ಫೆ.19ರಿಂದ ಕುದ್ರೋಳಿ ಶಿವರಾತ್ರಿ ಜಾತ್ರೆ ಆರಂಭ
ಮಂಗಳೂರು: ದಕ್ಷಿಣ ಕನ್ನಡ ಪವಿತ್ರ ಪುಣ್ಯಕೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಸ್ವಾಮಿಗೆ ಫೆ. 19 ರಿಂದ 26ರ ವರೆಗೆ ಮಹಾಶಿವರಾತ್ರಿ ಉತ್ಸವ ಹಾಗೂ ಪ್ರತಿ ವರ್ಷದಂತೆ ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ಫೆ. 19 ರಂದು ಬೆಳಗ್ಗೆ ಜಾತ್ರಾ ಮಹೋತ್ಸವದ ಪ್ರಾರಂಭ ಸೂಚಕವಾಗಿ ಗಂಟೆ 11.42 ಕ್ಕೆ ಧ್ವಜಾರೋಹಣ ನೆರವೇರಲಿದೆ. ಫೆ. 23 ರಂದು ಬೆಳಿಗ್ಗೆ ಗಂಟೆ 8.15ಕ್ಕೆ ಶಿವನಿಗೆ ಪ್ರಿಯವಾದ ಮಹಾರುದ್ರ ಹೋಮ, ಚಮಕ, ಲಘುನ್ಯಾಸ ಮತ್ತು ಗಣಹೋಮಗಳು ಜರುಗಲಿದೆ.
ಇನ್ನು ಫೆ. 24 ರಂದು ಬೆಳಗ್ಗೆ ಗಂಟೆ 11ಕ್ಕೆ ಅಭಿಷೇಕ ಪ್ರಿಯನಾದ ಈಶ್ವರನಿಗೆ ಮಹಾರುದ್ರಾಭಿಷೇಕ, ಶತ ಸೀಯಾಳಭೀಷೇಕ ನಡೆಯಲಿದೆ. ರಾತ್ರಿ 8ಕ್ಕೆ ರಥೋತ್ಸವವಿದ್ದು, ರಾತ್ರಿ 10ಕ್ಕೆ ವಿಷ್ಣು ಬಲಿ ಉತ್ಸವ ಮತ್ತು ರಥೋತ್ಸವ ರಾತ್ರಿ 1ಕ್ಕೆ ಶಿವಬಲಿ ಹಾಗೂ ಮಹಾಶಿವರಾತ್ರಿ ಜಾಗರಣೆ ಬಲಿ, ಕಟ್ಟೆ ಪೂಜೆ, ಕೆರೆದೀಪ, ಮಂಟಪ ಪೂಜೆ ಜರುಗಲಿದೆ. ಅಂದು ಎಲ್ಲರೂ ಜಾಗರಣೆ ಮಾಡಲಿದ್ದಾರೆ.
ಫೆ. 25 ರಂದು ಮಧ್ಯಾಹ್ನ 1ಕ್ಕೆ ಭಕ್ತಾದಿಗಳಿಗೆ ಮಹಾ ಅನ್ನ ಸಂತರ್ಪಣೆ, ರಾತ್ರಿ ಗಂಟೆ 2 ರಿಂದ ಭೂತ ಬಲಿ, ಬಲಿಪೂಜೆ, ಅವಭೃತ ಸ್ನಾನ (ಓಕುಳಿ) ನಡೆಯಲಿದೆ. ಫೆ. 26 ರಂದು ಬೆಳಗ್ಗೆ 11 ಕ್ಕೆ ಧ್ವಜ ಅವರೋಹಣ ಹಾಗೂ ರಾತ್ರಿ ಗಂಟೆ 8 ಕ್ಕೆ ಗುರು ಪೂಜೆ ಜರುಗಲಿದೆ.