ಕ್ರಿಕೆಟ್ ಆಟದಲ್ಲೂ ಧರ್ಮ ಎಳೆದು ತಂದ ಕೀಚಕ; ಕ್ರೈಸ್ತ ಯುವಕ ಮೈದಾನದಿಂದಲೇ ಔಟ್
ಮಂಗಳೂರು, ಜುಲೈ 14: ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕ್ರಿಕೆಟ್ ಆಟವಾಡಿದ ಎಂಬ ಒಂದೇ ಕಾರಣಕ್ಕಾಗಿ, ಒಂದು ಕೋಮಿನ ಯುವಕನನ್ನು ವ್ಯಕ್ತಿಯೋರ್ವ ಮೈದಾನದಿಂದ ಹೊರಗೆ ಕಳುಹಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಯನಗರ ಎಂಬಲ್ಲಿ ನಡೆದಿದೆ.
ಜಯನಗರದ ಕೊರಗಜ್ಜ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದದಲ್ಲಿ ಸ್ಥಳೀಯ ಯುವಕ ಲೋಕೇಶ್ ಮತ್ತು ಆತನ ಕ್ರೈಸ್ತ ಗೆಳೆಯ ಸೇರಿದಂತೆ ಇತರರು ಕ್ರಿಕೆಟ್ ಆಡುತ್ತಿದ್ದರು. ಆಟದ ತಂಡದಲ್ಲಿ ಕ್ರೈಸ್ತ ಯುವಕ ಇದ್ದ ಒಂದೇ ಕಾರಣಕ್ಕೆ ಸ್ಥಳೀಯ ವ್ಯಕ್ತಿ ಪ್ರವೀಣ್ ಎಂಬಾತ ಆಟವನ್ನು ತಡೆದಿದ್ದಾನೆ. ಹಿಂದೂವಲ್ಲದವನು ಆಟ ಆಡಬಾರದು ಎಂದು ತಾಕೀತು ಮಾಡಿದ್ದಾನೆ.
ಮಸೀದಿ, ಚರ್ಚ್ಗಳ ಪ್ರದೇಶಗಳಲ್ಲಿ ಹಿಂದೂಗಳು ಆಡಿದರೆ, ಅವರು ಬಿಡುವುದಿಲ್ಲ. ಹಾಗಾಗಿ ಹಿಂದೂ ಜಾಗದಲ್ಲಿ ಕ್ರೈಸ್ತ ಕೂಡಾ ಆಡಬಾರದು ಎಂದು ಗದರಿಸಿದ್ದಾನೆ. ಇದಕ್ಕೆ ಜೊತೆಗಿದ್ದ ಆಟಗಾರರು ಕ್ರೈಸ್ತ ಯುವಕನ ಪರ ನಿಂತು ಆಟದಲ್ಲಿ ಧರ್ಮ ಯಾವುದಯ್ಯಾ ಅಂತಾ ಜೊತೆಗೆ ನಿಂತಿದ್ದಾರೆ.
ಈ ವೇಳೆ ಕ್ರೈಸ್ತ ಯುವಕ ತಾನು ಆಡಿರುವ ಬಗ್ಗೆ ಸಮರ್ಥನೆ ನೀಡಲು ಬಂದಾಗ ಪ್ರವೀಣ್, ಕ್ರೈಸ್ತ ಯುವಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾನೆ ಮತ್ತು ಬಲವಂತವಾಗಿ ಮೈದಾನದಿಂದ ಹೊರಗೆ ಕಳುಹಿಸಿದ್ದಾನೆ.
ನಾನು ಶಾಸಕರ ಜೊತೆ ಮಾತನಾಡಿಯೇ ಹೊರಗೆ ಕಳುಹಿಸುತ್ತಿದ್ದೇನೆ ಎಂದೂ ಈ ಸಂದರ್ಭದಲ್ಲಿ ಪ್ರವೀಣ್ ಹೇಳಿದ್ದಾನೆ. ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಆಟದಲ್ಲೂ ಧರ್ಮವನ್ನು ಎಳೆದು ತಂದು, ಅವಮಾನ ಮಾಡಿದ ಪ್ರವೀಣ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.