಇದೆ. ಆದ್ದರಿಂದ ಎಲ್ಲಾ ಸಮುದಾಯಗಳ, ಸಂಘಟನೆಗಳ ಮುಖಂಡರು ಪೊಲೀಸರೊಂದಿಗೆ ಕೈಜೋಡಿಸಿದ್ದಲ್ಲಿ ಎಲ್ಲಾ ಪ್ರಕರಣಗಳನ್ನು ಸುಲಭವಾಗಿ ಬೇಧಿಸಲುಸಾಧ್ಯ ಎಂದು ಹೇಳಿದರು.
ಎಂಟು ಮಂದಿ ಬಂಧನ:
ದ.ಕ.ಜಿಲ್ಲೆಯಲ್ಲಿ ನಡೆದಿರುವ ಮೂರು ಕೊಲೆ ಪ್ರಕರಣಗಳಲ್ಲಿ ಮಸೂದ್ ಹಂತಕರಲ್ಲಿ ಎಂಟು ಮಂದಿಯ ಬಂಧನ ಆಗಿದೆ. ಪ್ರವೀಣ್ ಹಂತಕರಿಬ್ಬರ ಅರೆಸ್ಟ್ ಆಗಿದ್ದು, ತನಿಖೆ ಮುಂದಿವರಿದಿದೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ಫಾಝಿಲ್ ಹತ್ಯೆ ಪ್ರಕರಣದಲ್ಲೂ ಈಗಾಗಲೇ ಹಂತಕರು ಬಳಸಿರುವ ಕಾರು ಪತ್ತೆಯಾಗಿದ್ದು, ಕಾರು ಮಾಲಕನನ್ನೂ ವಶಪಡಿಸಿಕೊಳ್ಳಲಾಗಿದೆ. ಆತನ ಮೂಲಕ ಉಳಿದ ಆರೋಪಿಗಳನ್ನೂ ಬಂಧಿಸಲಾಗುತ್ತದೆ. ಸದ್ಯದಲ್ಲೇ ಮೂರೂ ಪ್ರಕರಣವನ್ನು ಬೇಧಿಸಲಾಗುತ್ತದೆ ಎಂದು ಪ್ರವೀಣ್ ಸೂದ್ ಹೇಳಿದರು.
ಐಜಿ, ದ.ಕ.ಜಿಲ್ಲಾ ಎಸ್ಪಿ, ಮಂಗಳೂರು ಪೊಲೀಸ್ ಕಮಿಷನರ್, ಡಿಸಿಯರೊಂದಿಗೆ ಚರ್ಚಿಸಿ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಸವಿವರವಾಗಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಗಡಿ ಪ್ರದೇಶದಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗುತ್ತದೆ. ಅದರೊಂದಿಗೆ ದ.ಕ.ಜಿಲ್ಲೆಯಲ್ಲಿ ಪೊಲೀಸ್ ಬಲ ಕಡಿಮೆಯಿದ್ದು, ಅದನ್ನು ಹೆಚ್ಚು ಮಾಡಲು ಸಿಎಂ ಜೊತೆಗೆ ಮಾತನಾಡಿದ್ದೇನೆ ಎಂದು ಹೇಳಿದರು.
ದ.ಕ.ಜಿಲ್ಲೆಯಲ್ಲಿ ನಡೆದಿರುವ ಮೂರು ಪ್ರಕರಣಗಳಲ್ಲೂ ಹಂತಕರನ್ನು ಬಂಧಿಸಲಾಗುತ್ತದೆ. ಇದರಲ್ಲಿ ಯಾವುದೇ ಸಂಘಟನೆ, ವ್ಯಕ್ತಿ, ಸಿದ್ಧಾಂತ ಭಾಗಿಯಾಗಿದ್ದರೂ ಯಾರನ್ನೂ ಬಿಡುವುದಿಲ್ಲ, ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.
ಹತ್ಯೆಯಾದವರು ಯಾವ ಧರ್ಮದವರಾಗಿರಲಿ ಪೊಲೀಸ್ ತನಿಖೆ ಒಂದೇ ರೀತಿ ನಡೆಯುತ್ತದೆ. ದ.ಕ.ಜಿಲ್ಲೆಯ ಸರಣಿ ಹತ್ಯೆಯ ತನಿಖೆ ಸಂಪೂರ್ಣವಾದ ಬಳಿಕ ಆರೋಪಿಗಳು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆಯೇ ಎಂಬುದನ್ನು ಚಾರ್ಜ್ ಶೀಟ್ ನಲ್ಲಿ ತಿಳಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಡಿಜಿ ಪ್ರವೀಣ್ ಸೂದ್ ಹೇಳಿದರು.
ಕೆಲವೊಂದು ಸೂಕ್ಷ್ಮ ಪ್ರಕರಣಗಳಲ್ಲಿ ಅದೇ ವ್ಯಾಪ್ತಿಯ ಠಾಣಾ ಪೊಲೀಸರು ತನಿಖೆ ನಡೆಸಬೇಕೆಂದೇನಿಲ್ಲ. ಕಾನ್ ಸ್ಟೇಬಲ್ ನಿಂದ ಹಿಡಿದು, ಎಜಿಡಿಪಿ ತನಕ ಪ್ರಕರಣ ಬೇಧಿಸುವಲ್ಲಿ ಎಲ್ಲರ ಪಾತ್ರವಿರುತ್ತದೆ ಎಂದು ಅವರು ಹೇಳಿದರು.
ಕೃತ್ಯ ನಡೆಸೋದು ಸುಲಭ. ಪ್ರಕರಣ ಬೇಧಿಸೋದು ಅಷ್ಟೊಂದು ಸುಲಭದ ಕಾರ್ಯವಲ್ಲ. ತನಿಖೆ ಸರಿಯಾಗಿ ನಡೆಸಿದ್ದಲ್ಲಿ ಯಾವುದೂ ಕಷ್ಟವಲ್ಲ. ಕಾನೂನು ರೀತ್ಯ ತನಿಖೆ ನಡೆಸಿ ಸಾಕ್ಷಿಯೊಂದಿಗೆ ಪ್ರಕರಣವನ್ನು ಬೇಧಿಸುತ್ತೇವೆ. ಪ್ರತಿಯೊಂದು ಪ್ರಕರಣಗಳೂ ಭಿನ್ನವಾಗಿರುತ್ತದೆ. ಆದರೆ ದ.ಕ.ಜಿಲ್ಲೆಯ ಮೂರೂ ಹತ್ಯೆ ಪ್ರಕರಣವನ್ನು ಸರಿಯಾಗಿ ತನಿಖೆ ನಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಲಾಗುತ್ತದೆ ಎಂದು ಪ್ರವೀಣ್ ಸೂದ್ ಹೇಳಿದರು.