ಮಳಲಿ ಮಸೀದಿ ವಿಚಾರ: ಜಿಲ್ಲಾಧಿಕಾರಿ ವಿರುದ್ಧ ಯು. ಟಿ. ಖಾದರ್ ಅಸಮಾಧಾನ
ಮಂಗಳೂರು, ಮೇ17: ಮಂಗಳೂರು ನಗರದ ಹೊರವಲಯದ ಗಂಜಿಮಠದದಲ್ಲಿರುವ ದರ್ಗಾವೊಂದನ್ನು ನವೀಕರಣಕ್ಕಾಗಿ ಕೆಡವಿದಾಗ ದರ್ಗಾದೊಳಗೆ ಹಿಂದೂ ದೇವಾಲಯದ ಶೈಲಿಯ ಕೆತ್ತನೆಗಳು ಪತ್ತೆಯಾದ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ಇಲ್ಲಿರುವುದು ಹಿಂದೂ ದೇವಾಲಯವೇ?, ದರ್ಗಾವೇ? ಅಥವಾ ಬಸದಿಯೇ? ಎಂಬ ಬಗ್ಗೆ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಈಗ ಅಷ್ಟಮಂಗಲ ಪ್ರಶ್ನೆ ಹಾಕಲು ಚಿಂತನೆ ನಡೆಸಿವೆ. ಈ ವಿಚಾರವಾಗಿ ಮಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ಉಪನಾಯಕ ಯು. ಟಿ. ಖಾದರ್ ಪ್ರತಿಕ್ರಿಯೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಮಳಲಿ ಮಸೀದಿ ಬಗ್ಗೆ ಹಲವರಿಗೆ ಸಂಶಯ ಇದೆ. ದಾಖಲೆಗಳೆಲ್ಲಾ ಜಿಲ್ಲಾಧಿಕಾರಿ ಬಳಿ ಇದೆ. ಮಳಲಿ ಮಸೀದಿಗೆ ಐನೂರು ವರ್ಷಗಳ ಇತಿಹಾಸ ಇದೆ. ಹಳೇ ಕಾಲದ ಮಸೀದಿ ಕೆತ್ತನೆ ಹಿಂದೂ ಶೈಲಿಯಲ್ಲೇ ಇದೆ. ಇದು ಮಸೀದಿ ಅಂತಾ ಊರಿನ ಎಲ್ಲಾ ಜನರಿಗೆ ಗೊತ್ತಿದೆ. ಆದರೆ ಹೊರಗಿನವರಿಗೆ ಈ ಬಗ್ಗೆ ಸಂಶಯ ಇದೆ. ಹೀಗಾಗಿ ಇದರ ಬಗ್ಗೆ ಕೆಲವರು ಜಿಲ್ಲಾಧಿಕಾರಿಗೆ ಅರ್ಜಿ ನೀಡಿದ್ದಾರೆ. ಅವರು ಮೊದಲು ದಾಖಲೆ ನೋಡಿ ತೀರ್ಪು ಕೊಡಬೇಕು" ಎಂದರು.
ಜಿಲ್ಲಾಧಿಕಾರಿ ಕಾರ್ಯಪ್ರವೃತರಾಗಬೇಕು; "ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಈ ಬಗ್ಗೆ ಕಾರ್ಯಪ್ರವೃತರಾಗಬೇಕು. ಡಿಸಿ ಆದೇಶದಲ್ಲಿ ಅಸಮಾಧಾನ ಇದ್ದವರು ಕೋರ್ಟ್ಗೆ ಹೋಗುತ್ತಾರೆ. ಮನೆಯಡಿಯಲ್ಲಿ ಶವ ಸಿಕ್ಕಿದರೆ ಆ ಮನೆ ಶವವಾದವನಾ ಪಾಲಾಗುತ್ತದಾ?. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಯಾಕೆ ತಡ ಮಾಡುತ್ತಾರೆ ಗೊತ್ತಾಗುತ್ತಿಲ್ಲ. ಜಿಲ್ಲಾಧಿಕಾರಿಗೆ ಈ ಬಗ್ಗೆ ಒತ್ತಡ ಇರಬಹುದು. ಜಿಲ್ಲಾಧಿಕಾರಿ ತಕ್ಷಣ ಆದೇಶ ಮಾಡಬೇಕು" ಎಂದು ಆಗ್ರಹಿಸಿದರು.
