ಮಂಗಳೂರು, ಉಡುಪಿಗೆ ಹೊಸ ಕೆಎಸ್ಆರ್ ಟಿಸಿ ಬಸ್
ಮಂಗಳೂರು, ಜೂನ್ 2 : ನರ್ಮ್ ಯೋಜನೆಯಡಿ ಮಂಗಳೂರಿಗೆ 35 ಮತ್ತು ಉಡುಪಿ ಜಿಲ್ಲೆಗೆ 30 ಕೆಎಸ್ಆರ್ ಟಿಸಿ ಬಸ್ಸುಗಳು ದೊರಕಿವೆ. ಸಾರಿಗೆ ಸಂಪರ್ಕದ ಕೊರತೆ ಎದುರಿಸುತ್ತಿರುವ ಜಿಲ್ಲೆಯ ವಿವಿಧ ಸ್ಥಳಗಳಿಗೆ ಈ ಬಸ್ಸುಗಳು ಸೆಪ್ಟೆಂಬರ್ ನಿಂದ ಸಂಚರಿಸಲಿವೆ.
ಮಂಗಳೂರಿನಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಈ ಬಗ್ಗೆ ಮಾಹಿತಿ ನೀಡಿದ್ದು, ಜವಾಹರ್ ಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆ (ನರ್ಮ್) ಅಡಿ ಮಂಗಳೂರಿಗೆ 35 ಮತ್ತು ಉಡುಪಿ ಜಿಲ್ಲೆಗೆ 30 ಕೆಎಸ್ಆರ್ ಟಿಸಿ ಬಸ್ಸುಗಳನ್ನು ಖರೀದಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸಾರಿಗೆ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ಬಸ್ಸುಗಳ ಕೊರತೆ ಇರುವ ಮಾರ್ಗದ ಬಗ್ಗೆ ವರದಿ ತಯಾರಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಸೆಪ್ಟೆಂಬರ್ ತಿಂಗಳಿನಿಂದ ಹೊಸ ಬಸ್ಸುಗಳ ಸಂಚಾರ ಆರಂಭವಾಗಲಿದೆ ಎಂದು ರಮಾನಾಥ ರೈ ತಿಳಿಸಿದರು.
ನೂತನ ಬಸ್ಸುಗಳ ಸಂಚಾರಕ್ಕೆ ಕೆಎಸ್ಆರ್ ಟಿಸಿ 13 ನೂತನ ಮಾರ್ಗಗಳನ್ನು ಗುರುತಿಸಿದೆ. ಇವುಗಳಲ್ಲಿ ಐದು ಮಾರ್ಗಗಳಲ್ಲಿ ಬಸ್ಸುಗಳ ಸಂಚಾರ ಆರಂಭಿಸಲು ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಸರ್ಕಲ್ ನಿಂದ ಕಾಟಿಪಾಳ್ಯ, ಕೃಷ್ಣಾಪುರ, ತಪಲಾಡಿ, ಉಳ್ಳಾಲ, ಶಕ್ತಿನಗರ ಮುಂತಾದ ಸ್ಥಳಗಳಿಗೆ ಬಸ್ಸುಗಳನ್ನು ಓಡಿಸಲು ಕೆಎಸ್ಆರ್ ಟಿಸಿ ತೀರ್ಮಾನಿಸಿದೆ.
ನರ್ಮ್ ಯೋಜನೆಯಡಿ ನೀಡಲಾಗುವ ಬಸ್ಸುಗಳು ನಗರ ಪ್ರದೇಶದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಮಾತ್ರ ಸಂಚರಿಸಬಹುದಾಗಿದೆ. ಅದರಲ್ಲೂ ಸಾರಿಗೆ ಸೌಲಭ್ಯದ ಕೊರತೆ ಇರುವ ಮಾರ್ಗಗಳಲ್ಲಿ ಈ ಬಸ್ಸುಗಳನ್ನು ಓಡಿಸಲು ಅನುಮತಿ ಇದೆ.