ಉಳ್ಳಾಲದಲ್ಲಿ ಬಿಜೆಪಿ ಸಭೆಯಲ್ಲಿ ಭಾಗವಹಿಸಿದ ಉಸ್ತಾದರಿಗೆ ಜೀವಬೆದರಿಕೆ
ಮಂಗಳೂರು, ಆಗಸ್ಟ್ 11: ಬಿಜೆಪಿ ಸಭೆಯಲ್ಲಿ ಮಾತನಾಡಿದ ಉಸ್ತಾದರಿಗೆ ದೂರವಾಣಿ ಕರೆ ಮಾಡಿ ಜೀವಬೆದರಿಕೆ ಹಾಕಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಿನ್ನೆ ಬಿಜೆಪಿ ಮುಸ್ಲಿಂ ಧಾರ್ಮಿಕ ಮುಖಂಡರುಗಳ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಉಸ್ತಾದರೋರ್ವರಿಗೆ ಇಬ್ಬರು ಅಪರಿಚಿತರು ದೂರವಾಣಿ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ.
ಬೋಳಿಯಾರು ಅಮರ್ ದೀಪ ಸಭಾಂಗಣದಲ್ಲಿ ನಿನ್ನೆ ನಡೆದ ಬಿಜೆಪಿ ಧಾರ್ಮಿಕ ಮುಖಂಡರುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹಿನ್ನೆಲೆಯಲ್ಲಿ ಉಸ್ತಾದರಿಗೆ ಬೆದರಿಕೆ ಕರೆಗಳು ಬಂದಿವೆ. ಬೆಳ್ಮ ಕಲ್ಪಾದೆ ಮತ್ತು ತಲಪಾಡಿ ಮದರಸ ಶಿಕ್ಷಕನಾಗಿರುವ ಎ.ಬಿ ಹನೀಫ್ ನಿಝಾಮಿ ಎಂಬವರಿಗೆ ಜೀವಬೆದರಿಕೆ ಒಡ್ಡಿರುವ ಎರಡು ದೂರವಾಣಿ ಕರೆಗಳು ವಿದೇಶದಿಂದ ಬಂದಿದೆ ಎನ್ನಲಾಗಿದೆ. ಒಂದು ಇಂಟರ್ನೆಟ್ ಕರೆಯಾಗಿದ್ದರೆ ಇನ್ನೊಂದು ಮೊಬೈಲ್ ನಿಂದ ಬೆದರಿಕೆ ಕರೆ ಬಂದಿದೆ.
ಈ ಕುರಿತು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕ್ಷೇತ್ರ ಅಧ್ಯಕ್ಷ ಅಶ್ರಫ್ ಹರೇಕಳ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಸ್ಗರ್ ಮತ್ತು ಪಂಚಾಯತ್ ಸದಸ್ಯ ರಿಯಾಝ್ ಬೋಳಿಯಾರ್ ಅವರ ನಿಯೋಗ ಕೊಣಾಜೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.