ಜನರ ಮಧ್ಯೆ ಗೊಂದಲ ಸೃಷ್ಠಿ; "ಜಿಲ್ಲಾ ಪರಿಸ್ಥಿತಿ ನಿಭಾಯಿಸಲು ಡಿಸಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಲಾಗಿದೆ. ಡಿಸಿ ಆದೇಶ ನೀಡಲಿ, ತೀರ್ಮಾನ ತೆಗೆದುಕೊಳ್ಳುವವರು ತೆಗೆದುಕೊಳ್ಳಲಿ. ಜಿಲ್ಲಾಧಿಕಾರಿ ಜನರ ಮಧ್ಯೆ ಯಾಕೆ ಗೊಂದಲ ಸೃಷ್ಠಿಸಬೇಕು?" ಎಂದು ಯು. ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.
ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ದರ್ಗಾದೊಳಗೆ ನವೀಕರಣ ಕಾಮಗಾರಿ ವೇಳೆ ಹಿಂದೂ ಶೈಲಿಯ ಕೆತ್ತನೆ ಪತ್ತೆಯಾಗಿತ್ತು. ತಕ್ಷಣ ಮಧ್ಯ ಪ್ರವೇಶಿಸಿರುವ ದ.ಕ.ಜಿಲ್ಲಾಡಳಿತವು ಮಂಗಳೂರು ತಹಸೀಲ್ದಾರ್ ರವರ ಮೂಲಕ ದರ್ಗಾ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿತ್ತು. ಆ ಬಳಿಕ ಕೋರ್ಟ್ ನಿಂದಲೂ ದರ್ಗಾ ನವೀಕರಣ ಕಾಮಗಾರಿಗೆ ತಡೆಯಾಜ್ಞೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈಗಲೂ ದರ್ಗಾದ ಕಾಮಗಾರಿ ಸ್ಥಗಿತಗೊಂಡಿದ್ದು, ದರ್ಗಾ ಇರುವ ಪ್ರದೇಶದ ಮೂಲ ಭೂ ದಾಖಲೆಗಳನ್ನು ಪರಿಶೀಲನೆ ನಡೆಸುವ ಕಾರ್ಯ ನಡೆಯುತ್ತಿದೆ.
ಅಷ್ಟಮಂಗಲ ಪ್ರಶ್ನೆ; ಈ ನಡುವೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಈ ವಿಚಾರದಲ್ಲಿ ಪ್ರವೇಶ ಮಾಡಿವೆ. ದರ್ಗಾ ಇರುವ ಜಾಗದಲ್ಲಿ ಈ ಹಿಂದೆ ದೇವಾಲಯವಿತ್ತು ಎಂಬ ವಾದವಿತ್ತು. ಅಲ್ಲದೆ ಪುರಾತತ್ತ್ವ ಇಲಾಖೆಯ ಮುಖಾಂತರ ಶೋಧ ಕಾರ್ಯ ನಡೆಸಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿತ್ತು. ಇದೀಗ ದರ್ಗಾದ ಭೂವಿವರಗಳನ್ನು ತಿಳಿಯಲು ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಲು ವಿಎಚ್ಪಿ, ಬಜರಂಗದಳ ನಿರ್ಧಾರ ಕೈಗೊಂಡಿದೆ. ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಈ ಮೂಲಕ ಅಲ್ಲಿರೋದು ದರ್ಗಾವೇ ಅಥವಾ ದೇವಾಲಯವೇ ಎಂಬುದಕ್ಕೆ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆಯಿದೆ.