15ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಮಲ್ಲಿಕಾ ಎಸ್. ಘಂಟಿ ಆಯ್ಕೆ
ಮಂಗಳೂರು, ಸೆಪ್ಟೆಂಬರ್.20 : ನಾಡು-ನುಡಿ-ಸಂಸ್ಕೃತಿಯ ಸಮ್ಮೇಳನ 15 ನೇ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರಾಗಿ ಖ್ಯಾತ ಹಿರಿಯ ಸಾಹಿತಿ ಡಾ.ಮಲ್ಲಿಕಾ ಎಸ್ ಘಂಟಿ ಮತ್ತು ಉದ್ಘಾಟಕರಾಗಿ ಡಾ.ಷ.ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ .
ಈ ಬಾರಿ ಸಮ್ಮೇಳನ ಇದೇ ಬರುವ ನವೆಂಬರ್ 16 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, 'ಕರ್ನಾಟಕದರ್ಶನ- ಬಹುರೂಪಿ ಆಯಾಮಗಳು' ಎಂಬ ಪರಿಕಲ್ಪನೆಯಡಿ ಸಂಘಟಿಸಲಾಗಿದೆ.
ನವೆಂಬರ್ 16 ರಂದು ಮೂಡಬಿದ್ರೆಯಲ್ಲಿ 15 ನೇ ಆಳ್ವಾಸ್ ನುಡಿಸಿರಿ
ಮಲ್ಲಿಕಾ ಎಸ್ ಘಂಟಿ ಹುಟ್ಟೂರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಅಗಸಬಾಳು. ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ'ವೆಂಬ ವಿಷಯಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಗುಲ್ಬರ್ಗಾ ವಿಶ್ವವಿದ್ಯಾನಿಲಯ, ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಗಳಲ್ಲಿ ಪ್ರಾಧ್ಯಾಪಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ಇವರು ಡೀನ್ ಆಗಿ, ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ಆಡಳಿತಾನುಭವವನ್ನು ಪಡೆದುಕೊಂಡವರು.
ಕನ್ನಡ ವಿಶ್ವವಿದ್ಯಾನಿಲಯ, ಹಂಪಿಯ ಕುಲಪತಿಗಳಾಗಿ 2015ರಲ್ಲಿ ಅಧಿಕಾರವಹಿಸಿಕೊಂಡ ಇವರು ಈಗ ಎರಡನೆಯ ಅವಧಿಗೆ ಕುಲಪತಿಗಳಾಗಿ ಮುಂದುವರಿದಿದ್ದಾರೆ. ಪ್ರಾಧ್ಯಾಪಕಿ, ಸಾಹಿತಿ, ವಿಮರ್ಶಕಿ, ಸಂಶೋಧಕಿ, ಸಂಪಾದಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
'ರಾಷ್ಟ್ರಗೀತೆ ಹಾಡುವವನು ದೇಶಪ್ರೇಮಿ, ಹಾಡದವನು ದೇಶದ್ರೋಹಿ ಎನ್ನುವುದು ಸರಿಯಲ್ಲ'
ಇವರ ಸಾಧನೆಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿನಿಧಿ ಪ್ರಶಸ್ತಿ, ಸುಧಾಮೂರ್ತಿ ಪ್ರಶಸ್ತಿ,ಕಾವ್ಯಾನಂದ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿಯೇ ಮೊದಲಾದ ಪ್ರಶಸ್ತಿಗಳು ಸಂದಿವೆ.
ಸಮ್ಮೇಳನಕ್ಕೆ ಚಾಲನೆ ನೀಡಲಿರುವ ಹಿರಿಯ ಸಾಹಿತಿ ಡಾ.ಷ ಶೆಟ್ಟರ್ ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಹಂಪಸಾಗರದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಐದು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಮತ್ತು ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಭಾರತೀಯ ಪುರಾತತ್ತ್ವ, ಕಲೆ-ಇತಿಹಾಸ, ಸಮುದಾಯಗಳ ಇತಿಹಾಸ, ತತ್ತ್ವಶಾಸ್ತ್ರ ಮತ್ತು ಶಾಸ್ತ್ರೀಯ ಭಾಷೆಗಳ ಸಾಹಿತ್ಯದಲ್ಲಿ ಕಳೆದ ನಾಲ್ಕು ದಶಕಗಳಿಂದ ಅಧ್ಯಯನ ನಿರತರಾಗಿದ್ದಾರೆ.
15 ಮಂದಿ ಸಾಧಕರಿಗೆ 2017ರ 'ಆಳ್ವಾಸ್ ನುಡಿಸಿರಿ' ಪುರಸ್ಕಾರ
ಇತಿಹಾಸ ಮತ್ತು ಸಾಹಿತ್ಯಗಳಲ್ಲಿ ಸಮಾನ ಆಸಕ್ತಿಯನ್ನು ಹೊಂದಿರುವ ಶೆಟ್ಟರ್ ಚರಿತ್ರೆ ಮತ್ತು ಸಾಹಿತ್ಯ ಚರಿತ್ರೆಗಳನ್ನು ಮುರಿದು ಕಟ್ಟುವ ಕೆಲಸದಲ್ಲಿ ಅವಿಶ್ರಾಂತರಾಗಿ ದುಡಿಯುತ್ತಿದ್ದಾರೆ.