ಮಂಗಳೂರು: ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ವಕೀಲರ ಆಗ್ರಹ
ಮಂಗಳೂರು, ಅಕ್ಟೋಬರ್, 14 : ನಗರದಲ್ಲಿ ರಾಜ್ಯ ಹೈಕೋರ್ಟ್ನ ಸಂಚಾರಿ ಪೀಠವನ್ನು ಸ್ಥಾಪಿಸುವಂತೆ ಸರಕಾರಕ್ಕೆ ಮಂಗಳೂರು ಜಿಲ್ಲಾ ವಕೀಲರ ಸಂಘ ಆಗ್ರಹಿಸಿದೆ.
ಈ ಕುರಿತು (ಅಕ್ಟೋಬರ್ 13) ಗುರುವಾರ ಮಂಗಳೂರು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಸ್.ಪಿ ಚೆಂಗಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೋರಾಟದ ಫಲವಾಗಿ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ಸಂಚಾರಿ ನ್ಯಾಯಪೀಠ ಸ್ಥಾಪನೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಇಷ್ಟು ಹೊತ್ತಿಗಾಗಲೇ ಸ್ಥಾಪನೆಯಾಗಬೇಕಿತ್ತು. ತಡವಾಗಿದ್ದರೂ ಬಡವರಿಗೆ ನ್ಯಾಯ ವ್ಯವಸ್ಥೆ ಕೈಗೆಟುಕುವ ಉದ್ದೇಶದಿಂದ ಇದೀಗ ಹೋರಾಟ ಆರಂಭಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಸಂಚಾರಿ ಪೀಠ ಸ್ಥಾಪಿಸುವಂತೆ ಸರಕಾರದ ಮೇಲೆ ಒತ್ತಡ ತರಲು ಮಂಗಳೂರು ವಕೀಲರ ಸಂಘವು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಹಾಗೂ ಚಿಕ್ಕಮಂಗಳೂರು ಜಿಲ್ಲೆಗಳ ವಕೀಲರ ಸಂಘಗಳ ಜತೆ ಸಂಪರ್ಕಿಸಿದೆ.
ಅವರ ಬೆಂಬಲದೊಂದಿಗೆ ಮುಂದಿನ ವಾರದಲ್ಲೇ ಹೋರಾಟ ಸಮಿತಿ ರಚನೆ ಮಾಡಿ, ಹೋರಾಟದ ರೂಪುರೇಷ ತಯಾರಿಸಲಾಗುವುದು. ಇನ್ನು ಈ ಹೋರಾಟಕ್ಕೆ ಜಿಲ್ಲೆಯ ವಿವಿಧ ಸಂಘಟನೆಗಳು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.